ಬಿಜೆಪಿ ಅಧಿಕಾರಕ್ಕೆ ಬಂದರೆ ಜಗತ್ತಿನಲ್ಲೆಲ್ಲಾ ಭಗವಾಧ್ವಜ: ಅನಂತ್ಕುಮಾರ್ ಹೆಗಡೆ
ಶಿರಸಿ, ಮೇ 13: ನಮ್ಮ ಉದ್ದೇಶ ಎಂಎಲ್ಎ, ಎಂಪಿಗಳಾಗುವದಲ್ಲ. ಭಗವಾಧ್ವಜವನ್ನು ಜಗತ್ತಿನ ಮೂಲೆ ಮೂಲೆಯಲ್ಲಿಯೂ ನಿಲ್ಲಿಸುವುದು ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಶಿರಸಿಯಲ್ಲಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದ ಅವರು, ಬಿಜೆಪಿಯ ಉದ್ದೇಶ ಹಿಂದುತ್ವವನ್ನು ಪಸರಿಸುವುದು ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
'ಸಂಘಟನೆಯ ಎದುರು ವ್ಯಕ್ತಿ ಮುಖ್ಯವಾಗದೆಂಬ ಅಡಿಪಾಯವನ್ನು ಹಿರಿಯರು ಹಾಕಿಕೊಟ್ಟಿದ್ದಾರೆ. ಯಾರು ಅಳಿದರೂ ಉಳಿದರೂ ಸಂಘಟನೆ ಮುನ್ನಡೆಯುತ್ತದೆ. ಮನೆ- ಮಠಗಳನ್ನು ತೊರೆದು ಸಂಘಟನೆಯನ್ನು ಕಟ್ಟಿದ ಕಾರ್ಯಕರ್ತರ ಒಂದೇ ಒಂದು ಮತವನ್ನೂ ಹಾಳಾಗಲು ಬಿಡುವುದಿಲ್ಲ ಎಂದರು.
ನಾನಾಡಿದ ಪ್ರತಿ ಮಾತಿಗೂ ನಾನು ಬದ್ಧನಿದ್ದೇನೆ. ಅದನ್ನು ವಿವಾದ ಮಾಡುವವರು ಮಾಡಿಕೊಳ್ಳಲಿ ಎಂದಿರುವ ಅವರು,
ಗೆಲ್ಲುವ ಲೆಕ್ಕಾಚಾರದ ಜೊತೆಗೆ ನಮಗೆ ಮತ ಹಾಕದವರ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ ಎನ್ನುವುದನ್ನು ಮರೆಯುವಂತಿಲ್ಲ, ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಮೈಮರೆಯುವಂತಿಲ್ಲ ಎಂದರು.
ಮೋದಿಯೇ ಇರಲಿ, ಯಾವುದೇ ಅಲೆಯಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ. ಆ ಅಲೆಯನ್ನು ಹಿಡಿದಿಟ್ಟು ಗೆಲುವನ್ನು ತರುವವರು ಕಾರ್ಯಕರ್ತರು. ಜಿಲ್ಲೆಯಲ್ಲಿ ನನ್ನ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯ ಕರ್ತರ ಜೊತೆ ಕಾಣದಂತೆ ಗೆಲುವಿನ ದಾರಿಯನ್ನು ನಿಚ್ಚಳವಾಗಿಸಿದ ಕಾಂಗ್ರೆಸಿನ ಅಜ್ಞಾತ ವ್ಯಕ್ತಿಗೆ ಕೃತಜ್ಞತೆಗಳು ಎಂದಿದ್ದಾರೆ.
ಚುನಾವಣೆ ಯುದ್ಧದ ಹಾಗೆ. ಲೆಕ್ಕಾಚಾರದ ಜೊತೆಗೆ ಪೂರ್ವ ತಯಾರಿಯೂ ಅಷ್ಟೇ ಮುಖ್ಯವಾದುದು. ಕಾರ್ಯಕರ್ತರು ಯುದ್ಧೋಪಾದಿಯಲ್ಲಿಯೇ ವ್ಯೂಹ ರಚನೆ ಮಾಡಿದ್ದಾರೆ ಎಂದರು.
ಅನಂತ್ಕುಮಾರ್ ಹೆಗಡೆ ಅವರು ಈ ಮುಂಚೆಯೂ ತಮ್ಮ ಉಗ್ರ ಹಿಂದುತ್ವದ ಹೇಳಿಕೆಗಳಿಂದ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ಬಾರಿಯ ಭಗವಾದ್ವಜ ಹೇಳಿಕೆ ಸಹ ವಿವಾದದ ಸ್ವರೂಪ ಪಡೆಯುವ ಎಲ್ಲ ಸಾಧ್ಯತೆ ಇದೆ. ಅಧಿಕಾರಕ್ಕೆ ಬರುವುದು ಅಭಿವೃದ್ಧಿಗಾಗಿ, ಜನರ ಕಲ್ಯಾಣ ಮಾಡಲು ಎಂಬುದನ್ನು ಧಿಕ್ಕರಿಸಿ ಭಗವಾಧ್ವಜವನ್ನು ಜಗತ್ತಿನಲ್ಲಿ ಪ್ರತಿಷ್ಟಾಪಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.
ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದು ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದರು, ಇದು ಸಹ ವಿವಾದಕ್ಕೆ ಕಾರಣವಾಗಿತ್ತು.