ದೆಹಲಿ ಸರ್ಕಾರ ನನಗೆ ಸಹಾಯ ಮಾಡಲಿಲ್ಲ: ಕಾಮನ್ವೆಲ್ತ್ ಗೇಮ್ನಲ್ಲಿ ಕಂಚು ಗೆದ್ದ ದಿವ್ಯಾ ಕಕ್ರಾನ್ ಬೇಸರ
ನವದೆಹಲಿ, ಆಗಸ್ಟ್ 8: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಕಂಚಿನ ಪದಕ ಗೆದ್ದಿರುವ ಕುಸ್ತಿಪಟು ದಿವ್ಯಾ ಕಕ್ರಾನ್ 20 ವರ್ಷಗಳಿಂದ ದೆಹಲಿಯಲ್ಲಿ ವಾಸ ಮಾಡುತ್ತಿದ್ದು, ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದರು, ರಾಜ್ಯ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ, ಇದುವರೆಗೆ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ದಿವ್ಯಾ ಕಕ್ರಾನ್ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
CWG 2022: ಅಮಿತ್ ಪಂಗಲ್, ನೀತು ಘಂಘಲ್ಗೆ ಚಿನ್ನ, ಮಹಿಳಾ ಹಾಕಿ ತಂಡಕ್ಕೆ ಕಂಚು
"ನನ್ನನ್ನು ಅಭಿನಂದಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಹೃದಯದ ಧನ್ಯವಾದ ತಿಳಿಸುತ್ತೇನೆ. ಕಳೆದ 20 ವರ್ಷಗಳಿಂದ ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಕುಸ್ತಿಯನ್ನು ಅಭ್ಯಾಸ ಮಾಡಿದ್ದೇನೆ ಆದರೆ ಇಲ್ಲಿಯವರೆಗೆ ನನಗೆ ಯಾವುದೇ ಹಣವನ್ನು ನೀಡಿಲ್ಲ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
"ದೆಹಲಿಯಿಂದ ಬೇರೆ ರಾಜ್ಯಕ್ಕಾಗಿ ಆಡುವ ಇತರ ಆಟಗಾರರನ್ನು ನೀವು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂದು ನನ್ನ ವಿನಂತಿ" ಎಂದು ದಿವ್ಯಾ ಕಕ್ರಾನ್ ದೆಹಲಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಕಾಮನ್ವೆಲ್ತ್ ಗೇಮ್ ಮುಖ್ಯವಲ್ಲ: ಬಾಕ್ಸಿಂಗ್ನಲ್ಲಿ ಸೋತ ಬಳಿಕ ಲೊವ್ಲಿನಾ ಬೊರ್ಗೊಹೈನ್ ಹೇಳಿಕೆ
ಉತ್ತರಪ್ರದೇಶ ರಾಜ್ಯಕ್ಕೆ ಆಡಿದ್ದೀರಿ ಎಂದ ಆಪ್
ದಿವ್ಯಾ ಕಕ್ರಾನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್, "ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಸಹೋದರಿ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ನೀವು ಯಾವಾಗಲೂ ಉತ್ತರ ಪ್ರದೇಶಕ್ಕಾಗಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿ ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು" ಹೇಳಿದ್ದಾರೆ.
ಮನವಿ ಪರಿಶೀಲಿಸುತ್ತೇವೆ ಎಂದ ಸರ್ಕಾರ
"ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತದೆ. ದಿವ್ಯಾ ಕಕ್ರನ್ ಸದ್ಯ ಉತ್ತರ ಪ್ರದೇಶ ಪರ ಆಡುತ್ತಿದ್ದಾರೆ. ಅವರು ದೆಹಲಿಯ ಪರವಾಗಿ ಆಡಿದ್ದರೆ ಅಥವಾ ದೆಹಲಿಯಲ್ಲಿ ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ, ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಖಂಡಿತವಾಗಿಯೂ ಅವರ ಮನವಿಯನ್ನು ಪರಿಶೀಲಿಸುತ್ತದೆ" ಎಂದು ದೆಹಲಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಬೆಂಬಲ ನೀಡುವಂತೆ ಈ ಮೊದಲು ಕೇಳಿದ್ದ ದಿವ್ಯಾ ಕಕ್ರಾನ್
ದೆಹಲಿ ಸರ್ಕಾರದಿಂದ ತನಗೆ ತನಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂದು ಕೇಜ್ರಿವಾಲ್ಗೆ ಕಕ್ರನ್ ಈ ಮೊದಲು ಕೂಡ ಹೇಳಿಕೊಂಡಿದ್ದರು.
2018 ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದ ನಂತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ದಿವ್ಯಾ ಕಕ್ರಾನ್, ಏಷ್ಯನ್ ಗೇಮ್ಸ್ಗಾಗಿ ತಯಾರಿ ಸಮಯದಲ್ಲಿ ನನಗೆ ಬೆಂಬಲ ಸಿಗಲಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಳಿ ಸಮಸ್ಯೆ ಹೇಳಿಕೊಂಡಿದ್ದರು.
ನಾನು ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದಾಗ, ಸರ್ಕಾರ ನನಗಾಗಿ ಏನನ್ನೂ ಮಾಡಲಿಲ್ಲ. ನಾನು ತುಂಬಾ ಕಠಿಣ ಪರಿಸ್ಥಿತಿ ದಾಟಿಕೊಂಡು ಬಂದಿದ್ದೇನೆ. ಬಡ ಮಕ್ಕಳನ್ನು ಬೆಂಬಲಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಇಂದು ನೀವು ನಮ್ಮನ್ನು ಇಲ್ಲಿಗೆ ಕರೆದಿದ್ದೀರಿ ಆದರೆ ನಮಗೆ ಹೆಚ್ಚು ಅಗತ್ಯವಿರುವಾಗ, ಯಾರೂ ನಮಗೆ ಸಹಾಯ ಮಾಡುವುದಿಲ್ಲ ಎಂದು ಅಂದಿನ ಸಮಾರಂಭದಲ್ಲಿ ಕೇಜ್ರಿವಾಲ್ ಮುಂದೆಯೇ ಹೇಳಿಕೆ ನೀಡಿದ್ದರು.
ಬೆಂಬಲ ನೀಡಿದರೆ ಮತ್ತಷ್ಟು ಸಾಧನೆ ಸಾಧ್ಯ
ಅಗತ್ಯವಿರುವ ಸಂದರ್ಭದಲ್ಲಿ ನಮಗೆ ಹೆಚ್ಚಿನ ಬೆಂಬಲ ದೊರೆತರೆ ನಾವು ಉತ್ತಮ ಪ್ರದರ್ಶನ ನೀಡಲು ಸಂಪೂರ್ಣ ಶ್ರಮ ಹಾಕಲು ಸಾಧ್ಯವಾಗುತ್ತದೆ. ಚಿನ್ನದ ಪದಕ ಗೆಲ್ಲಲು ಕೂಡ ನಮಗೆ ಸಹಾಯವಾಗುತ್ತದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದಾಗ ಕೇಜ್ರಿವಾಲ್ ಕರೆ ಮಾಡಿ ಸಹಾಯ ಮಾಡುವುದಾಗಿ ಹೇಳಿದ್ದರು. ಏಷ್ಯನ್ ಕ್ರೀಡಾಕೂಟಕ್ಕೆ ತರಬೇತಿ ಪಡೆಯಲು ಬೆಂಬಲ ನೀಡುವಂತೆ ಕೇಳಿದ್ದೆ, ಈ ಕುರಿತು ಮನವಿ ಮಾಡಿ ಪತ್ರ ಕೂಡ ಕಳುಹಿಸಿದ್ದರೆ ಆದರೆ ಯಾರೂ ನನ್ನ ಮನವಿಗೆ ಸ್ಪಂದಿಸಲಿಲ್ಲ ಎಂದು ಹೇಳಿದ್ದರು.
ಇಂದು ನಾನು ಪ್ರಶಂಸೆಗಳನ್ನು ಪಡೆಯುತ್ತಿದ್ದೇನೆ ಆದರೆ ನಾನು ಬಯಸಿದಾಗ, ನನಗೆ ಬೆಂಬಲ ಸಿಗಲಿಲ್ಲ. ದಯವಿಟ್ಟು ಈಗ ತರಬೇತಿ ಪ್ರಾರಂಭಿಸುತ್ತಿರುವ ಮಕ್ಕಳ ಬಗ್ಗೆ ಯೋಚಿಸಿ. ಕ್ರೀಡಾಕೂಟಗಳಲ್ಲಿ ದೆಹಲಿ ಕೆಲವೇ ಪದಕಗಳನ್ನು ಪಡೆದಿದೆ. ಹರಿಯಾಣವನ್ನು ನೋಡಿ, ಪದಕ ಗೆದ್ದವರಿಗೆ 3 ಕೋಟಿ ಕೊಡುತ್ತಾರೆ. ದೆಹಲಿ ಈಗ ಈ ಮೊತ್ತವನ್ನು 20 ಲಕ್ಷದಿಂದ 1 ಕೋಟಿಗೆ ಏರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದರು. ಆ ಸಮಯದಲ್ಲಿ ಕೇಜ್ರಿವಾಲ್ ದಿವ್ಯಾ ಕಾಕ್ರನ್ ಅವರಿಗೆ ನೆರವು ನೀಡುವುದಾಗಿ ಹೇಳಿದ್ದರು. ಆದರೆ ಈಗ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಬಳಿಕವೂ ತಮ್ಮ ಸಮಸ್ಯೆ ಹಾಗೇ ಇದೆ ಎಂದು ಹೇಳಿದ್ದಾರೆ.
Recommended Video