ಶಿರಸಿ ಪ್ರತ್ಯೇಕ ಜಿಲ್ಲೆ: ಹೋರಾಟಗಾರರಿಗೆ ಆಸಕ್ತಿ, ರಾಜಕೀಯ ನಾಯಕರುಗಳಿಗೆ ನಿರಾಸಕ್ತಿ
ಕಾರವಾರ, ಫೆಬ್ರವರಿ 27: ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಘಟ್ಟದ ಮೇಲಿನ ತಾಲೂಕುಗಳನ್ನು ಒಗ್ಗೂಡಿಸಿ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಹೋರಾಟ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಇತ್ತ ಘಟ್ಟದ ಮೇಲಿನ ರಾಜಕೀಯ ನಾಯಕರುಗಳು ಮಾತ್ರ ಈ ಬಗ್ಗೆ ಧ್ವನಿ ಎತ್ತದೇ ಮೌನ ವಹಿಸಿರುವುದು ಪ್ರತ್ಯೇಕ ಜಿಲ್ಲೆಯ ಬಗ್ಗೆ ನಾಯಕರುಗಳಿಗೆ ಆಸಕ್ತಿ ಇಲ್ಲವೇ ಎನ್ನುವ ಮಾತು ಕೇಳಿ ಬರುತ್ತಿದೆ.
ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಒಟ್ಟು 12 ತಾಲೂಕುಗಳಿದ್ದು, ಜಿಲ್ಲಾ ಕೇಂದ್ರ ಕಾರವಾರಕ್ಕೆ ಘಟ್ಟದ ಮೇಲಿನ ತಾಲೂಕುಗಳಿಂದ ಓಡಾಟ ಮಾಡಲು ಕಷ್ಟ. ಅಲ್ಲದೇ ಜಿಲ್ಲಾ ಕೇಂದ್ರ ದೂರ ಇರುವುದರಿಂದ ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಹೋರಾಟಗಾರರ ಕೂಗಾಗಿದೆ.
ಶಿರಸಿ ಜಿಲ್ಲೆ ರಚನೆ ಕುರಿತು ಸಚಿವ ಹೆಬ್ಬಾರ್ ಮಹತ್ವದ ಹೇಳಿಕೆ
ಪ್ರಭಾವಿ ನಾಯಕರುಗಳು ಘಟ್ಟದ ಮೇಲಿನವರು
ಆದರೆ ಘಟ್ಟದ ಮೇಲಿನ ತಾಲೂಕಿನ ಜನರು ಒಂದೆಡೆ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಜಿಲ್ಲೆಯ ಎಲ್ಲಾ ಪ್ರಭಾವಿ ನಾಯಕರುಗಳು ಘಟ್ಟದ ಮೇಲಿನವರೇ ಆಗಿದ್ದರೂ, ಯಾರೂ ಪ್ರತ್ಯೇಕ ಜಿಲ್ಲೆಯ ಬಗ್ಗೆ ಧ್ವನಿ ಎತ್ತದೇ ಮೌನ ವಹಿಸಿದ್ದಾರೆ. ಸದ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಮ್ ಹೆಬ್ಬಾರ್, ಸಂಸದ ಅನಂತ್ಕುಮಾರ್ ಹೆಗಡೆ, ಮಾಜಿ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲರೂ ಘಟ್ಟದ ಮೇಲಿನ ತಾಲೂಕಿನವರೇ ಆಗಿದ್ದಾರೆ.
ಇಂದಿಗೂ ಉತ್ತರ ಕನ್ನಡ ಜಿಲ್ಲೆಯ ಸಂಪೂರ್ಣ ಹಿಡಿತವನ್ನು ಘಟ್ಟದ ಮೇಲಿನ ತಾಲೂಕಿನ ರಾಜಕಾರಣಿಗಳ ಕೈನಲ್ಲಿಯೇ ಇದ್ದು, ಕರಾವಳಿ ಭಾಗದಲ್ಲಿ ಅಷ್ಟೊಂದು ದೊಡ್ಡ ನಾಯಕರು ಈವರೆಗೂ ಬೆಳೆದಿಲ್ಲ. ಪ್ರತ್ಯೇಕ ಜಿಲ್ಲೆಯ ಬಗ್ಗೆ ಘಟ್ಟದ ಮೇಲಿನ ತಾಲೂಕಿನ ಜನರು ಧ್ವನಿ ಎತ್ತಿ, ಶಿರಸಿ ಬಂದ್ ಮಾಡಿ ಹೋರಾಟ ಸಹ ಮಾಡಿದ್ದಾರೆ. ಆದರೆ ಈ ಬಗ್ಗೆ ಈ ನಾಲ್ವರೂ ಪ್ರಭಾವಿ ನಾಯಕರುಗಳು ಮಾತ್ರ ಧ್ವನಿ ಎತ್ತಿಲ್ಲ.
ನಾಯಕರುಗಳು ಮಾತ್ರ ಮೌನವಹಿಸಿದ್ದಾರೆ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಆ ಭಾಗದ ಪ್ರಭಾವಿ ನಾಯಕ ಸಚಿವ ಆನಂದ್ ಸಿಂಗ್ ಗಟ್ಟಿಧ್ವನಿಯೇ ಪ್ರಮುಖ ಕಾರಣವಾಗಿತ್ತು. ಅಲ್ಲದೇ ಈವರೆಗೆ ಯಾವೆಲ್ಲಾ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆಯೋ ಅಲ್ಲಿ ರಾಜಕೀಯ ನಾಯಕರ ನೇತೃತ್ವದಲ್ಲಿಯೇ ಹೋರಾಟ ನಡೆದು ಅಂತಿಮವಾಗಿ ಜಿಲ್ಲೆ ವಿಂಗಡಿಸಲಾಗಿತ್ತು. ಆದರೆ ಸದ್ಯ ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟ ದೊಡ್ಡ ನಾಯಕರಿಲ್ಲದ ಹೋರಾಟವಾಗಿದ್ದು, ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದರೂ ನಾಯಕರುಗಳು ಮಾತ್ರ ಮೌನವಹಿಸಿದ್ದಾರೆ.
ಯಶಸ್ವಿಯಾಗುವುದು ಕಷ್ಟಸಾಧ್ಯ
ಸದ್ಯ ಜಿಲ್ಲೆಯ ಸಂಪೂರ್ಣ ಹಿಡಿತ ತಮ್ಮ ಕೈನಲ್ಲಿದ್ದು, ಪ್ರತ್ಯೇಕ ಜಿಲ್ಲೆಯನ್ನು ಮಾಡಿ ಕರಾವಳಿ ಭಾಗದಲ್ಲಿ ತಮ್ಮ ಹಿಡಿತವನ್ನು ಕೈ ಬಿಡುವ ಆಸಕ್ತಿಯೂ ಜಿಲ್ಲೆಯ ಪ್ರಭಾವಿ ನಾಯಕರುಗಳಿಗೆ ಇಲ್ಲವೆನ್ನುವುದು ಕೆಲವರ ಅಭಿಪ್ರಾಯ. ನಾಯಕರುಗಳ ಬೆಂಬಲ ಇಲ್ಲದೇ ಎಷ್ಟೇ ಹೋರಾಟ ಮಾಡಿದರೂ ಅದು ಯಶಸ್ವಿಯಾಗುವುದು ಕಷ್ಟಸಾಧ್ಯ ಎನ್ನುವ ಮಾತು ಇದೀಗ ಕೇಳಬರುತ್ತಿದ್ದು, ಪ್ರತ್ಯೇಕ ಜಿಲ್ಲೆ ಹೋರಾಟ ಮುಂದೆ ಯಾವ ರೂಪ ಪಡೆಯಲಿದೆ? ನಾಯಕರುಗಳು ತಮ್ಮ ನಿಲುವನ್ನು ಬದಲಿಸುತ್ತಾರೋ, ಎನ್ನುವುದನ್ನು ಕಾದು ನೋಡಬೇಕಾಗಿದೆ.
Recommended Video
ನಾಯಕರುಗಳ ಅಸಮಾಧಾನ
ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟದ ಬಗ್ಗೆ ಘಟ್ಟದ ಮೇಲಿನ ತಾಲೂಕಿನ ನಾಯಕರುಗಳೇ ಅಸಮಾಧಾನ ಹೊರ ಹಾಕಿದ್ದಾರೆ. ಕೆಲ ದಿನದ ಹಿಂದೆ ಕಾರವಾರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಬಂದ್ಗೂ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೂ ಸಂಬಂಧವಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮಾಜಿ ಶಾಸಕ ಸುನಿಲ್ ಹೆಗಡೆ ಸಹ ಅಖಂಡ ಜಿಲ್ಲೆಯಾಗಿಯೇ ಉತ್ತರ ಕನ್ನಡ ಮುಂದುವರೆಯಲಿ ಎನ್ನುವ ಹೇಳಿಕೆ ನೀಡಿದ್ದಾರೆ. ಅಲ್ಲದೇ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಸಹ ಪ್ರತ್ಯೇಕ ಜಿಲ್ಲೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಸಂಸದ ಅನಂತ್ಕುಮಾರ್ ಹೆಗಡೆ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಈ ಬಗ್ಗೆ ಯಾವ ನಿಲುವು ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.