41 ಬಾರಿಯ ಚಾಂಪಿಯನ್ ಮುಂಬೈ ಮಣಿಸಿ ಚೊಚ್ಚಲ ರಣಜಿ ಗೆದ್ದ ಮಧ್ಯ ಪ್ರದೇಶ
ಬೆಂಗಳೂರು, ಜೂನ್ 26: ಮಧ್ಯ ಪ್ರದೇಶ ರಣಜಿ ತಂಡ ಭಾನುವಾರ ಇತಿಹಾಸ ಬರೆದಿದೆ. ಆದಿತ್ಯ ಶ್ರೀನಿವಾಸ್ ನೇತೃತ್ವ ತಂಡ 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ರಣಜಿ ಇತಿಹಾಸದ ಚೊಚ್ಚಲ ಟ್ರೋಪಿಯನ್ನು ಎತ್ತಿ ಹಿಡಿದಿದೆ.
1998-99ರ ನಂತರ ಮಧ್ಯ ಪ್ರದೇಶ ತಂಡ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿತ್ತು. ಅಂದು ಕರ್ನಾಟಕ ವಿರುದ್ಧ 96 ರನ್ಗಳಿಂದ ಇದೇ ಸ್ಟೇಡಿಯಂನಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು. ಅಂದು ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದ ಚಂದ್ರಕಾಂತ್ ಪಂಡಿತ್ ಇಂದು ತಂಡದಲ್ಲಿ ಕೋಚ್ ಆಗಿ 23 ವರ್ಷಗಳ ಬಳಿಕ ಚಾಂಪಿಯನ್ ಆಗಲು ನೆರವಾಗಿದ್ದಾರೆ. ತಮ್ಮಿಂದ ಮಿಸ್ ಆಗಿದ್ದ ಟ್ರೋಫಿಯನ್ನು ತಮ್ಮ ಶಿಷ್ಯರಿಂದ ಸಾಕಾರಗೊಳಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಫೈಟ್
ಮುಂಬೈ ನೀಡಿದ್ದ 108 ರನ್ ಗುರಿಯನ್ನು ಮಧ್ಯ ಪ್ರದೇಶ ತಂಡ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಹಿಮಾಂಶು ಮಂತ್ರಿ 37 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಶುಭಂ ಶರ್ಮಾ 37 ಮತ್ತು ಆರ್ಸಿಬಿ ಸ್ಟಾರ್ ರಜತ್ ಪಾಟೀದಾರ್ ಅಜೇಯ 31 ರನ್ಗಳಿಸಿ ಪ್ರಶಸ್ತಿ ಬರವನ್ನು ನೀಗಿಸಿಕೊಂಡರು.
|
ಬೃಹತ್ ಮುನ್ನಡೆಗೆ ನೆರವಾದ ಮೂರು ಶತಕ
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಸರ್ಫರಾಜ್ ಖಾನ್ (134) ಶತಕದ ನೆರವಿನಿಂದ 374 ರನ್ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಮಧ್ಯ ಪ್ರದೇಶ ತಂಡ ಯಶ್ ದುಭೆ (133), ಶುಭಮ್ ಶರ್ಮಾ(116) ಮತ್ತು ರಜತ್ ಪಾಟೀದಾರ್(122)ಅವರ ಭರ್ಜರಿ ಶತಕಗಳ ನೆರವಿನಿಂದ 536 ರನ್ಗಳಿಸಿ 162 ರನ್ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
2ನೇ ಇನ್ನಿಂಗ್ಸ್ನಲ್ಲಿ ಮುಂಬೈ ಅಲ್ಪ ಮೊತ್ತ
162 ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಕುಮಾರ ಕಾರ್ತಿಕೇಯ ಸ್ಪಿನ್ ಮೋಡಿಗೆ ಸಿಲುಕಿ 269ರನ್ಗಳಿಗೆ ಆಲೌಟ್ ಆಯಿತು. ಪೃಥ್ವಿ ಶಾ 44, ಸರ್ಫರಾಜ್ ಖಾನ್ 45, ಸುವೇದ್ ಪಾರ್ಕರ್ 51 ರನ್ಗಳಿಸಿದ್ದರು. ಮಧ್ಯ ಪ್ರದೇಶದ ಪರ ಕಾರ್ತಿಕೇಯ 98ಕ್ಕೆ 4,ಜಿ ಯಾದವ್ 43ಕ್ಕೆ 2 ಮತ್ತು ಪಾರ್ಥ ಸಹನಿ 53ಕ್ಕೆ 2 ವಿಕೆಟ್ ಪಡೆದು ಅಲ್ಪಮೊತ್ತಕ್ಕೆ ಮುಂಬೈ ತಂಡವನ್ನು ನಿಯಂತ್ರಿಸಿದರು. ನಂತರ 108ರನ್ಗಳ ಗುರಿಯನ್ನು ಬೆನ್ನಟ್ಟಿದ ಮಧ್ಯ ಪ್ರದೇಶ ತಂಡ 4 ವಿಕೆಟ್ ಕಳೆದುಕೊಂಡಯ ಗುರಿ ತಲುಪಿತು.
ಟೂರ್ನಿಯುದ್ದಕ್ಕೂ ಮಿಂಚಿದ ಬ್ಯಾಟರ್ಸ್
ಕಳೆದ ಮೂರು ಆವೃತ್ತಿಗಳಲ್ಲಿ ಆರ್ಸಿಬಿಯಲ್ಲಿ ಗುರುತಿಸಿಕೊಂಡಿರುವ ರಜತ್ ಪಾಟೀದಾರ್ ಇಡೀ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ಬ್ಯಾಟಿಂಗ್ ಶಕ್ತಿಯಾಗಿ ನಿಂತಿದ್ದರು. ಅವರು 6 ಪಂದ್ಯಗಳಿಂದ 2 ಶತಕ ಮತ್ತು 5 ಅರ್ಧಶತಕಗಳಿಂದ 658 ರನ್ಗಳಿಸಿದ್ದರು. ಇವರಿಗೆ ಸಾಥ್ ಯಶ್ ದುಬೆ 6 ಪಂದ್ಯಗಳಿಂದ 2 ಶತಕಗಳ ಸಹಿತ 614 ರನ್ ಹಾಗೂ ಶುಭಮ್ ಶರ್ಮಾ 6 ಪಂದ್ಯಗಳಿಂದ 4 ಶತಕಗಳ ಸಹಿತ 608 ರನ್ಗಳಿಸಿದ್ದರು. ಮುಂಬೈ ತಂಡದ ಸರ್ಫರಾಜ್ ಖಾನ್ 6 ಪಂದ್ಯಗಳಿಂದ 982 ರನ್ಗಳಿಸಿ ಟೂರ್ನಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ಕಾರ್ತಿಕೇಯ, ಗೌರವ್ ಬೌಲಿಂಗ್ ನೆರವು
ಎಡಗೈ ಸ್ಪಿನ್ನರ್ ಕುಮಾರ ಕಾರ್ತಿಕೇಯ ಟೂರ್ನಿಯಲ್ಲಿ 32 ವಿಕೆಟ್ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡರು. ಕಾರ್ತಿಕೇಯ ಫೈನಲ್ ಪಂದ್ಯದಲ್ಲೂ 5 ವಿಕೆಟ್ ಪಡೆದು ತಂಡಕ್ಕೆ ಪ್ರಶಸ್ತಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ವೇಗಿ ಗೌರವ್ ಯಾದವ್ 5 ಪಂದ್ಯಗಳನ್ನಾಡಿ 24 ವಿಕೆಟ್ ಪಡೆದು ಕಾರ್ತಿಕೇಯಗೆ ಟೂರ್ನಿಯುದ್ದಕ್ಕೂ ಉತ್ತಮ ಬೆಂಬಲ ನೀಡಿದರು.