ಮಹಾರಾಜ ಟಿ-20 ಕ್ರಿಕೆಟ್ ಟೂರ್ನಿ ಕಪ್ ಅನಾವರಣಗೊಳಿಸಿದ ಕಿಚ್ಚ ಸುದೀಪ್
ಮೈಸೂರು, ಆಗಸ್ಟ್, 04: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಕಪ್ ಅನ್ನು ಗುರುವಾರ ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿದರು. ಜೊತೆಗೆ ಪ್ರಶಸ್ತಿಗಾಗಿ ಕಾದಾಡುವ 6 ತಂಡಗಳ ನಾಯಕರ ಹೆಸರನ್ನು ಪ್ರಕಟಿಸಲಾಯಿತು.
ಆಗಸ್ಟ್ 7ರಿಂದ 26ರವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಕೊರೊನಾ ಕಾರಣದಿಂದ ಎರಡು ವರ್ಷ ಈ ಪಂದ್ಯಾವಳಿ ನಡೆದಿರಲಿಲ್ಲ. ಈ ಟೂರ್ನಿಗೆ ನಟ ಕಿಚ್ಚ ಸುದೀಪ್ ರಾಯಭಾರಿಯಾಗಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಹಾಗೂ ಮಂಗಳೂರು ಹೆಸರಿನಲ್ಲಿ 6 ತಂಡಗಳು ಕಾದಾಟಕ್ಕೆ ಸಜ್ಜಾಗಿವೆ.
ಆಗಸ್ಟ್ 7ರಂದು ಮೈಸೂರಿನ ಗ್ಲೇಡ್ಸ್ ಮೈದಾನದಲ್ಲಿ ಟೂರ್ನಿಗೆ ಚಾಲನೆ ಆಗಲಿದ್ದು, ಒಟ್ಟು 18 ಪಂದ್ಯಗಳು ಮೊದಲ ಹಂತದಲ್ಲಿ ನಡೆಯಲಿವೆ. ಬಳಿಕ ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಈ ಬಗ್ಗೆ ಮಾತನಾಡಿ, ಪ್ರಾಂಚೈಸಿಗಳ ಬದಲಿಗೆ ಪ್ರಾಯೋಜಕತ್ವದಡಿ ಟೂರ್ನಿ ಆಯೋಜಿಸಲಾಗುತ್ತಿದೆ. ಸ್ವತಃ ಕ್ರಿಕೆಟ್ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಸುದೀಪ್ ಅವರನ್ನು ಟೂರ್ನಿ ಬ್ರಾಂಡ್ ರಾಯಭಾರಿ ಎಂದು ಘೋಷಿಸಲು ಹೆಮ್ಮೆಆಗುತ್ತಿದೆ ಎಂದು ಹೇಳಿದರು.
ನಂತರ ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, "ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ. ಈ ಋತು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಟೈಟಲ್ ಪ್ರಾಯೋಜಕತ್ವ ವಹಿಸಲಿದೆ. 3 ವಾರಗಳ ಕಾಲ ನಡೆಯುವ ಟಿ-20 ಕ್ರಿಕೆಟ್ ಹಬ್ಬ ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರ ಆಗಲಿದೆ. ಹೆಚ್ಚಿನ ಪ್ರಮಾಣದ ಬಳಕೆಗಾಗಿ ಫ್ಯಾನ್ಕೋಡ್ ಆಪ್ನಲ್ಲಿಯೂ ವೀಕ್ಷಿಸಬಹುದು," ಎಂದರು.
ಕರ್ನಾಟಕ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಜೆ.ಸುಚಿತ್, ದೇವದತ್ ಪಡಿಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.