ಉತ್ತರಕನ್ನಡ: ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಜಗಳದ ಭಾರೀ ಸದ್ದು!
ಶಿರಸಿ, ಅಕ್ಟೋಬರ್ 6: ಉತ್ತರ ಕನ್ನಡದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸದ್ಯ ಕ್ಷೇತ್ರದ ಹಲವೆಡೆ ತಿರುಗಾಡಿ ಒಂದೆಡೆ ಪ್ರಶಾಂತ್ ದೇಶಪಾಂಡೆ ಪಕ್ಷ ಸಂಘಟನೆ ಮಾಡುತ್ತಿದ್ದರೆ, ಇನ್ನೊಂದೆಡೆ ಕ್ಷೇತ್ರದಲ್ಲಿ ಪಕ್ಷದ ಒಳಗಿನ ಜಗಳ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಪಕ್ಷದ ಒಳಗಿನ ಜಗಳ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ಶಿರಸಿ ತಾಲೂಕಿನ ಬಿಸಲಕೊಪ್ಪ ಘಟಕದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪ್ರಶಾಂತ್ ದೇಶಪಾಂಡೆ ವಿರುದ್ಧ ಮುನಿಸಿಕೊಂಡಿದ್ದು, ಬನವಾಸಿ ಬ್ಲಾಕ್ನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಬಹಿಷ್ಕರಿಸಿ ಪಕ್ಷದ ಒಳಗೆ ಪ್ರತಿಭಟನೆಗೆ ಇಳಿದಿದ್ದಾರೆ.
ಕಳೆದ ಸೆಪ್ಟೆಂಬರ್ 29ರ ಶಿರಸಿ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಬನವಾಸಿ ಬ್ಲಾಕ್ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಿಸಲುಕೊಪ್ಪ ಘಟಕದ ಮುಖಂಡರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಪಕ್ಷದ ಕಾರ್ಯಕ್ರಮಕ್ಕೆ ಕರೆಯದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪಕ್ಷದ ಮುಖಂಡರೊಬ್ಬರು ಕಿಡಿಕಾರಿದ್ದರಂತೆ.
ಈ ವಿಷಯವನ್ನು ಕೆಲ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಶಾಂತ್ ದೇಶಪಾಂಡೆಗೆ ತಿಳಿಸಿದ್ದು, ಇದು ಪ್ರಶಾಂತ್ ದೇಶಪಾಂಡೆ ಕಣ್ಣು ಕೆಂಪಾಗುವಂತೆ ಮಾಡಿದೆ. ಇದಲ್ಲದೇ ಕಳೆದ ಶುಕ್ರವಾರ ಬನವಾಸಿ ಬ್ಲಾಕ್ ಕಾಂಗ್ರೆಸ್ ಘಟಕದ ಕಾರ್ಯಕ್ರಮವನ್ನು ಪ್ರಶಾಂತ್ ದೇಶಪಾಂಡೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಸಮಾಧಾನ ತೋರಿದ ಮುಖಂಡರು ಬರಬಾರದು ಎಂದು ಬಿಸಲಕೊಪ್ಪ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ಕರೆ ಮಾಡಿ ಪ್ರಶಾಂತ್ ದೇಶಪಾಂಡೆ ಹೇಳಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ.
ತನ್ನ ವಿರುದ್ಧ ಅಸಮಾಧಾನ ತೋರಿದ ಮುಖಂಡನನ್ನು ಬೆಂಬಲಿಸಿದರೆ, ಬಿಸಲಕೊಪ್ಪ ಘಟಕದ ಅಧ್ಯಕ್ಷರು ಬೇಕಿದ್ದರೆ ಪಕ್ಷ ಬಿಟ್ಟು ಹೋಗುವಂತೆ ಪ್ರಶಾಂತ್ ದೇಶಪಾಂಡೆ ಹೇಳಿದ್ದಾರೆ ಎನ್ನಲಾಗಿದ್ದು, ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೂ ಸಿಟ್ಟು ತರಿಸಿದೆ. ಇದೇ ಕಾರಣಕ್ಕೆ ಬಿಸಲಕೊಪ್ಪ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಬನವಾಸಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, ಕಾರ್ಯಕ್ರಮ ಯಾವುದೇ ಕಾರಣಕ್ಕೂ ವಿಫಲ ಆಗಬಾರದು ಎಂದು ಬನವಾಸಿ ಬ್ಲಾಕ್ನ ಉಳಿದ 9 ಪಂಚಾಯತ್ ಘಟಕದಿಂದ ಅಧಿಕ ಜನರನ್ನು ಕರೆಸಿ ಪ್ರಶಾಂತ್ ದೇಶಪಾಂಡೆ ಕಾರ್ಯಕ್ರಮ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಬಿಸಲಕೊಪ್ಪ ಭಾಗದ ಕಾಂಗ್ರೆಸ್ ಮುಖಂಡ ಯಾವ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು, ಪ್ರಶಾಂತ್ ದೇಶಪಾಂಡೆ ಘಟಕದ ಅಧ್ಯಕ್ಷರಿಗೆ ನಿಜವಾಗಿಯೂ ಮುಖಂಡನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರಾ ಎನ್ನುವ ವಿಚಾರ ಮಾತ್ರ ಯಾರೂ ಸ್ಪಷ್ಟ ಪಡಿಸುತ್ತಿಲ್ಲ. ಇದೇ ಘಟಕ ಬನವಾಸಿ ಕಾಂಗ್ರೆಸ್ ಬ್ಲಾಕ್ನಲ್ಲಿ ಎರಡು ಗುಂಪಾಗಲು ಕಾರಣವಾಗಿದ್ದು, ಒಂದು ಗುಂಪು ಪ್ರಶಾಂತ್ ದೇಶಪಾಂಡೆ ಪರ ನಿಂತಿದ್ದರೆ, ಮತ್ತೊಂದು ಗುಂಪು ಪ್ರಶಾಂತ್ ದೇಶಪಾಂಡೆ ತನ್ನ ಹೇಳಿಕೆ ಹಿಂಪಡೆದು ಎಲ್ಲರೊಟ್ಟಿಗೆ ಕೆಲಸ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೊಂದೆಡೆ ಘಟನೆ ಖಂಡಿಸಿ ಬಿಸಲಕೊಪ್ಪ ಭಾಗದ ಕಾಂಗ್ರೆಸ್ ಪಕ್ಷದ ಯುವಕನೋರ್ವ ಗೋಬ್ಯಾಕ್ ಪ್ರಶಾಂತ್ ದೇಶಪಾಂಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಯುವಕನ ವಿರುದ್ಧ ಬನವಾಸಿ ಠಾಣೆಯಲ್ಲಿ ಬನವಾಸಿ ಬ್ಲಾಕ್ ಅಧ್ಯಕ್ಷರು ದೂರನ್ನು ಸಹ ನೀಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬನವಾಸಿ ಬ್ಲಾಕ್ನಲ್ಲಿ ಪಕ್ಷದ ನಾಯಕರ ನಡುವಿನ ಮುಸುಕಿನ ಗುದ್ದಾಟ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದು ಯಾವ ರೂಪ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಪ್ರಶಾಂತ್
ವರ್ತನೆ
ಬದಲಿಸಿಕೊಳ್ಳಬೇಕು:
"ಮುಂದಿನ
ವಿಧಾನಸಭಾ
ಚುನಾವಣೆಯಲ್ಲಿ
ಕ್ಷೇತ್ರದಿಂದ
ಕಾಂಗ್ರೆಸ್
ಪಕ್ಷದಿಂದ
ಸ್ಪರ್ಧಿಸುವ
ಪ್ರಶಾಂತ್
ದೇಶಪಾಂಡೆ
ತಮ್ಮ
ವರ್ತನೆ
ಬದಲಿಸಿಕೊಂಡರೆ
ಮುಂದಿನ
ದಿನದಲ್ಲಿ
ಭವಿಷ್ಯದಲ್ಲಿ
ಒಳ್ಳೆಯದಾಗಲಿದೆ,"
ಎಂದು
ಕ್ಷೇತ್ರದ
ಹೆಸರು
ಹೇಳದ
ಮುಖಂಡರೊಬ್ಬರು
ಹೇಳಿದ್ದಾರೆ.
"ಅಭ್ಯರ್ಥಿ ಇಲ್ಲದೇ ಸೊರಗಿದ್ದ ಯಲ್ಲಾಪುರ ಕ್ಷೇತ್ರಕ್ಕೆ ಪ್ರಶಾಂತ್ ದೇಶಪಾಂಡೆ ಆಗಮಿಸಿರುವುದು ಖುಷಿ ತಂದಿದೆ. ಕ್ಷೇತ್ರದಲ್ಲಿ ಉತ್ತಮವಾಗಿ ಸಂಘಟನೆ ಸಹ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಶಿವರಾಮ್ ಹೆಬ್ಬಾರ್ ವಿರುದ್ಧ ಗೆಲ್ಲಲು ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಆದರೆ ಇದರ ನಡುವೆ ಕಾರ್ಯಕರ್ತರ ವಿರುದ್ಧ ಪ್ರಶಾಂತ್ ದೇಶಪಾಂಡೆ ಈಗಲೇ ಸಿಟ್ಟಾದರೆ ಕಷ್ಟವಾಗಲಿದೆ. ಎಲ್ಲಾ ಕಾರ್ಯಕರ್ತರನ್ನು ಪ್ರೀತಿಯಿಂದ ಕಂಡು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯ ಪ್ರಶಾಂತ್ ದೇಶಪಾಂಡೆ ಮಾಡಲಿ," ಎಂದು ಹೇಳಿದ್ದಾರೆ.
Recommended Video