ಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿ: ಅದಕ್ಕೆ ಕಾರಣ ಹತ್ತು ಹಲವು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬರೀ ಕ್ರಿಕೆಟ್ ಕ್ರೀಡಾಕೂಟವಾಗಿ ಗುರುತಿಸಿಕೊಂಡಿದೆಯಾ? ಪ್ರಪಂಚದ ಈ ಶ್ರೀಮಂತ ಕ್ರೀಡಾಕೂಟದ ಹಿಂದೆ, ಮುಂದೆ ಸುತ್ತಮುತ್ತ ನಡೆಯುವ ವಾಣಿಜ್ಯ ಚಟುವಟಿಕೆಗಳು ಒಂದಾ.. ಎರಡಾ.. ಹಾಗಾಗಿ ಐಪಿಎಲ್ ಎನ್ನುವುದನ್ನು ಒಂದು ಇವೆಂಟ್ ಆಗಿ ಗುರುತಿಸಿಕೊಳ್ಳಬಹುದು.
ಕೋವಿಡ್ನಿಂದಾಗಿ ಹಲವು ನಿರ್ಬಂಧಗಳ ನಡುವೆ ಈ ಬಾರಿಯ ಐಪಿಎಲ್ ಟೂರ್ನಿಗೆ ಮುಹೂರ್ತ ನಿಗದಿಯಾಗಿದೆ. ಸ್ಥಳವೂ ಮುಂಬೈ ಮತ್ತು ಪುಣೆ ಎಂದು ಗುರುತಿಸಲ್ಪಟ್ಟಿದೆ. ಇದರ ಜೊತೆಗೆ, ಅಹಮದಾಬಾದ್ ಮತ್ತು ಬೆಂಗಳೂರು ಸೇರ್ಪಡೆಯಾಗಬಹುದು ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.
IPL Auction 2022 ಮೆಗಾ ಹರಾಜು: ಕ್ರಿಕೆಟ್ ಪ್ರೇಮಿಗಳು ತಿಳಿಯಬೇಕಾದ್ದೇನು?
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ, ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಶನ್) ಮನವಿ ಕೊಟ್ಟರೆ ಪರಿಶೀಲಿಸಲು ಸಿದ್ದ ಎಂದು ಹೇಳಿದ್ದರು. ಇದಕ್ಕೆ ಕರ್ನಾಟಕ ಸರಕಾರದ ಸಮ್ಮತಿಯೂ ಬೇಕು ಎಂದಿದ್ದರು.
ಸುಮಾರು ನಲವತ್ತು ದಿನಗಳ ಕಾಲ ನಡೆಯುವ ವಿಜೃಂಭಣೆಯ ಇವೆಂಟ್ ಆಯೋಜಿಸಲು ಯಾವ ಅಸೋಶಿಯೇಶನ್ ಹಿಂದೇಟು ಹಾಕದು. ಕಾರಣ, ಐಪಿಎಲ್ ಅಂದರೆ ಹಣ, ಹಣ ಅಂದರೆ ಐಪಿಎಲ್. ಕ್ರೀಡಾಪಟುಗಳಿಗೂ ಹಣ, ಆಯೋಜಿಸುವವರಿಗೂ, ಇದರ ಸುತ್ತಮುತ್ತಲ ವ್ಯವಹಾರದಲ್ಲಿ ಕಾಂಚಾಣದೇ ಕಾರುಬಾರು.
ಕೆಎಸ್ಸಿಎ, ಕರ್ನಾಟಕ ಸರಕಾರ ಬಿಸಿಸಿಐಗೆ ಒತ್ತಡವನ್ನು ತರಬೇಕು
ಒಂದು ವೇಳೆ ಬಿಸಿಸಿಐ, ಬೆಂಗಳೂರಿನಲ್ಲಿ ಐಪಿಎಲ್ ಆಡಿಸಲು ಹಿಂದೇಟು ಹಾಕಿದರೂ, ಮನೋರಂಜನೆಗೆ ಹೆಸರಾದ ಈ ಕ್ರಿಕೆಟ್ ಕೂಟ ಬೆಂಗಳೂರಿನಲ್ಲಿ ನಡೆಯಬೇಕಿದೆ. ಯಾಕೆಂದರೆ, ಇದರ ಜೊತೆಜೊತೆಗೆ ನಡೆಯುವ ಇತರ ಚಟುವಟಿಕೆಗಳು. ಕೊರೊನಾದಿಂದಾಗಿ ನಷ್ಟವನ್ನು ಅನುಭವಿಸುತ್ತಿರುವ ಹಲವು ಉದ್ಯಮಗಳಿಗೆ ಐಪಿಎಲ್ ಸಂಜೀವಿನಿಯಾಗಬಲ್ಲದು. ಇದರ ಜೊತೆಗೆ, ರಾಜ್ಯ ಸರಕಾರದ ಬೊಕ್ಕಸವೂ ಈ ಚಟುವಟಿಕೆಗಳ ಮೂಲಕ ತುಂಬಲು ಸಾಧ್ಯವಾಗುತ್ತದೆ. ಹಾಗಾಗಿ, ಬರೀ ಕೆಎಸ್ಸಿಎ ಮಾತ್ರವಲ್ಲದೇ ಕರ್ನಾಟಕ ಸರಕಾರವೂ ಬಿಸಿಸಿಐಗೆ ಒತ್ತಡವನ್ನು ತರಬೇಕು.
ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರ, ಹೊಟೇಲ್ ಉದ್ಯಮ
ಸಾರಿಗೆ, ಸೋಪಿಂಗ್, ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರ, ಹೊಟೇಲ್ ಉದ್ಯಮ, ಟ್ರಾವೆಲ್ಸ್, ಯುವ ಸ್ಪೋರ್ಟ್ಸ್ ತರಬೇತುದಾರರಿಗೆ, ಜಾಹೀರಾತು ಸಂಸ್ಥೆಗಳಿಗೆ, ಮನೋರಂಜನೆಯ ಸಂಸ್ಥೆಗಳು, ಪ್ರಿಂಟಿಂಗ್, ಡಿಸೈನ್, ಲಿಕ್ಕರ್ ಸೇರಿದಂತೆ ಹಲವು ಉದ್ಯಮಗಳು ಈ ಕ್ರೀಡಾಕೂಟದ ಜೊತೆಗೆ ತುಳುಕನ್ನು ಹಾಕಿಕೊಂಡಿದೆ. ಇದಲ್ಲದೇ ಜನರ ಓಡಾಟ ಹೆಚ್ಚುವುದರಿಂದ ಹೆಚ್ಚಿನ ಹಣದ ಹೊಳೆ ಹರಿದು ನಗರದ ವ್ಯಾಪಾರಸ್ಥರಿಗೆ ಹೆಚ್ಚಿನ ಕೆಲಸವೂ ಮತ್ತು ಹೆಚ್ಚು ಆದಾಯವೂ ಸಿಕ್ಕಂತಾಗುತ್ತದೆ. ಮಹಾರಾಷ್ಟ್ರದ ಸಚಿವ ಮತ್ತು ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ಬಿಸಿಸಿಐ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ಕ್ರೀಡಾಕೂಟ ಆಯೋಜಿಸುವಂತೆ ಒತ್ತಡವನ್ನು ಹೇರುತ್ತಿದ್ದಾರೆ. ಇದೇ ರೀತಿ ಕೆಲಸವನ್ನು ಕರ್ನಾಟಕ ಸರಕಾರವೂ ಮಾಡಬೇಕಿದೆ.
ಮರ್ಮೈಡ್ ಡಿಜಿಟಲ್ ಪ್ರೈ.ಲಿಮಿಟೆಡ್ ಸಂಸ್ಥೆಯ ಸೀನಿಯರ್ ಕೀ ಅಕೌಂಟ್ ಮ್ಯಾನೇಜರ್ ಬಾಲಚಂದ್ರ ಭಟ್
"ಪ್ರತಿಯೊಂದು ತಂಡ ಮತ್ತು ಸ್ಟೇಡಿಯಂ ತನ್ನದೇ ಆದ ಬ್ರಾಂಡ್ ಅನ್ನು ಬಳಸಿಕೊಳ್ಳುತ್ತದೆ. ಐಪಿಎಲ್ ಕ್ರೀಡಾಕೂಟ ಬೆಂಗಳೂರಿನಲ್ಲಿ ಆಯೋಜಿಸಿದರೆ ಪ್ರಿಂಟಿಂಗ್, ಬ್ರ್ಯಾಂಡ್ ಬಿಲ್ಡಿಂಗ್, ಸ್ಟೇಡಿಯಂ ಬ್ಯಾನರ್, ಕುರ್ಚಿಯ ಮೇಲೆ ಪ್ರಿಂಟಿಂಗ್, ಟೀಶರ್ಟ್ ಸೇರಿದಂತೆ ಕೋಟ್ಯಾಂತರ ರೂಪಾಯಿ ವ್ಯಾಪಾರ ನಡೆಯುತ್ತಿದೆ. ಕೋವಿಡ್ ನಿಂದಾಗಿ ಈಗಾಗಲೇ ನಮಗೆ ಬಹಳ ನಷ್ಟವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆಯಾಗಲಿ ಎನ್ನುವುದು ನಮ್ಮ ಆಶಯ"ಎಂದು ಮರ್ಮೈಡ್ ಡಿಜಿಟಲ್ ಪ್ರೈ.ಲಿಮಿಟೆಡ್ ಸಂಸ್ಥೆಯ ಸೀನಿಯರ್ ಕೀ ಅಕೌಂಟ್ ಮ್ಯಾನೇಜರ್ ಬಾಲಚಂದ್ರ ಭಟ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ
"ಈಗಾಗಲೇ ಕೊರೊನಾದಿಂದ ತಕ್ಕಮಟ್ಟಿಗೆ ಮುಕ್ತಿ ಹೊಂದಿ ಶಿವರಾತ್ರಿ ಹಬ್ಬದಲ್ಲಿ ಮಿಂದೆದ್ದ ನಾವು, ಕರ್ನಾಟಕದಲ್ಲಿ ಹೆಚ್ಚಿನ ಆಟಗಳನ್ನು ಆಡಿಸಲಿ ಎಂಬುವುದನ್ನು ಬಯಸುತ್ತೇವೆ. ಇದೊಂದು ಈವೆಂಟ್ ರೀತಿಯಲ್ಲಿ ನಡೆಯುವುದರಿಂದ ಇದಕ್ಕೆ ಹಲವು ಇತರ ಉದ್ಯಮಗಳೂ ಲಿಂಕ್ ಅನ್ನು ಹೊಂದಿದೆ. ನಮ್ಮ ಕರ್ನಾಟಕ ಸರ್ಕಾರ ಬಿಸಿಸಿಐ ಸಂಸ್ಥೆಯ ಜೊತೆಗೆ ಮಾತನಾಡಿ ಬೆಂಗಳೂರಿನಲ್ಲೂ ಪಂದ್ಯ ಆಡಿಸಲು ಒತ್ತಾಯ ಮಾಡಬೇಕಿದೆ" ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.
Recommended Video