ಬಾಯ್ಬಿಟ್ರೆ ದೇಶಭಕ್ತಿ ಮಾತನಾಡುವ ಸಂಸದ ಹೆಗಡೆ, ವಿಧಾನಸಭಾಧ್ಯಕ್ಷರು: ಯೋಧನ ಅಂತ್ಯಸಂಸ್ಕಾರದಿಂದ ದೂರ
ಶಿರಸಿ, ಏಪ್ರಿಲ್ 3: ಬಾಯಿ ಬಿಟ್ಟರೆ ದೇಶ, ಸೈನಿಕ, ಹಿಂದುತ್ವ ಎನ್ನುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಇದೀಗ ಉತ್ತರ ಕನ್ನಡಿಗರು ಕಿಡಿಕಾರುತ್ತಿದ್ದಾರೆ.
"ಬೊಗಳೆ ಭಾಷಣ ಬಿಡುವ ಇವರು ಕೇವಲ ರಾಜಕೀಯಕ್ಕೆ ಸೀಮಿತ ಹೊರತು, ಅಸಲಿ ದೇಶಭಕ್ತರಲ್ಲ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಮುಂದೆ ಓದಿ...
ಶಿರಸಿ ಪ್ರತ್ಯೇಕ ಜಿಲ್ಲೆ: ಹೋರಾಟಗಾರರಿಗೆ ಆಸಕ್ತಿ, ರಾಜಕೀಯ ನಾಯಕರುಗಳಿಗೆ ನಿರಾಸಕ್ತಿ
ಶುಕ್ರವಾರ ಬರುವುದಾಗಿ ಹೇಳಿದ್ದ ಸಂದೀಪ್
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಂಗಾರಖಂಡದ ಸಂದೀಪ್ ನಾಯ್ಕ 2014ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಬೆಳಗಾವಿಯಲ್ಲಿ ಮೊದಲು ಕರ್ತವ್ಯ ನಿರ್ವಹಿಸಿದ್ದ ಅವರು ರಾಂಚಿಯ ಹಜಾರಿಬಾಗ್ನ ಬಾರಿಯಲ್ಲಿ ಕೋಬ್ರಾ ಬೆಟಾಲಿಯನ್ 203ರ ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 29 ವರ್ಷ ವಯಸ್ಸಿನ ಸಂದೀಪ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯ ನಿಮಿತ್ತ 47 ದಿನಗಳ ರಜೆ ಕೂಡ ಮಂಜೂರಾಗಿತ್ತು. 2 ದಿನಗಳ ಹಿಂದೆ ತನ್ನ ಭಾವನಿಗೆ ಕರೆ ಮಾಡಿದ್ದ ಸಂದೀಪ್ ಶುಕ್ರವಾರ ಬರುವುದಾಗಿ ಹೇಳಿದ್ದರು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ರಾಂಚಿಯ ಹಜಾರಿಬಾಗ್ ನಲ್ಲಿ ಯೋಧ ಮೃತಪಟ್ಟಿದ್ದ. ಸ್ವಗ್ರಾಮಕ್ಕೆ ಜೀವಂತವಾಗಿ ಬರಬೇಕಿದ್ದ ಯೋಧ ಶವವಾಗಿ ಮರಳಿದ್ದರು.
ಸ್ವಗ್ರಾಮದಲ್ಲಿ ಯೋಧ ಸಂದೀಪ್ ಅಂತ್ಯಸಂಸ್ಕಾರ
ಹಜಾರಿಬಾಗ್ನಲ್ಲಿ ಮೃತಪಟ್ಟಿದ್ದ ಯೋಧ ಸಂದೀಪ್ ನಾಯ್ಕ ಅವರ ಅಂತ್ಯಸಂಸ್ಕಾರ ಶುಕ್ರವಾರ ಸ್ವಗ್ರಾಮದಲ್ಲಿ ನಡೆಯಿತು. ಗುರುವಾರ ಮೃತಪಟ್ಟಿದ್ದ ಸಂದೀಪ್ ಅವರ ಪಾರ್ಥಿವ ಶರೀರ ಅದೇ ದಿನ ರಾತ್ರಿ ಗೋವಾಕ್ಕೆ ವಿಮಾನದ ಮೂಲಕ ಅಗಮಿಸಿತು. ನಂತರ ಗೋವಾದಿಂದ ಶುಕ್ರವಾರ ಬೆಳಿಗ್ಗೆ ಭಾರತೀಯ ಸೇನೆಯ ಬೆಳಗಾವಿ ಸೇನಾ ಕಮಾಂಡೋ ಸಂದೀಪ ರಣಸಿಂಗ್ ಹಾಗೂ ಏಳು ಮಂದಿ ಸೇನಾನಿಗಳು ಮಿಲಿಟರಿ ವಾಹನದಲ್ಲಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಸಾವಿರಾರು ಜನರು ಪಾರ್ಥಿವ ಶರೀರವನ್ನು ಸುಮಾರು 3 ಕಿಲೋಮೀಟರ್ವರೆಗೆ ಮೆರವಣಿಗೆ ಮೂಲಕ ಮನೆಗೆ ಕರೆತಂದರು. ಈ ಸಂದರ್ಭದಲ್ಲಿ ನಿರಂತರವಾಗಿ ಜಯಘೋಷಗಳು ಮೊಳಗಿದವು. ಸುಮಾರು 1000ಕ್ಕೂ ಹೆಚ್ಚು ಜನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಇಲಾಖೆ ಕುಶಾಲತೋಪು ಹಾರಿಸುವ ಮೂಲಕ ಅಂತಿಮ ಗೌರವ ನಮನ ಸಲ್ಲಿಸಿತು.
ಶಾಸಕ, ಸಂಸದರ ಪತ್ತೆಯೇ ಇಲ್ಲ
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಕಾನಸೂರು, ನಾಣಿಕಟ್ಟಾ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಂಘ- ಸಂಸ್ಥೆಗಳ ಪ್ರಮುಖರು ಸೇರಿದಂತೆ ಅನೇಕರು ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.
ಆದರೆ, ವಿಧಾನಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಯೋಧನ ಅಂತ್ಯಸಂಸ್ಕಾರದ ವೇಳೆ ಸಿದ್ದಾಪುರ ತಾಲೂಕಿನ ಕೊಂಡ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಇನ್ನು ಸಂಸದ ಅನಂತಕುಮಾರ್ ಹೆಗಡೆಯವರು ಕೂಡ ತಮ್ಮ ಸ್ವಗ್ರಹದಲ್ಲೇ ಇದ್ದರೂ ಯೋಧನ ಪಾರ್ಥಿವ ಶರೀರ ನೋಡಲು ಅಥವಾ ಅವರಿಗೆ ಗೌರವ ಸಲ್ಲಿಸಲು ಭೇಟಿ ನೀಡುವ ಕಾರ್ಯ ಮಾಡಿಲ್ಲ. ಬೆನ್ನು ಮತ್ತು ಕಾಲು ನೋವಿನಿಂದ ಬಳಲುತ್ತಿರುವ ಅನಂತಕುಮಾರ್ ಹೆಗಡೆಗೆ ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಕೂಡ ಆಗಿದೆ. ಆದರೂ ಹೋಳಿಯ ಸಂದರ್ಭದಲ್ಲಿ ಯುವಕರೊಂದಿಗೆ ಬಣ್ಣ ಹಚ್ಚಿಕೊಂಡು ಹೋಳಿಯಾಟ ಆಡಿದ್ದಾರೆ. ಆದರೆ ಯೋಧನ ನೋಡಲು ಬರಲಾಗಿಲ್ಲ.
Recommended Video
ಸಂಸದರಿಂದ ಹಿಂದುತ್ವದ ಬೂಟಾಟಿಕೆ
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿರಸಿ ಅಜ್ಜೀಬಳದ ದಿನೇಶ್ ನಾಯ್ಕ, ಶಾಸಕ, ಸಂಸದರು ಹಿಂದುತ್ವ, ಕೋಮುವಾದದ ಅಮಲಲ್ಲಿ ತೇಲುತ್ತಿದ್ದಾರೆ. ಚುನಾವಣಾ ವೇಳೆ ಕ್ಷೇತ್ರ, ಸೈನಿಕರು, ಹಿಂದುತ್ವದ ಬೂಟಾಟಿಕೆಯ ಬೊಗಳೆ ಬಿಡುವ ನಮ್ಮ ಪ್ರತಿನಿಧಿಗಳು ಸೈನಿಕನ ಸಾವನ್ನು ಉಪೇಕ್ಷಿಸಿ ನಮಗೆ ದ್ರೋಹ ಬಗೆದಿದ್ದಾರೆ. ಇವರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಸಾರ್ವಜನಿಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
25 ವರ್ಷಗಳಿಂದ ದೇವರು, ಧರ್ಮದ ಕ್ಷುಲ್ಲಕ ರಾಜಕೀಯ ಮಾಡುತ್ತಿರುವ ಈ ಕ್ಷೇತ್ರದ ಶಾಸಕ, ಸಂಸದರು, ಜಾತ್ರೆ, ಹಬ್ಬ, ಧರ್ಮದ ನಾಟಕ ಮಾಡುತ್ತಾ ದೇವರ ಪೂಜೆ ಮಾಡುವ ಪುರೋಹಿತರಾಗಲು ಲಾಯಕ್ಕೇ ಹೊರತು ಇವರು ಜನಪ್ರತಿನಿಧಿಗಳಾಗಲು ಅಯೋಗ್ಯರು ಎಂದು ಜಿಲ್ಲಾ ಜನಪರ ವೇದಿಕೆಯ ಸದಸ್ಯ ಕೆ.ಟಿ.ನಾಯ್ಕ ಹೆಗ್ಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.