ಮಂಡ್ಯ; ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್ಶಿಪ್ ಆರಂಭ
ಮಂಡ್ಯ, ಆಗಸ್ಟ್ 8: ಮಂಡ್ಯದಲ್ಲಿ ರಾಷ್ಟ್ರಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್ಶಿಪ್ಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಚಾಲನೆ ನೀಡಿದರು.
ಕೆಆರ್ಎಸ್ ಹಿನ್ನೀರಿನಲ್ಲಿ ಆಗಸ್ಟ್ 13ರವರೆಗೆ ಮಂಡ್ಯ ಜಿಲ್ಲಾಡಳಿತದ ಸಹಕಾರದೊಂದಿಗೆ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್(MEG) ಮತ್ತು ಜನರಲ್ ತಿಮ್ಮಯ್ಯ ರಾಷ್ಡ್ರೀಯ ಸಾಹಸ ಅಕಾಡೆಮಿ (GETHNAA) ಸಹಾಭಾಗಿತ್ವದಲ್ಲಿ ಸೈಲಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ.
ಮಂಡ್ಯದ ಮಳೆ: ಅಪಾಯದ ಅಂಚಿನಲ್ಲಿ ಬದರೀನಾರಾಯಣ ದೇಗುಲ
"ದೇಶದ ವಿವಿಧೆಡೆಯಿಂದ 120ಕ್ಕೂ ಹೆಚ್ಚು ಸೈಲರ್ಸ್ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಯುವ ಸೈಲರ್ಸ್ಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ತಮ್ಮ ಪ್ರತಿಭೆಯನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಉತ್ತಮ ವೇದಿಕೆ ಆಗಿದೆ," ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಕ್ರೀಡಾ ಇಲಾಖೆಯಿಂದ 25 ಲಕ್ಷ ಅನುದಾನ: "ನಾನು ಕ್ರೀಡಾ ಸಚಿವನಾಗಿ, ನಮ್ಮ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನನ್ನ ಭಾಗ್ಯ. ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 25 ಲಕ್ಷ ರೂಪಾಯಿ ಅನುದಾನ ನೀಡುವ ಮೂಲಕ ಸೈಲಿಂಗ್ ಚಾಂಪಿಯನ್ ಶಿಪ್ಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ," ಎಂದರು.
"ಅಲ್ಲದೇ ಈ ಸೈಲಿಂಗ್ ಸ್ಪರ್ಧೆ ಆಯೋಜಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ಭಾಗವನ್ನು ಟೂರಿಸಂ ಹಬ್ ಮಾಡಬೇಕು ಎಂಬ ಕನಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಶಕ್ತಿಯನ್ನು ತುಂಬಲಾಗುವುದು" ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸೈಲಿಂಗ್ ಚಾಂಪಿಯನ್ ಶಿಪ್: "ಕೆಆರ್ಎಸ್ ಹಿನ್ನೀರಿನಲ್ಲಿ ಆಯೋಜಿಸಿದ ಮಲ್ಟಿಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋಡ್೯ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ಮುಂದಿನ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವುದು" ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್ ಬೆಂಗಳೂರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾಂಪಿಯನ್ಶಿಪ್ನ ಮೂಲಕ ಉದ್ಯೋಗ ಸೃಷ್ಟಿ: "ಕ್ರೀಡಾ ಸಚಿವರು ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ದೇಶದ ವಿವಿಧ ಭಾಗಗಳಿಂದ 120ಕ್ಕಿಂತ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದು, ಕಳೆದ ವರ್ಷ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ 4 ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಈ ಚಾಂಪಿಯನ್ ಶಿಪ್ ಮೂಲಕ ಉದ್ಯೋಗ ಸೃಷ್ಟಿಯೂ ಸಹ ಆಗುತ್ತದೆ" ಎಂದು ಹೇಳಿದರು.
"ಪ್ರತಿವರ್ಷ ಚಾಂಪಿಯನ್ಶಿಪ್ ನಡೆಸುವುದರಿಂದ ಈ ಭಾಗದ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಈ ಕ್ರೀಡೆಗೆ ಉತ್ತೇಜನ ನೀಡಲು ಬೇಕಿರುವ ವ್ಯವಸ್ಥೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಲಾಗುವುದು," ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.