ಮಾಜಿ ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
Recommended Video
ಶಿರಸಿ, ಡಿಸೆಂಬರ್ 9: "ಬಿಜೆಪಿ ಅಭ್ಯರ್ಥಿಯಾದ ನಾನು ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುವೆ ಎಂದು ಹಿಂದೆಯೇ ಹೇಳಿದ್ದೆ. ಅದು ನಿಜವಾಗಿದೆ" ಎಂದು ಯಲ್ಲಾಪುರ- ಮುಂಡಗೋಡ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ ಹದಿನೈದು ವರ್ಷಗಳಲ್ಲಿ ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತಿದೆ. ಕ್ಷೇತ್ರದ ಪರಿಸ್ಥಿತಿ ಅರಿತಿದ್ದೆ. ಕಾರ್ಯಕರ್ತರ ಪಡೆ, ರಾಜ್ಯ ನಾಯಕರು, ಮುಖಂಡರು ನನಗಾಗಿ ಹಗಲಿರುಳು ದುಡಿದಿದ್ದಾರೆ" ಎಂದರು.
LIVE: ಗೆಲುವಿನತ್ತ ಬಿಜೆಪಿ: ಸರ್ಕಾರ ಸೇಫ್
"ಕ್ಷೇತ್ರದ ಅಭ್ಯುದಯ, ಅಭಿವೃದ್ಧಿ, ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬೇಕೆಂದು ಜನತಾ ಜನಾರ್ಧನ ಮತ್ತೊಮ್ಮೆ ತೀರ್ಪು ನೀಡಿದ್ದಾನೆ. ನಾನು ಅನರ್ಹ ಅಲ್ಲ ಎಂದು ಕ್ಷೇತ್ರದ ಜನರು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ನನ್ನನ್ನು ಸೋಲಿಸಲು ರಾಜ್ಯದ ಕಾಂಗ್ರೆಸ್ ಪಡೆ, ಮಾಜಿ ಮುಖ್ಯಮಂತ್ರಿ, ಜಿಲ್ಲೆಯಲ್ಲಿ ಮೂರು ದಶಕಗಳ ಕಾಲ ರಾಜಕಾರಣ ಮಾಡಿಕೊಂಡು ಬಂದವರು ಹಗಲಿರುಳು ಪರಿಶ್ರಮಿಸಿದ್ದಾರೆ. ಅವರಿಗೂ ದೇವರು ಒಳ್ಳೆಯದನ್ನು ಮಾಡಲಿ" ಎಂದರು.
"ಇದು ರಾಜಕಾರಣ. ಕಾಂಗ್ರೆಸ್ ನ ಅಭ್ಯರ್ಥಿ ಭೀಮಣ್ಣ ನಾಯ್ಕ ವೈಯಕ್ತಿಕವಾಗಿ ನನ್ನ ಸ್ನೇಹಿತರು. ಅವರು ಇದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಲಿ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನು ಮಾಡಬೇಕೆನ್ನುವುದೇ ನಮ್ಮ ಉದ್ದೇಶ. ಮತದಾರರಿಗೆ ಕರೆಕೊಟ್ಟಿದ್ದೆ, ರಾಜ್ಯದಲ್ಲಿ ಅತಂತ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ತರಬೇಡಿ ಎಂದು. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಇರಲಿದ್ದು, ಉತ್ತಮ ಆಡಳಿತ ನೀಡಲಿದೆ" ಎಂದು ಹೇಳಿದರು.
ಯಲ್ಲಾಪುರ ಉಪ ಚುನಾವಣೆ: ಶಿವರಾಂ ಹೆಬ್ಬಾರ್ ಗೆಲುವು
"ಇಷ್ಟು ದಿನ ನನ್ನನ್ನ ಅನರ್ಹ ಮಾಡಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ ಅವರೇ ಇಂದು ಅನರ್ಹರಾಗಿದ್ದಾರೆ. ಮತದಾರರು ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿಶೀಲ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ" ಎಂದರು.