ಆನ್ಲೈನ್ ಗೇಮಿಂಗ್ ನಿಷೇಧ ಆದೇಶಕ್ಕೆ ತಡೆ ಕೋರಿದ್ದ ಅರ್ಜಿ ವಜಾ
ಐಪಿಎಲ್ 2021 ಆರಂಭದ ಸಂದರ್ಭದಲ್ಲಿ ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ. ಆಪ್ ಆಧಾರಿತ ಜೂಜು ನಿಲ್ಲಿಸಬೇಕು ಎಂದು ಕೋರಿ ಕೇರಳದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಕೋರ್ಟ್ ನಿರ್ದೇಶನದಂತೆ ಪಿಣರಾಯಿ ಸರ್ಕಾರವು ನಿಷೇಧಿಸಿ ಆದೇಶ ನೀಡಿತ್ತು.
ಆದರೆ, ಕೆಲವು ಆನ್ಲೈನ್ ಗೇಮಿಂಗ್ ಕಂಪನಿಗಳು ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ಕೇರಳ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು. ಆದರೆ, ಫೆ.23ರ ಸರ್ಕಾರಿ ಆಧಿಸೂಚನೆಗೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ. ಈ ಬಗ್ಗೆ ಹೊಸ ಸರ್ಕಾರ ಮೇ 29ರೊಳಗೆ ತನ್ನ ನಿಲುವನ್ನು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಬೇಕಾಗುತ್ತದೆ.
ತ್ರಿಸ್ಸೂರ್ ಮೂಲದ ಪಾಲಿ ವರ್ಗೀಸ್ ಎಂಬುವರು ಆನ್ ಲೈನ್ ರಮ್ಮಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆ ನಡೆಸಿ, ಅನೇಕ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಕೇರಳ ಗೇಮಿಂಗ್ ಕಾಯ್ದೆ 1960 ಸೆಕ್ಷನ್ 14ರ ಅನ್ವಯ ಎಲ್ಲಾ ಬಗೆಯ ದುಡ್ಡು ಕಟ್ಟಿ ಆಡುವ ರಮ್ಮಿ ಗೇಮ್ ಮೇಲೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಆನ್ ಲೈನ್ ಗೇಮ್ ರಮ್ಮಿ ಇದಕ್ಕೆ ಸೇರ್ಪಡೆಗೊಂಡಿಲ್ಲ, ಕಾಯ್ದೆ ತಿದ್ದುಪಡಿ ಮಾಡಿ ರಮ್ಮಿ ನಿಷೇಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಕೊಹ್ಲಿ ಹಾಗೂ ತಮನ್ನಾ ಮೊಬೈಲ್ ಪ್ರೀಮಿಯರ್ ಲೀಗ್ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸುದೀಪ್, ಗಂಗೂಲಿ ಮೈ11 ಸರ್ಕಲ್ ಪರ ಪ್ರಚಾರ ಮಾಡಿದ್ದಾರೆ. ಎಂಪಿಎಲ್ ಸದ್ಯ ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಕೂಡಾ ಪಡೆದಿದೆ. ಫ್ಯಾಂಟಸಿ ಲೀಗ್ ಡ್ರೀಮ್11 ಸದ್ಯ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.
ಕಳೆದ ವರ್ಷ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ದುಡ್ಡು ಕಟ್ಟಿ ಆಡುವ ಎಲ್ಲಾ ಬಗೆಯ ಆನ್ಲೈನ್ ಗೇಮ್ ನಿಷೇಧಕ್ಕೆ ಅಲ್ಲಿನ ಸರ್ಕಾರಗಳು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.