ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ ಹಾಕಿದರೆ ಅರೆಸ್ಟ್
Recommended Video
ಶಿರಸಿ, ಡಿಸೆಂಬರ್ 12: ಕೋಮುಗಲಭೆಗೆ ಹರಡಲು ಮುಖ್ಯಕಾರಣಗಳಲ್ಲಿ ಒಂದಾದ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಕೋಮು ಗಲಭೆ ಪ್ರೇರೇಪಿಸುವ ಪೋಸ್ಟ್ಗಳನ್ನು ಹಂಚಿಕೊಳ್ಳುವವರನ್ನು, ಅದನ್ನು ಮೆಚ್ಚುವವರನ್ನು, ಶೇರ್ ಮಾಡುವವರನ್ನು ಬಂಧಿಸುವಂತೆ ಆದೇಶ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
ಸತತ ಒಂದು ವಾರದಿಂದ ಕೋಮು ಗಲಭೆಯಿಂದ ನರಳುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸರು ಹೆಣಗುತ್ತಿದ್ದು, ಇದೀಗ ಕೋಮು ಗಲಭೆ ಹರಡಲು ಪ್ರಮುಖ ಕಾರಣಗಳಲ್ಲೊಂದಾದ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಹಿಂಸಾರೂಪಕ್ಕೆ ತಿರುಗಿದ ಶಿರಸಿ ಬಂದ್, ಇಬ್ಬರಿಗೆ ಗಾಯ, ವಾಹನ ಜಖಂ
ನಿನ್ನೆ ಕೋಮು ದ್ವೇಷ ಉಂಟು ಮಾಡುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಶಿಕ್ಷಕನೋರ್ವನನ್ನು ಈಗಾಗಲೇ ಪೊಲೀಸರು ಬಂಧಿಸಿರುವುದಾಗಿ ಹೇಳಿದ ಜಿಲ್ಲಾಧಿಕಾರಿ ನಕುಲ್. ಕೋಮು ಸೌಹಾರ್ಧಕ್ಕೆ ಹಾನಿಯಾಗುವ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳ ಗುಂಪುಗಳಲ್ಲಿ ಹಂಚಿಕೊಂಡಲ್ಲಿ ಅಂತಹಾ ಗುಂಪುಗಳ ಅಡ್ಮಿನ್ಗಳ ಮೇಲೆ ಕೇಸು ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮೊದಲಿಗೆ ಹೊನ್ನಾವರ, ನಂತರ ನಿನ್ನೆ ಭಟ್ಕಳದ ನಂತರ ಇಂದು(ಡಿಸೆಂಬರ್ 12) ಶಿರಸಿಯಲ್ಲಿ ನಡೆದ ಹಿಂದೂ ಸಂಘಟನೆಗಳ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವ ಕಾರಣ ಪೊಲೀಸರ ಜೊತೆಗೆ ಸಶಸ್ತ್ರ ಮೀಸಲು ಪಡೆ, ಅಗ್ನಿಶಾಮಕ ದಳಗಳನ್ನು ನಿಯೋಜಿಸಿ, ಅಶ್ರುವಾಯುಗಳನ್ನು ಪ್ರಯೋಗಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ ಜಿಲ್ಲಾಡಳಿತ ನಿರತವಾಗಿದೆ.
ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಮೆಸೆಜ್ ಗಳು, ಚಿತ್ರಗಳು ಯಾರೇ ಕಳಿಸಲಿ ಅದರ ಸ್ಕ್ರೀನ್ ಶಾಟ್ ತೆಗೆದು ಜಿಲ್ಲಾಡಳಿತ ಅಥವಾ ಪೊಲೀಸರ ಗಮನಕ್ಕೆ ತರಬೇಕೆಂದು ಸಾರ್ವಜನಿಕರಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ ಎಂದು ನಕುಲ್ ಹೇಳಿದ್ದಾರೆ.
ಅನುಮಾನಾಸ್ಪದವಾಗಿ ಸತ್ತಿರುವ ಪರೇಶ ಮೆಸ್ತಾನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಇನ್ನೂ ಬಂದಿಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವರದಿಯ ಪರ ವಿರೋಧ ಚರ್ಚೆಗಳು ಆರಂಭವಾಗಿಬಿಟ್ಟಿವೆ ಎಂದು ಅವರು ಹೇಳಿದರು. ಅಂತಿಮ ವರದಿ ಬರಲು ಇನ್ನೂ ಸಮಯ ಇದೆ, ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಯಾರೂ ವದಂತಿಗಳಿಗೆ ಕಿವಿ ಕೊಡಬಾರದು ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿಟ್ಟರೆ ಇನ್ನೆಲ್ಲಾ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಮಾಮೂಲಿನಂತೆ ಇದೆ ಶಿರಸಿಯ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲಾಗುತ್ತಿದೆ. ನಿಷೇಧಾಜ್ಞೆ ಜಾರಿಗೊಳಿಸಿಲ್ಲ ಎಂದು ಅವರು ಹೇಳಿದರು.
ಘಟನೆಯ ಕುರಿತು ಸಂಜೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಹೇಳಿದ ಅವರು, ಎಷ್ಟು ಜನರನ್ನು ಬಂಧಿಸಲಾಗಿದೆ, ಉಂಟಾಗಿರುವ ನಷ್ಟ ಇನ್ನಿತರ ವಿಷಯಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.