ದಾನಿಗಳೂ ಸಹ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುವ ಸಂಪ್ರದಾಯ ಬೆಳೆಯಬೇಕು!
ಬೆಂಗಳೂರು, ಸೆ. 15: "ನಮ್ಮ ದೇಶದಲ್ಲಿ ಕ್ರೀಡೆಗೆ ಹಿಂದೆಂದಿಗಿಂತಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಕ್ರೀಡೆಗೆ ಎಲ್ಲ ಪ್ರೋತ್ಸಾಹ ನೀಡುತ್ತಿದ್ದೇವೆ. ಹೆಚ್ಚಿನ ಕಡೆಗಳಲ್ಲಿ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡೆಗೆ ಮೂಲ ಸೌಕರ್ಯ ಕಲ್ಪಿಸುತ್ತಿದ್ದೇವೆ. ಕೆಲವು ರಾಜ್ಯಗಳಲ್ಲಿ ಕ್ರೀಡೆಗೆ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಆ ಸಂಪ್ರದಾಯ ಹೆಚ್ಚಾಗಬೇಕು" ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.
ಬೆಂಗಳೂರಿನಲ್ಲಿರುವ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಹಾಕಿ ಕರ್ನಾಟಕ ಆಯೋಜಿಸಿದ್ದ ಹಾಕಿ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ನನಗೆ ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುತ್ತ ಮಾಡುತ್ತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬಂತು. ಅದೇ ಕಾರಣಕ್ಕೆ ಎರಡನೆ ಬಾರಿಯೂ ಕ್ರೀಡಾ ಇಲಾಖೆಯನ್ನು ಪಡೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ಅವರ ಆಶಯದಂತೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಕ್ರೀಡಾಪಟುಗಳ ಸಾಧನೆಗೆ ನೆರವಾಗುತ್ತಿದ್ದೇನೆ" ಎಂದು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡಲು ತಮಗಿರುವ ಸಂತೋಷವನ್ನು ಸಚಿವ ಡಾ. ನಾರಾಯಣಗೌಡ ವಿವರಿಸಿದರು.
ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ!
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆಯ ಬಗ್ಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಪುನರ್ ಉಚ್ಚರಿಸಿದ್ದಾರೆ. "ಸರ್ಕಾರದ ಎಲ್ಲ ಇಲಾಖೆಯಲ್ಲೂ ಕ್ರೀಡಾ ಪಟುಗಳಿಗೆ ಶೇ. 2 ರಷ್ಟು ಮೀಸಲಾತಿ ನೀಡಿ ಉದ್ಯೋಗ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಬಾಲಕಿಯರ ಕ್ರೀಡಾ ವಸತಿ ನಿಲಯ ಸ್ಥಾಪನೆ ಮಾಡುತ್ತಿದ್ದೇವೆ. ಕ್ರೀಡೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸುತ್ತಿದ್ದೇವೆ. ಹಾಕಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿ ನಮ್ಮ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ಕ್ರೀಡಾಪಟುಗಳನ್ನು ಇಂದು ಗೌರವಿಸಲಾಗಿದೆ. ಯುವ ಕ್ರೀಡಾಪಟುಗಳಿಗೆ ಇವರು ಸ್ಪೂರ್ತಿಯಾಗಲಿ" ಎಂದಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ಇನ್ನೂ ಸೌಲಭ್ಯ ಬೇಕು!
ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಮಾತನಾಡಿ, "ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯ ಬೇಕಿದೆ. ಕ್ರೀಡಾ ಸಚಿವರಲ್ಲಿ ಕ್ರೀಡೆಗೆ ಆಗಬೇಕಾದ ಕೆಲಸಗಳ ಬಗ್ಗೆ ಮನವಿ ಮಾಡಿದ್ದೇನೆ ಎಂದರು. ಯಾವುದೇ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ತೆರಳುವಾಗ ಮುಂಚಿತವಾಗಿ ಕ್ರೀಡಾ ಸಂಸ್ಥೆಗಳಿಗೆ ಹಾಗೂ ಕ್ರೀಡಾ ಇಲಾಖೆಗೆ ತಿಳಿಸಬೇಕು. ಸರ್ಕಾರ ಸಾಧ್ಯವಾದಷ್ಟು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಒಲಿಂಪಿಕ್ಸ್ ನಂತಹ ಕ್ರೀಡಾಕೂಟಕ್ಕೆ ಯಾವುದೇ ವಿಭಾಗದಲ್ಲಿ ಆಯ್ಕೆಯಾದರೂ ಸರ್ಕಾರದ ಗಮನಕ್ಕೆ ತರಬೇಕು. ಕ್ರೀಡಾಪಟುಗಳಾಗಲಿ ಅಥವಾ ಸಂಬಂಧಿಸಿದ ಕ್ರೀಡಾ ಸಂಸ್ಥೆಯಾಗಲಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು" ಎಂದು ಹೇಳಿದರು.
ಒಲಿಂಪಿಕ್ಸ್ನಲ್ಲಿ ದೇಶ ಪ್ರತಿನಿಧಿಸಿದ್ದವರಿಗೆ ಸನ್ಮಾನ!
ಇದೇ ವೇಳೆ ಹಾಕಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಎರಡುಬಾರಿ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಸ್.ವಿ. ಸುನೀಲ್, ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತ, ಹಿರಿಯಕ ಹಾಕಿ ತಂಡದ ಕೋಚ್ ಕರಿಯಪ್ಪ ಹಾಗೂ ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ರಘುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಕಾರ್ಯಕ್ರಮ
ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು, ಹಾಕಿ ಕರ್ನಾಟಕ ಅಧ್ಯಕ್ಷ ಡಾ. ಸುಬ್ರಮಣಿ ಗುಪ್ತ, ಹಾಕಿ ಕರ್ನಾಟಕ ಉಪಾಧ್ಯಕ್ಷ ರಘುನಾಥ್, ಪ್ರದಾನ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ, ಖಜಾಂಚಿ ಅಯ್ಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.