ವಿಧಾನ ಪರಿಷತ್ ಸದಸ್ಯರಾಗಿ ಯಲ್ಲಾಪುರದ ಶಾಂತಾರಾಮ ಸಿದ್ಧಿ ಅಚ್ಚರಿ ಆಯ್ಕೆ
ಶಿರಸಿ, ಜುಲೈ 22: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಗೆ ನಾಮ ನಿರ್ದೇಶಿತ ಸದಸ್ಯರಾಗಿ ಯಲ್ಲಾಪುರದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಹೊರಡಿಸಿದ್ದಾರೆ.
Recommended Video
ಶಾಂತಾರಾಮ ಸಿದ್ಧಿ ಕಳೆದ ಹಲವಾರು ದಶಕಗಳಿಂದ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದು, ವನವಾಸಿ ಕಲ್ಯಾಣಾಶ್ರಮದ ವಿವಿಧ ಹಂತದ ಜವಾಬ್ದಾರಿ ನಿರ್ವಹಿಸಿದ್ದರು. ವಿಧಾನ ಪರಿಷತ್ ಗೆ ಅವರನ್ನು ಆಯ್ಕೆ ಮಾಡಿದ್ದು, ಬುಡಕಟ್ಟು ಜನಾಂಗಕ್ಕೆ ನೀಡಿದ ಗೌರವವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಶಿರಸಿಯಲ್ಲಿ ಲಾಕ್ ಡೌನ್ ಉಲ್ಲಂಘಿಸುವವರ ಮೇಲೆ 'ಡ್ರೋಣ್' ಕಣ್ಣು
ಮೂರು ದಶಕಗಳಿಂದ ಪಶ್ಚಿಮ ಘಟ್ಟದ ವನವಾಸಿಗಳ ನಡುವೆ ಕೆಲಸ ಮಾಡುತ್ತಿರುವ ಶಾಂತಾರಾಮ ಸಿದ್ಧಿಯವರನ್ನು ಮೇಲ್ಮನೆಗೆ ರಾಜ್ಯಪಾಲರು ನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ.
ಶಾಂತಾರಾಮ ಸಿದ್ಧಿ ಅವರು ಬುಡಕಟ್ಟು ಸಮುದಾಯದ ಮೊದಲ ಪದವೀಧರರಾಗಿದ್ದಾರೆ. 7 ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಪ್ರತಿಭಾವಂತರು. ಪದವಿಯ ನಂತರ ವನವಾಸಿಗಳ ನಡುವೆ ಕೆಲಸ ಮಾಡಲು ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತರಾದರು.
ಶಿರಸಿ-ಯಲ್ಲಾಪುರ ನಡುವಿನ ಹಿತ್ಲಳ್ಳಿ ಗ್ರಾಮದಲ್ಲಿನ ಪುಟ್ಟ ಮನೆಯಲ್ಲಿ ನೆಲಸಿರುವ ಶಾಂತಾರಾಮ ಸಿದ್ಧಿ, ಈ ಹಿಂದೆ ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದರು. ಕಾಲೇಜು ದಿನಗಳಿಂದ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು.