ಕೊರೊನಾ ಸಂಕಷ್ಟ: ರಾಜ್ಯದ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ!
ಬೆಂಗಳೂರು, ಜೂ. 09: ಕೊರೊನಾ ವೈರಸ್ನಿಂದ ಎಲ್ಲ ರಂಗಗಳು ಸಂಕಷ್ಟಕ್ಕೀಡಾಗಿವೆ. ಕೊರೊನಾ ತಂದಿಟ್ಟಿದ್ದ ಕೊರನಾ ಸಂಕಷ್ಟದಿಂದ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಕೊಡುತ್ತಿದ್ದ ಐಪಿಎಲ್ ಪಂದ್ಯಾವಳಿಯನ್ನು ಕೂಡ ರದ್ದು ಮಾಡಲಾಗಿತ್ತು. ಇದೀಗ ಇಡೀ ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುವಂತೆ ಕಂಡು ಬರುತ್ತಿದೆ. ಆದರೆ ಮೂರನೇ ಅಲೆಯ ಕುರಿತು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ಕೋವಿಡ್ ಸಂಕಷ್ಟ ಕೊನೆಗಾಣುವಂತೆ ಕಂಡು ಬರುತ್ತಿಲ್ಲ. ಕೊರೊನಾ ವೈರಸ್ನಿಂದ ಕ್ರೀಡಾ ಪಟುಗಳಿಗೂ ತೊಂದರೆ ಆಗಿದೆ. ಇದೀಗ ರಾಜ್ಯದ ಎಲ್ಲ ಕ್ರೀಡಾ ಪಟುಗಳಿಗೆ ಸಹಿ ಸುದ್ದಿಯೊಂದನ್ನು ರಾಜ್ಯ ಸರ್ಕಾರ ಕೊಟ್ಟಿದೆ.
ರಾಜ್ಯದಲ್ಲಿ ಸುಮಾರು 10 ಸಾವಿರ ಕ್ರೀಡಾ ಪಟುಗಳಿದ್ದಾರೆ ಎಂಬ ಅಂದಾಜಿದೆ. ಈ ಎಲ್ಲರಿಗೂ ಆತ್ಮವಿಶ್ವಾಸ ತುಂಬುವುದು ಸೇರಿದಂತೆ ಅವರೆಲ್ಲರ ಆರೋಗ್ಯ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ಹೇಳಿರುವುದೇನು? ಮುಂದಿದೆ ಮಾಹಿತಿ!
ಕ್ರೀಡಾ ಪಟುಗಳಿಗೆ ಸರ್ಕಾರದ ಕೊಡುಗೆ
ರಾಜ್ಯದ ಎಲ್ಲ ಕ್ರೀಡಾಪಟುಗಳಿಗೆ ಉಚಿತವಾಗಿ ಕೋವಿಡ್-19ನ ಮೊದಲ ಹಂತದ ಲಸಿಕೆಯನ್ನು ಕೊಡಲು ರಾಜ್ಯ ಕ್ರೀಡಾ ಇಲಾಖೆ ತೀರ್ಮಾನಿಸಿದೆ. ಬಿಬಿಎಂಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಈ ಲಸಿಕಾ ಅಭಿಯಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಚಾಲನೆ ನೀಡಲಿದ್ದಾರೆ.
ನಾಳೆಯಿಂದ ಲಸಿಕೆ ಅಭಿಯಾನ
ಈಗಾಗಲೇ ತೀರ್ಮಾನ ಮಾಡಿದಂತೆ ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆದ್ಯತಾ ಗುಂಪಿಗೆ ಸೇರಿಸಿದೆ. ನೋಂದಣಿ ಮಾಡಿಕೊಂಡ ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ಕೊಡಲಾಗುತ್ತಿದೆ. ಈಗಾಗಲೆ 2200 ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆಂದು ಇಲಾಖೆ ಮಾಹಿತಿ ಕೊಟ್ಟಿದೆ. ನೋಂದಾಯಿಸಿಕೊಂಡಿರುವ ಎಲ್ಲ ಕ್ರೀಡಾಪಟುಗಳಿಗೆ ನಾಳೆ ಜೂ. 10 ಮತ್ತು ಜೂ. 11 ನೇ ತಾರೀಖಿನಂದು ಲಸಿಕೆ ನೀಡಲಾಗುತ್ತಿದೆ.
ಈ ವರೆಗೂ ಹೆಸರನ್ನು ನೋಂದಾಯಿಸಿಕೊಳ್ಳದ ಕ್ರೀಡಾಪಟುಗಳು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಕೋವಿಡ್ ತಡೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಲಸಿಕೆ ಅಭಿಯಾನಕ್ಕೆ ಜೂನ್ 10, 2021 ರಂದು ಬೆಳಿಗ್ಗೆ 10.30 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಲಸಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ನಾಳೆ ಯಾವ ಕ್ರೀಡಾಪಟುಗಳಿಗೆ ಲಸಿಕೆ?
ಅಭಿಯಾನದ ಆರಂಭದ ದಿನ ಅಂದರೆ ನಾಳೆ ಜೂ. 10, 2021 ಗುರುವಾರದಂದು ಬಾಸ್ಕೆಟ್ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಸ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಲಸಿಕೆ ಕೊಡಲಾಗುತ್ತಿದೆ.
ಮರುದಿನ ಅಂದರೆ ಜೂನ್ 11, 2021 ಶುಕ್ರವಾರದಂದು ವುಶು, ಶೂಟಿಂಗ್, ಹ್ಯಾಂಡ್ಬಾಲ್, ಫುಟ್ಬಾಲ್ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ವಾಲಿಬಾಲ್ ಮತ್ತು ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. "ರಾಜ್ಯಾಧ್ಯಂತ ಒಟ್ಟು 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ಹಾಕಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೆ ನೋಂದಣಿ ಮಾಡಿಸಿಕೊಂಡವರನ್ನು ಹೊರತುಪಡಿಸಿ ಉಳಿದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನವನ್ನು ಮುಂದುವರೆಸಿ ಮುಂದಿನ ದಿನಗಳಲ್ಲಿ ನೀಡಲು ತೀರ್ಮಾನ ಮಾಡಲಾಗಿದೆ"" ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.
ಕ್ರೀಡಾಪಟುಗಳ ರಕ್ಷಣೆ ಸರ್ಕಾರದ ಜವಾಬ್ದಾರಿ
""ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಹೆಮ್ಮೆ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ. ಹೀಗಾಗಿ ಕ್ರೀಡಾಪಟುಗಳಿಗಾಗಿಯೇ ಪ್ರತ್ಯೇಕವಾಗಿ ಲಸಿಕಾ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ಲಸಿಕೆ ಪಡೆದುಕೊಳ್ಳಬೇಕು. ಕೇವಲ ಎರಡು ದಿನ ಮಾತ್ರವಲ್ಲ, ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ನೀಡುವವರೆಗೆ ಈ ಅಭಿಯಾನ ನಡೆಯಲಿದೆ"" ಎಂದು ಸಚಿವ ಡಾ. ನಾರಾಯಣಗೌಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.