ಕರಾಟೆ ಚಾಂಪಿಯನ್ ಶಿಪ್; ಚಿನ್ನ ಗೆದ್ದ ಬಾಗಲಕೋಟೆ ಸಹೋದರರು
ಬಾಗಲಕೋಟೆ, ಆಗಸ್ಟ್, 04: ಶೀಗಿಕೇರಿ ಗ್ರಾಮದ ಪುಟ್ಟರಾಜ ಹಾಗೂ ಸಾತ್ವಿಕ್ ಕೋಲ್ಕತ್ತಾದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಗಳನ್ನು ಜಯಿಸಿ ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆಸಕ್ತಿ ಜೊತೆಗೆ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಶೀಗಿಕೇರಿ ಗ್ರಾಮದ ಸಹೋದರರೇ ಸಾಕ್ಷಿ. ತರಬೇತಿ ಪಡೆದ ಎರಡೇ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿರುವ ಈ ಪುಟ್ಟ ಪೋರರು ಇಡೀ ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ಬಾಗಲಕೋಟೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳಿಂದ ರಾಜೀನಾಮೆ ನಿರ್ಧಾರ
ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಇಬ್ಬರು ಮಕ್ಕಳಿಗೆ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಸಹೋದರರಿಗೆ ತರಬೇತುದಾರರು ಹಾರ ಹಾಕಿ ಅಭಿನಂದನೆ ತಿಳಿಸಿದ್ದು, ಗ್ರಾಮಸ್ಥರ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.
ಹೆಚ್.ಎನ್. ಶೇಬನ್ನವರ್ ಅವರ ಪುತ್ರರಾದ ಪುಟ್ಟರಾಜ ಹಾಗೂ ಸಾತ್ವಿಕ್ ಕೋಲ್ಕತ್ತಾದಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಗಳನ್ನು ಜಯಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪಶ್ಚಿಮ ಬಂಗಾಳದ ಆಲ್ ಇಂಡಿಯಾ ಶೇಶಿಂಕೈ ಶಿಟೋರಿಯು ಕರಾಟೆ ಡು ಫೆಡರೇಶನ್ ವತಿಯಿಂದ ಜುಲೈ 30, 31ರಂದು ಎರಡು ದಿನಗಳ ಕಾಲ ಕ್ರೀಡೆಯನ್ನು ಆಯೋಜಿಸಲಾಗಿತ್ತು.
ಕೋಲ್ಕತ್ತಾದ ಈಡನ್ ಗಾರ್ಡನ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಿದ್ದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಗೆಲುವು ಸಾಧಿಸುವುದರ ಮೂಲಕ ಇಬ್ಬರು ಸಹೋದರರು ಚಿನ್ನದ ಪದಕಗಳಿಗೆ ಮುತ್ತಿಟ್ಟು ಇತಿಹಾಸ ಬರೆದರು. ಈ ಬಗ್ಗೆ ಮಾತನಾಡಿದ ಬಾಲಕರು, ಕರಾಟೆಯಲ್ಲಿ ಮುಂದೆ ಹೆಚ್ಚಿನ ಸಾಧನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ಪೋಷಕರು, ತರಬೇತಿ ನೀಡಿದ ಗುರುಗಳಿಗೆ ಧನ್ಯವಾದ ತಿಳಿಸಿದರು.
ಒಟ್ಟು ಸ್ಪರ್ಧಿಗಳು: ಕೋಲ್ಕತ್ತಾದಲ್ಲಿ ನಡೆದ ಕರಾಟೆ ಚಾಂಪಿಯನ್ಶಿಪ್ನಲ್ಲಿ 9 ದೇಶಗಳಿಂದ 4 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು. ಬಾಗಲಕೋಟೆ ಜಿಲ್ಲೆ ಸೇರಿದಂತೆ ಕರ್ನಾಟಕದಿಂದ ಒಟ್ಟು 27 ಜನ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಟೂರ್ನಿಯಲ್ಲಿ ಕರ್ನಾಟಕಕ್ಕೆ 9 ಚಿನ್ನ, 12 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಲಭಿಸಿವೆ. ಬಾಗಲಕೋಟೆಯ ಶಿಗಿಕೇರಿಯ ಸಹೋದರರಾದ ಸಾತ್ವಿಕ್ 15 ವರ್ಷದೊಳಗಿನವರ 25-30 ಕೆ.ಜಿ ವಿಭಾಗದಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟರೆ, ಪುಟ್ಟರಾಜ ಸೇಬನ್ನವರ್ ಅವರು 15 ವರ್ಷದೊಳಗಿನವರ 45 ಕೆ.ಜಿ ವಿಭಾಗದಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಸಹೋದರರ ಸಾಧನೆಗೆ ತರಬೇತುದಾರರು, ಪೋಷಕರು ಪ್ರಶಂಸೆ ವ್ಯಕ್ತಪಡಿಸಿದರು.
ಹಳ್ಳಿ ಪ್ರತಿಭೆಯ ಸಾಧನೆ: ಹಳ್ಳಿ ಪ್ರತಿಭೆಗಳು ಕೋಲ್ಕತ್ತಾದವರೆಗೂ ಹೋಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವು ತಮಾಷೆಯ ಮಾತಲ್ಲ. ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದವರಲ್ಲಿ ಸುಮಾರು ಜನ ಹಳ್ಳಿ ಪ್ರತಿಭೆಗಳೇ ಇದ್ದಾರೆ. ಒಂದೊಂದೇ ಮೆಟ್ಟಿಲುಗಳಂತೆ ಹಂತಹಂತದಲ್ಲೂ ಪರಿಶ್ರಮ ಹಾಕಿ ಗುರಿಯನ್ನು ಯಶಸ್ವಿಯಾಗಿ ತಲುಪಿದ ಸಾಕಷ್ಟು ಉದಾಹರಣೆಗಳು ಇವೆ. ಅದರಂತೆಯೇ ಬಾಗಲಕೋಟೆ ಜಿಲ್ಲೆಯ ಶೀಗಿಕೇರಿಯ ಒಂದೇ ಕುಟುಂಬದ ಇಬ್ಬರು ಸಹೋದರರು ತರಬೇತಿ ಪಡೆದ ಎರಡೇ ವರ್ಷದಲ್ಲಿಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಗಳಿಗೆ ಮುತ್ತಿಟ್ಟಿರುವುದು ಎಲ್ಲರನ್ನು ನಿಬ್ಬೆರಗಾಗುವಂಗತೆ ಮಾಡಿದೆ.
Recommended Video