ತಂದೆ ಕನಸು ನನಸು ಮಾಡಿದ ಚೇತನ್ಗೆ ಸೆಹ್ವಾಗ್ ಸೆಲ್ಯೂಟ್
ಯುವ ಪ್ರತಿಭಾವಂತರಿಗೆ ವೇದಿಕೆ ಒದಗಿಸುವ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2021ರ ಅವೃತ್ತಿಯಲ್ಲಿ ಅನೇಕರು ಗಮನ ಸೆಳೆದಿದ್ದಾರೆ. ಈ ಪೈಕಿ ಯುವ ಪ್ರತಿಭೆ ಚೇತನ್ ಸಕಾರಿಯಾ ಮತ್ತೆ ಟ್ರೆಂಡ್ನಲ್ಲಿದ್ದಾರೆ.
ಚೆನ್ನೈನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಬೇಡಿಕೆ ಹುಟ್ಟು ಹಾಕಿದ್ದ ಚೇತನ್ ಸಕಾರಿಯಾ ಕೊನೆಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದರು. ತಮ್ಮ ಮೇಲಿಟ್ಟಿರುವ ನಂಬಿಕೆ ಹುಸಿಗೊಳಿಸದ ಚೇತನ್ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅವರು ಯುವ ವೇಗಿ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚೇತನ್ ಅವರ ಕುಟುಂಬದ ದುರಂತ ಘಟನೆಯನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಚೇತನ್ ತಂದೆ ಟೆಂಪೋ ಚಾಲಕರಾಗಿದ್ದರು
ಒಂದು ಕಾಲದಲ್ಲಿ ಚೇತನ್ ಸಕಾರಿಯಾ ಅವರ ತಂದೆ ಟೆಂಪೋ ಚಾಲಕರಾಗಿದ್ದರು. ತಮ್ಮ ಮಗ ಕ್ರಿಕೆಟ್ ಸ್ಟಾರ್ ಆಗಬೇಕು ಎಂದು ಕನಸು ಕಂಡಿದ್ದರು. 22 ವರ್ಷ ವಯಸ್ಸಿನ ಚೇತನ್ ಭರ್ಜರಿ 1.2 ಕೋಟಿ ರು ಗಳಿಗೆ ಮಾರಾಟವಾಗಿದ್ದಾರೆ. ಸೌರಾಷ್ಟ್ರ ಮೂಲದ ಎಡಗೈ ವೇಗದ ಬೌಲರ್ ಗೆ ಭರ್ಜರಿ ಮೊತ್ತ ನೀಡಿ ರಾಯಲ್ಸ್ ಖರೀದಿಸಿತ್ತು. ಈಗ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಮೊಟ್ಟಮೊದಲು ರಾಜ್ ಕೋಟ್ ಶಿಫ್ಟ್ ಆಗಿ ಸ್ವಂತ ಮನೆ ಖರೀದಿಸುವುದು ನನ್ನ ಮೊದಲ ಆದ್ಯತೆ ಎಂದಿದ್ದಾರೆ.
2021ರ ಜನವರಿಯಲ್ಲಿ ಚೇತನ್ ಅವರ ತಮ್ಮ ಆತ್ಮಹತ್ಯೆ
ಮನೆಯಲ್ಲಿ ಟಿವಿ ಕೂಡಾ ಇರದ ಬಡತನ ಪರಿಸ್ಥಿತಿಯಲ್ಲಿ ಚೇತನ್ ಅವರ ತಂದೆ ಗುಜರಾತಿನ ವರ್ತೇಜ್ ಎಂಬಲ್ಲಿ ಟೆಂಪೋ ಚಾಲನೆ ಮಾಡಿ ದುಡಿದು ಸಂಸಾರ ನಡೆಸಿದ್ದಾರೆ. ಸ್ನೇಹಿತರ ಮನೆಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಾ ಬೆಳೆದ ಚೇತನ್, 2021ರ ಜನವರಿಯಲ್ಲಿ ಚೇತನ್ ಅವರ ತಮ್ಮ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಚೇತನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದರು. ಚೇತನ್ ಅವರಿಗೆ ಈ ವಿಷಯ ತಿಳಿಸಿರಲಿಲ್ಲ. ನಂತರ ಈ ಬಗ್ಗೆ ತಿಳಿದು ಚೇತನ್ ತಮ್ಮ ಯಶಸ್ಸಿಗೆ ತಮ್ಮನ ಪಾಲು ಎಷ್ಟಿದೆ ಎಂಬುದನ್ನು ಎಲ್ಲೆಡೆ ಹೇಳಿಕೊಂಡರು.
ಮೊದಲ ಓವರ್ ಎಸೆಯುವ ಅವಕಾಶ
ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿ ಚೇತನ್ ಕಾರ್ಯ ನಿರ್ವಹಿಸಿದ್ದರು. ಸೈಮನ್ ಕಾಟಿಚ್ ಹಾಗೂ ಮೈಕ್ ಹೆಸ್ಸನ್ ಮಾರ್ಗದರ್ಶನ ಪಡೆದುಕೊಂಡಿದ್ದರು. ನಂತರ ಹರಾಜಿನಲ್ಲಿ ರಾಜಸ್ಥಾನ ಪಾಲಾಗಿದ್ದಲ್ಲದೆ, ಮೊದಲ ಓವರ್ ಎಸೆಯುವ ಅವಕಾಶವನ್ನು ಪಡೆದುಕೊಂಡರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ 31 ರನ್ನಿತ್ತು 3 ವಿಕೆಟ್ ಗಳಿಸಿ ತಮ್ಮ ಆಯ್ಕೆ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದರು.
|
ಚಿಕ್ಕ ವಯಸ್ಸಿನಲ್ಲೇ ಮನೆ ನಿರ್ವಹಣೆ ಹೊಣೆ
ತಂದೆಯ ಟೆಂಪೋ ಓಡದೆ ನಿಂತ ಸಂದರ್ಭದಲ್ಲೇ 17ರ ಹರೆಯದ ಚೇತನ್ ಗಾಯಗೊಂಡು ಕ್ರಿಕೆಟ್ ಮೈದಾನದಿಂದ ಹೊರಗುಳಿಯುವಂತಾಗುತ್ತದೆ. ಆದರೆ, ಮನೆ ನಿರ್ವಹಣೆಗಾಗಿ ಹಣ ಸಂಪಾದನೆ ಮಾಡಲು ಮಾರ್ಗ ತಿಳಿಯದಿದ್ದಾಗ, ಸೋದರ ಮಾವ ಚೇತನ್ ಕರೆದುಕೊಂಡು ಭಾವ್ ನಗರಕ್ಕೆ ಬರುತ್ತಾರೆ. ಅಲ್ಲಿ ಅಕೌಂಟ್ಸ್, ಅಂಗಡಿ ಲೆಕ್ಕಪತ್ರ, ವ್ಯಾಪಾರ ನೋಡಿಕೊಂಡು, ಆರೋಗ್ಯ ಸುಧಾರಿಸುತ್ತಿದ್ದಂತೆ ಮೈದಾನದಲ್ಲಿ ಪ್ರಾಕ್ಟೀಸ್ ಮಾಡತೊಡಗುತ್ತಾರೆ. ಯಾವುದೇ ಸಾಂಪ್ರದಾಯಿಕ ರೀತಿಯಲ್ಲಿ ತರಬೇತಿ ಪಡೆಯದಿದ್ದರೂ ಎಡಗೈ ವೇಗಿಯಾಗಿ ವೈರೆಟಿ ಎಸೆತ ಹಾಕುವ ಕಲೆ ಕರಗತ ಮಾಡಿಕೊಳ್ಳುತ್ತಾರೆ, ಇದರಿಂದ ಸೌರಾಷ್ಟ್ರದ ಅಂಡರ್ 19 ಟ್ರಯಲ್ಸ್ನಲ್ಲಿ ಆಯ್ಕೆಯಾಗಿದ್ದಲ್ಲದೆ ಮುಂದೆ ರಣಜಿ ತಂಡಕ್ಕೂ ಆಡುತ್ತಾರೆ.