ಕುಸ್ತಿಪಟು ಸುಶೀಲ್ ಕುಮಾರ್ ನ್ಯಾಯಾಂಗ ಬಂಧನ ಜೂನ್ 25ರವರೆಗೆ ವಿಸ್ತರಣೆ
ನವದೆಹಲಿ, ಜೂನ್ 11: ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಲಾಗಿದೆ. ದೆಹಲಿ ಕೋರ್ಟ್ ಈ ಬಗ್ಗೆ ಆದೇಶವನ್ನು ನೀಡಿದ್ದು ಜೂನ್ 25ರ ವರೆಗೆ ನ್ಯಾಯಾಂಗ ಬಂಧನ ಮುಂದುವರಿಸಿದೆ.
ಯುವ ರೆಸ್ಲರ್ ಸಾಗರ್ ರಾಣಾ ಧಂಕರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಶೀಲ್ ಕುಮಾರ್ ಜೂನ್ 2 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅದಕ್ಕೂ ಮುನ್ನ 10 ದಿನಗಳ ಕಾಲ ದೆಹಲಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ಪ್ರಕರಣದ ವಿಚಾರಣೆಯನ್ನು ನಡೆಸಿದ್ದರು. ಇದೀಗ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆಯಾಗಿದೆ.
ರೆಸ್ಲರ್ ಕೊಲೆ ಪ್ರಕರಣ: ಸುಶೀಲ್ ಕುಮಾರ್ ಮನವಿಯನ್ನು ತಿರಸ್ಕರಿಸಿದ ಕೋರ್ಟ್
ಈ ಕೊಲೆಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ಇಂದು ನಡೆದಿದ್ದು ಪ್ರಕರಣದ 10ನೇ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುಶೀಲ್ ಕುಮಾರ್ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈತ ಕೂಡ ಕುಸ್ತಿಪಟುವಾಗಿದ್ದು ಸುಶೀಲ್ ಕುಮಾರ್ಗೆ ಆಪ್ತನಾಗಿದ್ದ. ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ಕುಮಾರ್ ಸೂಚನೆಯ ಮೇಲೆ ಸಾಗರ್ ರಾಣಾ ಹಾಗೂ ಆತನ ಸ್ನೇಹಿತರನ್ನು ಥಳಿಸಿರುವುದಾಗಿ ಆರೋಪಿ ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಇನ್ನು ಆರೋಪಿ ಸುಶೀಲ್ ಕುಮಾರ್ ವಿಚಾರಣೆಯ ಸಂದರ್ಭದಲ್ಲಿ ಸಾಗರ್ ರಾಣಾನನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿಕೆಯನ್ನು ನೀಡಿರುವುದು ತಿಳಿದು ಬಂದಿದೆ. ತನ್ನನ್ನು ದುರ್ಬಲ ಎಂದು ಪರಿಗಣಿಸಿ ತನ್ನೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ಸಾಗರ್ ರಾಣಾ ಹಾಗೂ ಆತನ ಸ್ನೇಹಿತರಿಗೆ ಪಾಠವನ್ನು ಕಲಿಸುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ. ದೆಹಲಿಯ ಮಾಡೆಲ್ ಟೌನ್ ಪ್ರದೇಶದ ಸುಶೀಲ್ ಕುಮಾರ್ ಅವರಿಗೆ ಸೇರಿದ ಫ್ಲ್ಯಾಟ್ ವಿಚಾರವಾಗಿ ಸುಶೀಲ್ ಕುಮಾರ್ ಮತ್ತು ಸಾಗರ್ ರಾಣಾ ನಡುವೆ ಭಿನ್ನಾಭಿಪ್ರಾಯವಿತ್ತು.
ಮೇ 4ರಂದು ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಹತ್ಯೆ ನಡೆದಿತ್ತು. ಘಟನೆ ನಡೆದ ರಾತ್ರಿ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು. ನಂತರ ಮೇ 23 ರ ಬೆಳಿಗ್ಗೆ ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ನಂತರ ದೆಹಲಿ ಪೊಲೀಸರಿಂದ ಹತ್ತು ದಿನಗಳ ಕಾಲ ವಿಚಾರಣೆ ನಡೆದಿದ್ದು ನಂತರ ಜೂನ್ 2ರಂದು ದೆಹಲಿ ಜಿಲ್ಲಾ ನ್ಯಾಯಾಲಯ ಸುಶೀಲ್ ಕುಮಾರ್ಗೆ 9 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಈಗ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆಯಾಗಿದೆ.