ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ಹೈದರಾಬಾದ್, ನವೆಂಬರ್ 11: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪುತ್ರಿಗೆ ಆನ್ಲೈನ್ ಮೂಲಕ ಅತ್ಯಾಚಾರದ ಬೆದರಿಕೆಯನ್ನು ಒಡ್ಡಿದ್ದ ಪ್ರಕರಣದಲ್ಲಿ ಹೈದರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ಅನ್ನು ಬಂಧನ ಮಾಡಲಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಸೋಲಿನ ನಂತರ ಈ ಆರೋಪಿ ಆನ್ಲೈನ್ ಮೂಲಕ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದನು.
ಬಂಧಿತ ವ್ಯಕ್ತಿಯನ್ನು ಹೈದರಾಬಾದ್ ಮೂಲದ 23 ವರ್ಷದ ರಾಮನಾಗೇಶ್ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಮುಂಬೈ ಪೊಲೀಸರ ವಿಶೇಷ ತಂಡವು ಆರೋಪಿಯನ್ನು ಬುಧವಾರ ಮಧ್ಯಾಹ್ನ ಬಂಧನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಮಗಳಿಗೆ ಆನ್ಲೈನ್ ಬೆದರಿಕೆಗಳ ಕುರಿತು ದೆಹಲಿ ಮಹಿಳಾ ಆಯೋಗ ಕಿಡಿ
ತನ್ನ ಟ್ವಿಟ್ಟರ್ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಈ ಆರೋಪಿ ರಾಮನಾಗೇಶ್ ಶ್ರೀನಿವಾಸ್, ಪೊಲೀಸರು ಈ ಬೆದರಿಕೆಗಳ ಸ್ಕ್ರೀನ್ಶಾಟ್ಗಳನ್ನು ತನಿಖೆ ಮಾಡಲು ಆರಂಭಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ತನ್ನ ಟ್ವಿಟ್ಟರ್ ಹ್ಯಾಂಡಲ್ ಅನ್ನು ಬದಲಾಯಿಸಿದ್ದ ಎಂದು ಆರೋಪ ಮಾಡಲಾಗಿದೆ. ಹಾಗೆಯೇ ಟ್ವಿಟ್ಟರ್ ಹ್ಯಾಂಡಲ್ ಪಾಕಿಸ್ತಾನಿ ಬಳಕೆದಾರರದ್ದು ಎಂಬಂತೆ ನಟಿಸಿದ್ದ ಎಂದು ದೂರಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, "ಆರೋಪಿ ರಾಮನಾಗೇಶ್ ಶ್ರೀನಿವಾಸ್ ಈ ಹಿಂದೆ ಆಹಾರ ವಿತರಾಣ ಆಪ್ಗಾಗಿ ಕಾರ್ಯ ನಿರ್ವಹಣೆ ಮಾಡಿದ್ದ. ಪ್ರಸ್ತುತ ಆತನನ್ನು ನಾವು ಹೈದರಾಬಾದ್ನಿಂದ ಮುಂಬೈಗೆ ಕರೆತರುತ್ತೇವೆ," ಎಂದು ತಿಳಿಸಿದ್ದಾರೆ.
ಅಕ್ಟೋಬರ್ 24 ರಂದು ದುಬೈನಲ್ಲಿ ನಡೆದ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲು ಕಂಡಿದೆ. ಈ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಕಾಮೆಂಟ್ಗಳು ಆರಂಭವಾಗಿತ್ತು. ಈ ಸೋಲಿಗೆ ಮೊಹಮ್ಮದ್ ಶಮಿ ಕಾರಣ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಕಳಪೆ ಪ್ರದರ್ಶನ ನೀಡಿದ್ದ ಎಂದು ನಿಂದನೆ ಮಾಡಿದ್ದರು.
ಶಮಿ ಪರ ಕೊಹ್ಲಿ ನಿಂತಿದ್ದಕ್ಕೆ ಪುತ್ರಿಗೆ ಬೆದರಿಕೆ
ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಶಮಿ ವಿರುದ್ಧ ಕೋಮು ದ್ವೇಷಕ ಕಾಮೆಂಟ್ಗಳನ್ನು ಮಾಡುತ್ತಿರುವಾಗ ಹಲವಾರು ಮಂದಿ ಮೊಹಮ್ಮದ್ ಶಮಿ ಪರವಾಗಿ ನಿಂತಿದ್ದರು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಶಮಿ ಪರವಾಗಿ ಪೋಸ್ಟ್ ಮಾಡಿದ್ದರು. ಶಮಿ ವಿರುದ್ಧ ಕೋಮು ದ್ವೇಷ ತೋರುವ ಜನರ ವಿರುದ್ಧ ಖಡಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ವಿರಾಟ್ ಕೊಹ್ಲಿ, "ಈ ಜನರು ಬೆನ್ನುಮೂಳೆಯಿಲ್ಲದವರು" ಎಂದು ಕೊಹ್ಲಿ ಪ್ರಸ್ತಾಪ ಮಾಡಿದ್ದರು.
ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ
"ಬೇರೆಯವರ ಮೇಲೆ ಧರ್ಮದ ಆಧಾರದಲ್ಲಿ ದಾಳಿ ನಡೆಸುವುದು ಮಾನವರ ಒಂದು ಅತ್ಯಂತ ಹೀನಾಯ ಕೃತ್ಯವಾಗಿದೆ. ಅದು ಅತೀ ಪವಿತ್ರ ಹಾಗೂ ವೈಯಕ್ತಿಕ ವಿಚಾರ. ಜನರು ತಮ್ಮ ಹತಾಶೆಯನ್ನು ಈ ರೀತಿಯಾಗಿ ಹೊರಹಾಕುತ್ತಿದ್ದಾರೆ. ಏಕೆಂದರೆ ಅವರಿಗೆ ನಾವು ಏನು ಮಾಡುತ್ತೇವೆ ಎಂಬುವುದರ ಬಗ್ಗೆ ತಿಳುವಳಿಕೆಯೇ ಇಲ್ಲ," ಎಂದು ವಿರಾಟ್ ಕೊಹ್ಲಿ ಹೇಳಿದ್ದರು.
"ನಾವು ಮೈದಾನದಲ್ಲಿ ಆಟವಾಡುತ್ತೇವೆ. ನಾವು ಸಾಮಾಜಿಕ ಜಾಲತಾಣದಲ್ಲಿ ಬೆನ್ನುಮೂಳೆಯಿಲ್ಲದ ಜನರು ಅಲ್ಲ. ಇಂತಹ ವಿಚಾರಗಳು ಕೆಲವರಿಗೆ ಮನರಂಜನೆಯಾಗಿದ್ದು ಬಹಳ ಬೇಸರದ ವಿಚಾರ. ಜನರ ಹತಾಶೆಯು ಈ ಎಲ್ಲಾ ನಾಟಕಕ್ಕೆ ಕಾರಣವಾಗಿದೆ. ನಾವು ಶೇಕಡ 200 ರಷ್ಟು ಶಮಿ ಪರವಾಗಿ ನಿಲ್ಲುತ್ತೇವೆ. ನಮ್ಮ ತಂಡದಲ್ಲಿ ಇರುವ ಸಹೋದರತ್ವವನ್ನು ಎಂದಿಗೂ ಅಲುಗಾಡಿಸಲಾಗದು," ಎಂದು ಖಡಕ್ ಆಗಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರ ಒಂಬತ್ತು ತಿಂಗಳ ಪುತ್ರಿಗೆ ಆನ್ಲೈನ್ ಮೂಲಕ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ. ಈ ಕಾಮೆಂಟ್ ವಿರುದ್ದವಾಗಿ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಆಯೋಗವು ಈ ಕಾಮೆಂಟ್ ಮಾಡಿದ್ದ ಆರೋಪಿಯ ಬಂಧನಕ್ಕೆ ಆಗ್ರಹ ಮಾಡಿತ್ತು.
(ಒನ್ಇಂಡಿಯಾ ಸುದ್ದಿ)