ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್
ಬೆಂಗಳೂರು, ಏಪ್ರಿಲ್ 11: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ತಾಳ್ಮೆ ಕಳೆದು ಕೊಂಡು ''ನಾನು ಇಂದಿರಾನಗರದ ಗೂಂಡಾ'' ಎಂದು ಬ್ಯಾಟ್ ಹಿಡಿದು ಅಬ್ಬರಿಸುವ ಕ್ರೆಡ್ ಜಾಹೀರಾತು ಸದ್ಯ ಸಕತ್ ಟ್ರೆಂಡ್ನಲ್ಲಿದೆ.
ಈ ನಡುವೆ ರಿಯಲ್ ಲೈಫಲ್ಲಿ ದ್ರಾವಿಡ್ ಕೋಪಗೊಂಡಿದ್ದನ್ನು ಕಂಡವರು ಕಡಿಮೆ. ಆದರೆ, ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಧೋನಿ ಮೇಲೆ ಅಂದಿನ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಕೋಪಗೊಂಡಿದ್ದರು ಎಂದು ಒಂದು ಕಾಲದ ಸ್ಫೋಟಕ ಬ್ಯಾಟ್ಸ್ ಮನ್, ಹಾಲಿ ಕಾಮೆಂಟೇಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
''ಇಂದಿರಾನಗರದ ಗೂಂಡಾ'' ಎಂದು ಅರಚಿದ ದ್ರಾವಿಡ್ ನೋಡಿ ಫ್ಯಾನ್ಸ್ ಅಚ್ಚರಿ!
ಎಲ್ಲೆಡೆ ರಾಹುಲ್ ದ್ರಾವಿಡ್ ಕೆಮೆರಾ ಮುಂದೆ ಕೋಪ ತೋರಿಸಿದ್ದರ ಬಗ್ಗೆ ಮಾತನಾಡುತ್ತಿದ್ದರೆ, ಸೆಹ್ವಾಗ್ ಅವರು ನಿಜ ಜೀವನದಲ್ಲಿ ಕೋಪಗೊಂಡ ಪ್ರಸಂಗದ ಬಗ್ಗೆ ಹೇಳಿದ್ದಾರೆ.
2006ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4-1ರಲ್ಲಿ ಸರಣಿ ಗೆದ್ದಾಗ ಧೋನಿ ಹಾಗೂ ಯುವರಾಜ್ ಕೊಡುಗೆ ಹೆಚ್ಚಾಗಿತ್ತು. ಪಂದ್ಯ ಫಿನಿಷ್ ಮಾಡುವ ರೀತಿ ಬಗ್ಗೆ ಬಹುಶಃ ದ್ರಾವಿಡ್ ಅಂದು ನೀಡಿದ ಹಿತವಚನ ಮುಂದೆ ಧೋನಿಗೆ ನೆರವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಧೋನಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ರು
"ಆಗಿನ್ನು ಧೋನಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದರು. ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದಾಗ ಪಂದ್ಯವೊಂದರಲ್ಲಿ ಧೋನಿ ಕೆಟ್ಟ ಹೊಡೆತಕ್ಕೆ ಔಟಾಗಿದ್ದರು. ತಂಡದ ನಾಯಕರಾಗಿದ್ದ ದ್ರಾವಿಡ್, ಧೋನಿಗೆ ಇಂಗ್ಲೀಷ್ ಭಾಷೆಯಲ್ಲಿ ಸರಿಯಾಗಿ ಬೈದು, ಇದೇ ರೀತಿನಾ ನೀಡು ಆಡೋದು? ಪಂದ್ಯವನ್ನು ಮುಗಿಸುವುದು ನಿನ್ನ ಗುರಿ ಅಲ್ಲವೇ? ಎಂದು ಏನೇನೋ ಹೇಳಿದರು. ಬರೀ ಇಂಗ್ಲೀಷ್ನಲ್ಲಿ ಮಾತಾಡಿದ್ದರಿಂದ ನನಗೆ ಅರ್ಧಂಬರ್ಧ ಅರ್ಥವಾಯಿತು. ಆದರೆ, ದ್ರಾವಿಡ್ ಈ ರೀತಿ ನೋಡಿ ಅದೇ ಮೊದಲು'' ಎಂದು ಸೆಹ್ವಾಗ್ ಅವರು ನೆಹ್ರಾ ಜೊತೆ ಈ ಪ್ರಸಂಗದ ಬಗ್ಗೆ ವಿಷಯ ಹಂಚಿಕೊಂಡರು.
ಪಂದ್ಯ ಮುಗಿಸುವತ್ತ ಗಮನ ಹರಿಸುತ್ತಿದ್ದೇನೆ
ಕ್ರಿಕ್ ಬಜ್ ಕಾರ್ಯಕ್ರಮವೊಂದರಲ್ಲಿ ಸೆಹ್ವಾಗ್ ಮಾತನಾಡಿ, ಧೋನಿ ಕೂಡಾ ಅವಕ್ಕಾಗಿ ಸರಿಯಾಗಿ ಹೊಡೆತ ಬಾರಿಸಲು ತಿಣುಕಾಡುವುದನ್ನು ಕಂಡೆ, ನಂತರ ಏನಾಯಿತು ಎಂದು ಕೇಳಿದೆ, ದ್ರಾವಿಡ್ ಅವರಿಂದ ಮತ್ತೊಮ್ಮೆ ಬೈಯಿಸಿಕೊಳ್ಳಲು ಇಷ್ಟವಿಲ್ಲ, ಅದಕ್ಕೆ ಹುಷಾರಾಗಿ ಆಡುತ್ತಿದ್ದೇನೆ, ಹೊಡಿ ಬಡಿ ಆಟ ಪಕ್ಕಕ್ಕಿಟ್ಟು, ಸೈಲಂಟಾಗಿ ಪಂದ್ಯ ಮುಗಿಸುವತ್ತ ಗಮನ ಹರಿಸುತ್ತಿದ್ದೇನೆ ಎಂದು ಧೋನಿ ಉತ್ತರಿಸಿದರು ಎಂದರು.
ಸೆಲೆಬ್ರಿಟಿಗಳೇ ಹೆಚ್ಚಾಗಿ ನಟಿಸಿರುವ ಕ್ರೆಡ್ ಜಾಹೀರಾತು
ಸೆಲೆಬ್ರಿಟಿಗಳೇ ಹೆಚ್ಚಾಗಿ ನಟಿಸಿರುವ ಕ್ರೆಡ್ ಕ್ರೆಡಿಟ್ ಕಾರ್ಡ್ ಜಾಹೀರಾತುಗಳ ಪೈಕಿ ದ್ರಾವಿಡ್ ಅವರಿರುವ ಹೊಸ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪ್ರತಿಕ್ರಿಯೆಗಳು ಇನ್ನೂ ಹರಿದು ಬರುತ್ತಿವೆ. ದ್ರಾವಿಡ್ ಅವರನ್ನು ಯಾರೂ ಎಂದೂ ಕಾಣದಂಥ ರೀತಿಯಲ್ಲಿ ಕ್ರೆಡ್ ಕ್ರೆಡಿಟ್ ಕಾರ್ಡ್ ಆಪ್ ಜಾಹೀರಾತು ತೋರಿಸಿದೆ. ದ್ರಾವಿಡ್ ಪರ ವಿರೋಧ ಪ್ರತಿಕ್ರಿಯೆಗಳು ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಲ್ಲಿವೆ.
Recommended Video
|
ಅಯ್ಯಪ್ಪ ಅವರ ಕ್ರಿಯೇಟಿವ್ ತಂಡದ ಸ್ಕ್ರಿಪ್ಟ್
''90ರ ದಶಕ ಹೀರೋಗಳನ್ನು ಮತ್ತೆ ಜಾಹೀರಾತಿನ ಮೂಲಕ ತರುವ ಪ್ರಯತ್ನ ಇದಾಗಿದೆ. ತನ್ಮಯ್ ಭಟ್, ದೇವಯ್ಯ ಬೋಪಣ್ಣ, ಪುನೀತ್ ಛಡ್ಡಾ, ನೂಪುರ್ ಪೈ ಹಾಗೂ ವಿಶಾಲ್ ಅವರಿರುವ ಕ್ರಿಯೇಟಿವ್ ತಂಡದ ಸ್ಕ್ರಿಪ್ಟ್ ದ್ರಾವಿಡ್ ಅವರಿಗೂ ಮೆಚ್ಚುಗೆಯಾಯ್ತು, ಇಂದು ಉತ್ತಮ ಪ್ರತಿಕ್ರಿಯೆ ಕಾಣುತ್ತಿದ್ದೇವೆ'' ಎಂದು ಕ್ರೆಡ್ ಆಡ್ ರೂಪಿಸಿದಿದ ಅರ್ಲಿ ಮ್ಯಾನ್ ಸಂಸ್ಥೆ ನಿರ್ದೇಶಕ ಕೆಎಂ ಅಯ್ಯಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಐಪಿಎಲ್ ಸಂದರ್ಭದಲ್ಲಿ ಇನ್ನಷ್ಟು ಇಂಥ ಜಾಹೀರಾತುಗಳನ್ನು ಕಾಣಬಹುದು ಎಂಬ ಸುಳಿವು ನೀಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಿದ್ದ ಜಾಹೀರಾತಿಗಿಂತ ಇದು ಉತ್ತಮವಾಗಿದೆ, ಹೆಚ್ಚು ನೈಜವಾಗಿದೆ, ದ್ರಾವಿಡ್ ಅಭಿನಯ ಸೂಪರ್ ಎಂಬೆಲ್ಲ ಕಾಮೆಂಟ್ ಬರುತ್ತಿವೆ.