ಎಕ್ಯುವಿ 700 ಬೇಗ ಕಳುಹಿಸಿ ಎಂದ ಥಾಮಸ್ ಕಪ್ ವಿನ್ನರ್: ಮಹೀಂದ್ರ ಪ್ರತಿಕ್ರಿಯೆ ಹೀಗಿತ್ತು
ಮುಂಬೈ, ಮೇ 18: ಭಾರತ ಬ್ಯಾಡ್ಮಿಂಟನ್ನ ಡಬಲ್ಸ್ ಸ್ಟಾರ್ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಇತ್ತೀಚೆಗೆ ಮುಗಿದ ಪ್ರತಿಷ್ಠಿತ ಥಾಮಸ್ ಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಈ ಜೋಡಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ನ ಪ್ರತಿಷ್ಠಿತ ಪ್ರಶಸ್ತಿಯನ್ನು ದೇಶಕ್ಕೆ ತಂದುಕೊಟ್ಟಿದ್ದಂತೆ ದೇಶದ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದರು. ಸದಾ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರ ಕೂಡ ಭಾರತ ತಂಡದ ಸಾಧನೆಯನ್ನು ಟ್ವೀಟ್ ಮಾಡಿ ಪ್ರಶಂಶಿಸಿದ್ದರು.
ಕೆಂಪೇಗೌಡರನ್ನು ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ ಆನಂದ್ ಮಹೀಂದ್ರ
ಈ ಕ್ರೀಡೆಯಲ್ಲಿ ಭಾರತೀಯರ ಉನ್ನತಿಯ ಯುಗ ಆರಂಭವಾಗಿದೆ. ನಮ್ಮ ದೇಶದಾದ್ಯಂತ ಸದಾ ಪ್ರೀತಿಸುವ ಮತ್ತು ಆಡುವ ಕ್ರೀಡೆ ಇದು. ನಾನು ಬಾಲ್ಯದಲ್ಲಿ ಥಾಮಸ್ ಕಪ್ ಮತ್ತು ಈ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿದ ಇಂಡೋನೇಷ್ಯಾದ ರೂಡಿ ಹಾರ್ಟೊನೊ ಅವರಂತಹ ದಿಗ್ಗಜರ ಬಗ್ಗೆ ಓದುತ್ತಾ ಬೆಳೆದವನು. ಇಂದು ನಾವು ಬಲಿಷ್ಠ ಇಂಡೋನೇಷ್ಯಾವನ್ನು ಸ್ವೀಪ್ ಮಾಡಿದ್ದೇವೆ, ಅಪ್ನಾ ಟೈಮ್ ಆ ಗಯಾ ಎಂದು ಟ್ವೀಟ್ ಮಾಡಿದ್ದರು.
Thank You Sir!😊 I’ve booked an XUV700 recently hope I can get it soon!😛😝 https://t.co/KZVAdehkKj
— Chirag Shetty (@Shettychirag04) May 15, 2022
ಆನಂದ್ ಮಹೀಂದ್ರ ಅವರ ಪ್ರಶಂಸನೀಯ ಟ್ವಿಟ್ಗೆ ಪ್ರತಿಕ್ರಿಯಿಸಿದ 23 ವರ್ಷದ ಶಟ್ಲರ್ ಚಿರಾಗ್ ಶೆಟ್ಟಿ, ಧನ್ಯವಾದಗಳು ಸರ್, ನಾನು ಇತ್ತೀಚೆಗೆ ಎಕ್ಯುವಿ700 ಅನ್ನು ಬುಕ್ ಮಾಡಿದ್ದೇನೆ. ಆದಷ್ಟು ಬೇಗ ಅದು ನನಗೆ ಸಿಗಲಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದರು.
ಆನಂದ್ ಮಹೀಂದ್ರ ಪ್ರತಿಕ್ರಿಯೆ; ಯುವ ಶಟ್ಲರ್ ಚಿರಾಗ್ಗೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರ, ಎಕ್ಯುವಿ700 ಚಾಂಪಿಯನ್ಗಳ ಆಯ್ಕೆಯಾದ ನಂತರ, ಅದನ್ನು ನಾವು ನಿಮಗೆ ತಲುಪಿಸಲು ಹೆಚ್ಚು ಶ್ರಮವಹಿಸುತ್ತೇವೆ ಎಂದು ತಿಳಿಸಿ, ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಟ್ಯಾಗ್ ಮಾಡಿದ್ದಾರೆ.
ಮುಂದುವರಿಸಿ, ನಾನು ಕೂಡ ನನ್ನ ಪತ್ನಿಗಾಗಿ ಮಹೀಂದ್ರ ಎಕ್ಯುವಿ 700 ಒಂದನ್ನು ಬುಕ್ ಮಾಡಿದ್ದು, ಅದನ್ನು ಪಡೆಯಲು ಸರದಿಯಲ್ಲಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ದುಃಖಕರ ವಿಷಯವೆಂದರೆ, ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳು ಎಲ್ಲಾ ಕಾರು ಕಂಪನಿಗಳನ್ನು ಬಾಧಿಸುತ್ತಿವೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ ಮಹೀಂದ್ರಾ ಎಕ್ಯುವಿ700 ಬಿಡುಗಡೆಯಾಗಿತ್ತು. ಸೆಪ್ಟೆಂಬರ್ 7ರಂದು ಬುಕಿಂಗ್ ಪ್ರಾರಂಭವಾದ ಒಂದು ಗಂಟೆಯೊಳಗೆ 25,000 ಕಾರ್ಗಳನ್ನು ಬುಕ್ ಮಾಡಲಾಗಿತ್ತು. ಮುಂದಿನ ತಿಂಗಳಲ್ಲಿ 25,000 ಯೂನಿಟ್ಗಳ ಎರಡನೇ ಭಾಗವು ಸಹಾ ಕೆಲವೇ ಗಂಟೆಗಳಲ್ಲಿ ಬುಕ್ಕಿಂಗ್ ಆಗಿದ್ದವು. ಒಟ್ಟಾರೆ ಪ್ರಾರಂಭವಾದ ನಾಲ್ಕು ತಿಂಗಳೊಳಗೆ ಬುಕ್ಕಿಂಗ್ ಸಂಖ್ಯೆ 1 ಲಕ್ಷ ದಾಟಿದ್ದು, ಕಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಮೊದಲ ಬಾರಿಗೆ ಥಾಮಸ್ ಕಪ್ನಲ್ಲಿ ಭಾರತಕ್ಕೆ ಗೆಲುವು; ಪುರುಷರಿಗಾಗಿ ಆಡಿಸಲಾಗುವ ಥಾಮಸ್ ಕಪ್ ಮತ್ತು ಮಹಿಳೆಯರಿಗಾಗಿ ನಡೆಸುವ ಊಬರ್ ಕಪ್ಗಳ 70 ವರ್ಷ ಇತಿಹಾಸದಲ್ಲಿ ಭಾರತ ಹಿಂದೆಂದೂ ಫೈನಲ್ ತಲುಪಿರಲಿಲ್ಲ. ಥಾಮಸ್ ಕಪ್ನಲ್ಲಿ 1952, 1955 ಮತ್ತು 1979ರಲ್ಲಿ ಮೂರು ಬಾರಿ ಭಾರತ ತಂಡಗಳು ಈ ಹಿಂದೆ ಸೆಮಿಫೈನಲ್ ತಲುಪಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಊಬರ್ ಕಪ್ನಲ್ಲಿ 2014 ಮತ್ತು 2016ರಲ್ಲಿ ಮಾತ್ರ ಭಾರತ ಮಹಿಳಾ ತಂಡ ಸೆಮಿಫೈನಲ್ವರೆಗೂ ಹೋಗಿದ್ದವು. ಅವಷ್ಟೇ ಭಾರತದ ಗರಿಷ್ಠ ಸಾಧನೆ ಎನಿಸಿತ್ತು.
ಭಾನುವಾರ ಮುಕ್ತಾಯಗೊಂಡ ಥಾಮಸ್ ಕಪ್ ಫೈನಲ್ನಲ್ಲಿ ಭಾರತದ 20 ವರ್ಷದ ಲಕ್ಷ್ಯ ಸೇನ್ ಇಂಡೋನೇಷ್ಯಾದ ಒಲಿಂಪಿಕ್ಸ್ ಪದಕ ವಿಜೇತ ಆಂಥೋನಿ ಗಿನ್ಟಿಂಗ್ರನ್ನು 8-21, 21-17, 21-16ರಿಂದ ಸೋಲಿಸಿದರು. ಎರಡನೇ ಪಂದ್ಯದಲ್ಲಿ ಭಾರತದ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2-1 ಗೇಮ್ಗಳಿಂದ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೋ ಜೋಡಿಯನ್ನು ಮಣಿಸಿದರು. ಮೂರನೇ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ನೇರ ಗೇಮ್ಗಳಿಂದ ಜೋನಾತನ್ ಕ್ರಿಸ್ಟೀಯನ್ನು ಪರಾಭವಗೊಳಿಸಿ ಭಾರತಕ್ಕೆ ಐತಿಹಾಸಿಕ ಟ್ರೋಫಿ ಗೆಲ್ಲಲು ನೆರವಾಗಿದ್ದರು.