ಪ್ಯಾರಾ ಶೂಟಿಂಗ್ ವಿಶ್ವಕಪ್: ದೇಶಕ್ಕೆ ಚಿನ್ನ ತಂದುಕೊಟ್ಟ ಮುಧೋಳದ ಶ್ರೀಹರ್ಷ
ಬಾಗಲಕೋಟೆ, ಜೂನ್ 15 : ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ನ 10 ಮೀಟರ್ ಏರ್ ರೈಫಲ್ ಸ್ಟಾಡಿಂಗ್ ಎಸ್ಎಚ್ 2 ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಂಜನಗಿ ಗ್ರಾಮದ ವಿಶೇಷ ಚೇತನ ಶೂಟರ್ ಶ್ರೀಹರ್ಷ ರಾಮಕೃಷ್ಣ ದೇವರಡ್ಡಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಇನ್ಸುರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ 41 ವರ್ಷದ ದೇವರಡ್ಡಿ, 253.1 ಅಂಕದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯುವ ಪ್ಯಾರಾ ಒಲಂಪಿಕ್ಸ್ ಅರ್ಹತೆ ಪಡೆದ ಎರಡನೆಯ ಭಾರತೀಯ ಪ್ಯಾರಾ ಶೂಟರ್ ಆಗಿ ಹೊರಹೊಮ್ಮಿದ್ದಾರೆ.
ಹೊಸ ರಾಷ್ಟ್ರೀಯ ದಾಖಲೆ ಬರೆದ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ
ಶ್ರೀಹರ್ಷ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರಂಜಣಗಿ ಗ್ರಾಮದಲ್ಲಿ ಆಗಸ್ಟ್ 28 1980ರಲ್ಲಿ ಜನಿಸಿದರು. ಇವರ ತಂದೆ ರಾಮಕೃಷ್ಣ ದೇವರಡ್ಡಿ ನಿವೃತ್ತ ನವೋದಯ ವಿದ್ಯಾಲಯ ಪ್ರಾಚಾರ್ಯರು, ತಾಯಿ ಲಲಿತಾ ದೇವರಡ್ಡಿ ಡಿಇಡಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾಗಿದ್ದಾರೆ.
ಐಪಿಎಲ್ ಆಡದಂತೆ ತುಂಬಾ ಜನ ಸಲಹೆ ನೀಡಿದ್ದರು: ಜಾನಿ ಬೈರ್ ಸ್ಟೋವ್
ಶ್ರೀಹರ್ಷ ಹುಟ್ಟಿದಾಗ ಎಲ್ಲರಂತೆ ಚೆನ್ನಾಗಿಯೇ ಇದ್ದು ಧಾರವಾಡದಲ್ಲಿ ಬಿಬಿಎವರೆಗೂ, ಜೆಎಸ್ಎಸ್ ಕಾಲೇಜದಲ್ಲಿ ಪದವಿ ಪಡೆದರು. ಮಾರ್ಕೆಟಿಂಗ್ ವಿಭಾಗದಲ್ಲಿ ಧಾರವಾಡದ ಕವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿವಿಧ ಇಲಾಖೆ ಹಾಗೂ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಬ್ಯಾಡ್ಮಿಂಟನ್ನಲ್ಲಿ ಪ್ರೌಢ ಶಾಲೆಯಿಂದ ಪದವಿವರೆಗೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ್ದರು.
ಅಪಘಾತದ ನಂತರ ಪಾರ್ಶ್ವವಾಯು
2013ರಲ್ಲಿ ಜಲ್ಲಿಕಲ್ಲು ತುಂಬಿದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಅವರಿಗೆ ಬೆನ್ನುಹುರಿ( ಸ್ಪೈನಲ್ ಕಾರ್ಡ್) ಗಾಯಕ್ಕೆ ಒಳಗಾಗಿದ್ದರು. ಈ ಅಪಘಾತದ ನಂತರ ಅವರನ್ನು 75 ಪ್ರತಿಶತ ಪಾರ್ಶ್ವವಾಯು ಪೀಡಿತ (ಕ್ವಾಡ್ರಿಪ್ಲೆಜಿಕ್) ಎಂದು ಘೋಷಿಸಲಾಗಿತ್ತು. ಇಡೀ ಜೀವನ ಬೇರೆಯವರೇ ಮೇಲೆ ಅವಲಂಬಿರಾಗಬೇಕಾಗಿ ಬಂದರೂ, ಕ್ರೀಡೆಯಲ್ಲಿ ಬೆಳೆಯಬೇಕೆಂಬ ಅವರ ಮನಸ್ಸಿನಲ್ಲಿದ್ದ ಹಂಬಲ 2022ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತರುವಂತೆ ಮಾಡಿದೆ.
ಶೂಟಿಂಗ್ ಆಯ್ಕೆ
ನನ್ನ ಕಾಲೇಜು ದಿನಗಳಲ್ಲಿ ನಾನು ಕ್ರೀಡಾಪಟುವಾಗಿದ್ದೆ, ಅಲ್ಲಿ ಬ್ಯಾಡ್ಮಿಂಟನ್ ಆಡುತ್ತಿದೆ. ಅಪಘಾತಕ್ಕೆ ಒಳಗಾದ ಮೇಲೆ ನನ್ನ ಜೀವನ ನಾನೇ ನೋಡಿಕೊಳ್ಳುವುದಕ್ಕಾಗಿ ಎನ್ಜಿಒ ಸೇರಿಕೊಂಡಿದೆ. ಅಲ್ಲಿ ಪ್ರೋಗ್ರಾಮ್ ಅಸೋಸಿಸ್ಟೆಂಟ್ ಆಗಿ ಕೆಲಸ ಆರಂಭಿಸಿದೆ. ಆದರೆ ನನ್ನೊಳಗಿದ್ದ ಕ್ರೀಡಾಪಟು ನಿರಂತರವಾಗಿ ನನ್ನನ್ನು ಬಡಿದೆಬ್ಬಿಸುತ್ತಲೇ ಇತ್ತು. ನಾನು ದೈಹಿತ ಸಾಮರ್ಥ್ಯ ಅಗತ್ಯವಿರುವ ಕ್ರೀಡೆಗಳಿಗೆ ನಾನು ಅನರ್ಹ ಎಂದು ನನಗೆ ಅರಿವಾಯಿತು. ಹಾಗಾಗಿ ನಾನು ಶೂಟಿಂಗ್ ಆಯ್ಕೆ ಮಾಡಿಕೊಂಡೆ, ಏಕೆಂದರೆ ನಾನು ವೀಲ್ಚೇರ್ನಲ್ಲಿ ಕುಳಿತೇ ಗುರಿ ಇಡಬಹದಾಗಿತ್ತು ಎಂದು ತಾವೂ ಶೂಟಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡ ಬಗ್ಗೆ ವಿವರಿಸಿದ್ದಾರೆ.
ತರಬೇತಿಗಾಗಿ ಬೆಂಗಳೂರಿಗೆ ಸ್ಥಳಾಂತರ
ಹುಬ್ಬಳ್ಳಿಯ ತರಬೇತಿ ಅಕಾಡೆಮಿಯಲ್ಲಿ ಪ್ರಮಾಣೀಕೃತ ಶೂಟರ್ಗಳ ಕೊರತೆಯನ್ನು ಮನಗಂಡ ದೇವರಡ್ಡಿ, ಉತ್ತಮ ತರಬೇತಿ ಸೌಲಭ್ಯಗಳನ್ನು ಪಡೆಯಲು ಬೆಂಗಳೂರಿಗೆ ತೆರಳಿದ್ದಾಗಿ ತಿಳಿಸಿದ್ದಾರೆ. "ಹುಬ್ಬಳ್ಳಿಯಲ್ಲಿನ ಶೂಟಿಂಗ್ ಅಕಾಡೆಮಿಯಲ್ಲಿ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗದ ಕಾರಣ , ಇದು ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಹಾಗಾಗಿ ನಾನು ಬೆಂಗಳೂರಿಗೆ ಸ್ಥಳಾಂತರಗೊಳ್ಳಬೇಕಾಯಿತು. ಉತ್ತಮ ತರಬೇತಿಗಾಗಿ ಹೆಚ್ಚಿನ ಹಣದ ಅಗತ್ಯವಿತ್ತು, ಇದನ್ನೆಲ್ಲಾ ನನ್ನ ಹೆತ್ತವರ ಪಿಂಚಣಿಯಿಂದ ಭರಿಸಿದೆ. ನನ್ನ ಹೆಂಡತಿ ಶೋಭಾ ಕೂಡ ತುಂಬಾ ಬೆಂಬಲ ನೀಡಿದರು. ನಮ್ಮ ಆರ್ಥಿಕ ಸ್ಥಿತಿ ಬಲವಾಗಿಲ್ಲದ ಕಾರಣ ನಾವು ಬೆಂಗಳೂರಿನಲ್ಲಿ ಪಿಜಿಯಲ್ಲಿ ಉಳಿದುಕೊಂಡಿದ್ದೆವು" ಎಂದು ಶೂಟರ್ ರಾಕೇಶ್ ಮನ್ಪತ್ ಎಂಬುವವರ ಬಳಿ ತರಬೇತಿ ಪಡೆದಿದ್ದ ಶ್ರೀ ಹರ್ಷ ತಿಳಿಸಿದ್ದಾರೆ.
ಅಂಗವಿಕಲರು ಮತ್ತು ಬೆನ್ನುಹುರಿಯ ಗಾಯದಿಂದ ಪೀಡಿತರಿಗೆ ಮೀಸಲಾದ SH2 ವರ್ಗದ ಅಡಿಯಲ್ಲಿ ಶ್ರೀಹರ್ಷ ತರಬೇತಿ ಪಡೆದಿದ್ದಾರೆ."ನನ್ನ ಕೈಗಳಿಗೆ ಶಕ್ತಿಯಿಲ್ಲದ ಕಾರಣ ಟ್ರಿಗರ್ ಒತ್ತುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಆದಾಗ್ಯೂ, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಮಾರ್ಗಸೂಚಿಗಳಲ್ಲಿನ ಗೈಡ್ಲೈನ್ಸ್ ಮತ್ತು ಮತ್ತು ಸ್ಪ್ರಿಂಗ್ ಸ್ಟ್ಯಾಂಡ್ಗಳ ಬಳಕೆಗೆ ನಿಬಂಧನೆಗಳು ನನಗೆ ಸಹಾಯ ಮಾಡಿದವು. ನನ್ನ ಹೆಂಡತಿ ನನ್ನ ಲೋಡರ್ ಆಗಿದ್ದರು, ಅವಳು ನನ್ನ ವಿಜಯಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾಳೆ" ಎಂದು ಪತ್ನಿ ಕೊಡುಗೆಯನ್ನು ಸ್ಮರಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಪಡೆದ ಎರಡನೇ ಭಾರತೀಯ
ಶ್ರೀಹರ್ಷ ದೇವರೆಡ್ಡಿ 2019 ಶಾರ್ಜಾದಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ, 2020ರಲ್ಲಿ ಶಾರ್ಜಾದಲ್ಲಿ ಬೆಳ್ಳಿ, 2021ರಲ್ಲಿ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು, ಪೆರು ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದೀಗ ಫ್ರಾನ್ಸ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿಯಲ್ಲಿ 12 ರಾಷ್ಟ್ರಗಳ ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುದಲ್ಲದೆ, 2024ರಲ್ಲಿ ಪ್ಯಾರಿಸ್ ನಲ್ಲಿ ನಡೆಯುವ ಪ್ಯಾರಾ ಒಲಂಪಿಕ್ಸ್ಗೆ ಅರ್ಹತೆ ಪಡೆದ ಎರಡನೆಯ 2 ಪ್ಯಾರಾ ಶೂಟರ್ ಎನಿಸಿಕೊಂಡಿದ್ದಾರೆ.
ಇದರ ಜೊತೆಗೆ ಜರ್ಮನ್, ದಕ್ಷಿಣ ಕೋರಿಯಾ, ದುಬೈನಲ್ಲಿ 2022ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ಗಳಿಗೆ ಅಯ್ಕೆ ಯಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಶ್ರೀಹರ್ಷ, ತಮ್ಮ ಶ್ರೇಯವನ್ನು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಜ್ಜ ತಿಮ್ಮಣ್ಣ, ಪೋಷಕರು ಹಾಗೂ ಪತ್ನಿ ಸಲ್ಲುತ್ತದೆ ಎನ್ನುತ್ತಾರೆ. ಇದೇ ಸಂದರ್ಭದಲ್ಲಿ 2020ರಲ್ಲಿ ಶಾರ್ಜಾದಲ್ಲಿ ನಡೆದ ಅಂತರರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ ಹೋಗಲು ಸಹಾಯ ಮಾಡಿದ ಉದ್ಯಮಿ ವಿಜಯ ಸಂಕೇಶ್ವರರ ಸಹಾಯವನ್ನು ಕೂಡ ಸ್ಮರಿಸಿದ್ದಾರೆ.
ವಿಶೇಷಚೇತನನಾಗಿದ್ದರು ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ತಮಗೆ ಪರಿಚಯವಿಲ್ಲದ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಪದಕಗಳನ್ನು ತಂದುಕೊಡುತ್ತಿರುವ ಶ್ರೀಹರ್ಷ ಕೇವಲ ವಿಕಲಚೇತನರಿಗಲ್ಲ, ಇಡೀ ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ. ಅವರ ಮುಂದಿನ ಸ್ಪರ್ಧೆಗಳಲ್ಲೂ ಮತ್ತಷ್ಟು ಯಶಸ್ಸು ಸಿಗಲೆಂದು ಹಾರೈಸೋಣ.