ಶಿರಸಿ ಮಾರಿಕಾಂಬಾ ಜಾತ್ರೆಗೆ ಮುಹೂರ್ತ ನಿಗದಿ
ಶಿರಸಿ, ಡಿಸೆಂಬರ್ 24: ರಾಜ್ಯದ ಅತಿದೊಡ್ದ ಹಾಗೂ ಐತಿಹಾಸಿಕ ಶಿರಸಿ ಮಾರಿಕಾಂಬಾ ಜಾತ್ರೆಗೆ ಮುಹೂರ್ತ ನಿಗದಿಯಾಗಿದೆ.
ಫೆಬ್ರವರಿ 27 ರಿಂದ ಮಾರ್ಚ್ 7 ರವರೆಗೆ ಶಿರಸಿಯಲ್ಲಿ ಶ್ರೀಮಾರಿಕಾಂಬಾ ಜಾತ್ರೆ ಜರುಗಲಿದೆ. ಭಾನುವಾರದಂದು ದೇವಾಲಯದಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಮೂಹೂರ್ತವನ್ನು ಅಧಿಕೃತವಾಗಿ ಘೋಷಿಸಲಾಯಿತು.
ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಜಾತ್ರಾ ದಿನಾಂಕದ ಬಗ್ಗೆ ಮಾಹಿತಿಗಳು ಹರಿದಾಡಿದ್ದರೂ ಇಂದು ದೇವಾಲಯದ ವತಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ, ಸದಸ್ಯರಾದ ಮನೋಹರ ಮಲ್ಮನೆ, ಶಶಿಕಲಾ ಚಂದ್ರಪಟ್ಟಣ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಹಾಗೂ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?
ಮಾರಿಜಾತ್ರೆ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಈ ಜಾತ್ರೆ ಬೇರೆ ಕ್ಷೇತ್ರಗಳ ಜಾತ್ರೆ, ರಥೋತ್ಸವಗಳಿಗಿಂತ ವಿಭಿನ್ನ. ಬೇರೆಡೆ, ಮೂಲ ವಿಗ್ರಹ ದೇವಸ್ಥಾನದಲ್ಲೇ ಇದ್ದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ.
ಅಂದಿನಿಂದಲೇ ಜಾತ್ರೆ ಆರಂಭ: ಆದರೆ ಶಿರಸಿ ಜಾತ್ರೆಯಲ್ಲಿ ಏಳಡಿ ಎತ್ತರದ ಮೂಲ ದೇವಿಯ ವಿಗ್ರಹವನ್ನೇ ಅಲಂಕಾರ ಸಮೇತ ಹೊರ ತಂದು, ಮದುವೆ ನೆರವೇರಿಸಿ, ಮೆರವಣಿಗೆಯಲ್ಲಿ ಬಿಡಕಿ ಬಯಲಿ'ಗೆ( ಜಾತ್ರಾ ಗದ್ದುಗೆ ಇಡುವ ಸ್ಥಳ) ಕೊಂಡೊಯ್ಯಲಾಗುತ್ತದೆ. ಅಂದಿನಿಂದಲೇ ಜಾತ್ರೆ ಆರಂಭ.
ಅಲ್ಲಿಂದ ಒಂಭತ್ತು ದಿನಗಳ ಕಾಲ ಬಯಲಿನಲ್ಲೇ ನೆಲೆಸಿ ಭಕ್ತರಿಗೆ ಸಮೀಪ ದರ್ಶನ ನೀಡುತ್ತಾಳೆ. ಒಂಭತ್ತು ದಿನಗಳ ಜಾತ್ರಾ ಮಹೋತ್ಸವ, ಪೂಜೆ, ಧಾರ್ಮಿಕ ವಿಧಿ ವಿಧಾನಗಳ ನಂತರ ದೇವಿಯ ವಿಗ್ರಹವನ್ನು ವಾಪಸ್ಸು ಕೊಂಡೊಯ್ಯಲಾಗುತ್ತದೆ. ಅಂದು ಸಾಂಕೇತಿಕ ಬಲಿ ನಡೆದು ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ, ಗೋವಾ, ಮಹಾರಾಷ್ಟ್ರ, ಆಂಧ್ರಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಿಯ ಸಮೀಪ ದರ್ಶನದಿಂದ ಭಕ್ತರು ಪುಳಕಿತರಾಗುತ್ತಾರೆ. ಈ ಒಂಭತ್ತು ದಿನ ಶಿರಸಿಯ ಚಹರೆಯೇ ಬದಲಾಗಿಬಿಡುತ್ತದೆ. ಯಕ್ಷಗಾನ, ಬಯಲಾಟ, ನಾಟಕ, ಇಂದ್ರಜಾಲ, ಸರ್ಕಸ್, ಜೈಂಟ್ ವ್ಹೀಲ್ ಸೇರಿದಂತೆ ನಾನಾ ಆಟಗಳು, ಬಣ್ಣಬಣ್ಣದ ಬೆಳಕಿನಲಂಕಾರ ರಾತ್ರಿಹೊತ್ತು ಗಂಧರ್ವ ಲೋಕವನ್ನೇ ಸೃಷ್ಟಿಸಿಬಿಡುತ್ತದೆ.