ಕೊಡಗಿನ ಕೆಸರುಗದ್ದೆ ಕ್ರೀಡಾಕೂಟಕ್ಕೆ ನೀವು ಬನ್ನಿ
ಮಡಿಕೇರಿ, ಜುಲೈ 10; ಕೊಡಗಿನ ಜನರೆಂದರೆ ಕ್ರೀಡಾಪ್ರೇಮಿಗಳು. ಇದಕ್ಕೆ ಸಾಕ್ಷಿ ಎಂಬಂತೆ ವರ್ಷ ಪೂರ್ತಿ ಒಂದಲ್ಲ ಒಂದು ರೀತಿಯ ಕ್ರೀಡಾ ಚಟುವಟಿಕೆಗಳು ಇಲ್ಲಿ ನಡೆಯುವುದನ್ನು ಕಾಣಬಹುದಾಗಿದೆ. ಅದರಲ್ಲೂ ಮಳೆಗಾಲದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲೆಡೆಯೂ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುತ್ತದೆ. ಆದರೆ ಮಳೆಗಾಲದಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಕ್ರೀಡೆಗಳನ್ನು ಆಯೋಜಿಸುವುದು ಅಷ್ಟು ಸುಲಭವಲ್ಲ.
ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ
ಆದರೆ ಕೊಡಗಿನಲ್ಲಿ ಎಲ್ಲವೂ ವಿಭಿನ್ನ. ಇಲ್ಲಿ ಎಡೆಬಿಡದೆ ಸುರಿಯುವ ಮಳೆಯಲ್ಲಿ, ಭತ್ತದ ಕೆಸರು ಗದ್ದೆಯನ್ನೇ ಮೈದಾನ ಮಾಡಿಕೊಂಡು ವಿವಿಧ ರೀತಿಯ ಕ್ರೀಡಾ ಕೂಟಗಳನ್ನು ನಡೆಸಿ ಸಂಭ್ರಮಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಪುರುಷರ ಹಾಗೂ ಮಹಿಳೆಯರ ಮುಕ್ತ ಓಟ, ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟ ನಡೆಯಲಿದೆ. ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದೊಂದಿಗೆ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟಕ್ಕೆ ತೆರೆಬೀಳಲಿದೆ.
ಕೊಡಗಿನಲ್ಲಿ ಚೇತರಿಕೆ ಕಂಡ ಕ್ರೀಡೆಗಳು
2018ರ ನಂತರ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಕಳೆದ ಕಳೆದ 5 ವರ್ಷಗಳ ಕಾಲ ಎಲ್ಲವೂ ನೆನೆಗುದಿಗೆ ಬಿದ್ದಿತ್ತು. ಆದರೆ ಪ್ರಸಕ್ತ ವರ್ಷದಿಂದ ಜಿಲ್ಲೆ ಚೇತರಿಕೆ ಕಂಡಿದ್ದು ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿವಿಧ ಕ್ರೀಡಾಕೂಟಗಳು ನಡೆದಿವೆ.
ವಿವಿಧ ಸಂಘಟನೆಗಳ ಸಹಕಾರ
ಇದೀಗ ಮಳೆಗಾಲದ ಕೆಸರು ಗದ್ದೆ ಕ್ರೀಡಾಕೂಟಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಸುರಿಯುವ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲು ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘಗಳು ಮುಂದಾಗಿವೆ.
ಕಗ್ಗೋಡ್ಲು ಕೆಸರುಗದ್ದೆ ಕ್ರೀಡಾಕೂಟ ಕೇಂದ್ರ ಬಿಂದು
ಹಾಗೆ ನೋಡಿದರೆ ಮಡಿಕೇರಿ ಸಮೀಪದ ಮೂರ್ನಾಡು ರಸ್ತೆಯಲ್ಲಿರುವ ಕಗ್ಗೋಡ್ಲು ಗ್ರಾಮದ ಭತ್ತದ ಬಯಲು ಕೆಸರುಗದ್ದೆ ಕ್ರೀಡಾಕೂಟಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹೀಗಾಗಿಯೇ ಕಳೆದ ಮೂವತ್ತು ವರ್ಷಗಳಿಂದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟವನ್ನು ಇಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಈ ಬಾರಿ ಅಂದರೆ 2022-23ನೇ ಸಾಲಿನ 30ನೇ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳನ್ನು ಜು.23ರಂದು ಕಗ್ಗೋಡ್ಲು ಗ್ರಾಮದ ಪಡನ್ನೋಳಂಡ ಬೋಪಣ್ಣ ಕುಶಾಲಪ್ಪ ಅವರ ಗದ್ದೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾ (ಮಡಿಕೇರಿ ಘಟಕ), ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘ ಸಾಥ್ ನೀಡುತ್ತಿದೆ.
ಏನೇನು ಸ್ಪರ್ಧೆಗಳು ನಡೆಯಲಿವೆ ಗೊತ್ತಾ?
ಜುಲೈ 23ರಂದು ಬೆಳಗ್ಗೆ 9.30 ರಿಂದ ಸ್ಪರ್ಧೆಗಳು ಆರಂಭವಾಗಲಿದ್ದು, ಸಂಜೆವರೆಗೂ ಕ್ರೀಡಾಕೂಟ ನಡೆಯಲಿದೆ. ಕ್ರೀಡಾ ಕೂಟಗಳ ಬಗ್ಗೆ ಹೇಳುವುದಾದರೆ ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ (9 ಜನರ ತಂಡ), ಸಾರ್ವಜನಿಕ ಪುರುಷರ ವಾಲಿಬಾಲ್ (4 ಜನರ ತಂಡ), ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್ (6 ಜನರ ತಂಡ), ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ಕೆಸರು ಗದ್ದೆ ಓಟದ ಸ್ಪರ್ಧೆ ನಡೆಯಲಿದ್ದು, ನಂತರ ಕಿರಿಯರ ಪಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50 ಮೀ. ಓಟ, ಹಿರಿಯರ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 100 ಮೀ. ಓಟ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ 200 ಮೀ. ಓಟ, ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 400ಮೀ. ಓಟ, ಪದವಿ ಕಾಲೇಜು ಬಾಲಕ, ಬಾಲಕಿಯರಿಗೆ 400 ಮೀ. ಓಟ, 40 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ 300 ಮೀ. ಓಟದ ಸ್ಪರ್ಧೆ ನಡೆಯಲಿದೆ.
ನಗದು ಹಾಗೂ ಪಾರಿತೋಷಕದ ಬಹುಮಾನ
ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸುವ ತಂಡಗಳಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು. ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪಾರಿತೋಷಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು.
ಕ್ರೀಡಾಕೂಟದಲ್ಲಿ ಸೋಲು-ಗೆಲುವಿಗಿಂತ ಸುರಿಯುವ ಮುಂಗಾರು ಮಳೆಯಲ್ಲಿ ಮಲೆನಾಡಿನ ಸುಂದರ ಪರಿಸರದಲ್ಲಿ ಆಡಿ ಕುಣಿದು ಖುಷಿಪಡುವುದೇ ಒಂಥರಾ ಮಜಾ ಆಗಿರುವುದರಿಂದ ಹೆಚ್ಚಿನ ಜನರು ಎಂಜಾಯ್ ಮಾಡಲೆಂದೇ ಇತ್ತ ಬರುವುದು ವಿಶೇಷವಾಗಿದೆ.
Recommended Video