ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಸೇವಾಶುಲ್ಕ ಹೆಚ್ಚಳ: ಭಕ್ತರ ಆಕ್ರೋಶ
ಶಿರಸಿ, ಸೆಪ್ಟೆಂಬರ್ 1: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಭಕ್ತರ ಸೇವೆಗೆ ದುಬಾರಿ ಶುಲ್ಕ ವಿಧಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದರಿಂದ ಮಾರಿಕಾಂಬಾ ದೇವಸ್ಥಾನವನ್ನು ವ್ಯಾಪಾರ ಕೇಂದ್ರ ಮಾಡಿದ ಆಡಳಿತ ಮಂಡಳಿ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರನ್ನು ಸೆಳೆಯುವ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಧಾರ್ಮಿಕ ಸೇವೆಗಳಿಗೆ ಆಡಳಿತ ಮಂಡಳಿ ಇದೀಗ ದುಬಾರಿ ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಕುರಿತು ಶಿರಸಿ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಸಭೆ ನಡೆಸಿ, ಕರಡು ಪ್ರತಿ ಹೊರಡಿಸಿ ದೇವಸ್ಥಾನದ ಸೂಚನಾ ಫಲಕಕ್ಕೆ ಹಾಕಿದ್ದು, ಸೆ.5ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಕೋರಿದೆ.
ಕಳೆದ ಹಲವು ವರ್ಷದಿಂದ ಸ್ಥಿರತೆ ಕಂಡುಕೊಂಡಿದ್ದ ದೇವಸ್ಥಾನದ ಸೇವಾ ದರವನ್ನು ಪರಿಷ್ಕರಿಸಲು ಹಾಲಿ ಧರ್ಮದರ್ಶಿ ಮಂಡಳಿ ನಿರ್ಧರಿಸಿದೆ. ಬಹುತೇಕ ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಹೆಚ್ಚಿಸಲಾಗಿದೆ. ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆಗೆ 10 ರೂ. ಬದಲು 100 ರೂ., ಮೃತ್ಯುಂಜಯ ಶಾಂತಿಗೆ 1001 ರೂ. ಬದಲು 3500 ರೂ., ಸತ್ಯನಾರಾಯಣ ಕಥೆಗೆ 325 ರೂ. ಬದಲು 1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ 6,001 ರೂ.ನಿಂದ 25,000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಕಾರ್ತಿಕ ದೀಪೋತ್ಸವದ ಒಂದು ದಿನದ ಸೇವೆಯ ಮೊತ್ತವನ್ನು 650 ರೂ. ನಿಂದ 5,000, ಶಾಶ್ವತ ಸೇವೆಗೆ 6001 ರೂ. ಬದಲು 10,001 ರೂಪಾಯಿಗೆ ಏರಿಸಲಾಗಿದೆ.
ನಿರಂತರ ಸೇವೆ ಪಾರಾಯಣ 2001 ರೂ. ಬದಲಾಗಿ 5,000, ಶಾಶ್ವತ ಸೇವೆಗೆ 6001 ರೂ. ಬದಲು 10,000ಕ್ಕೆ ಏರಿಕೆ ಮಾಡಿ ಧರ್ಮದರ್ಶಿ ಮಂಡಳಿ ಕರಡು ಪಟ್ಟಿಯಲ್ಲಿ ಪ್ರಕಟಣೆ ಮಾಡಿದೆ.
ಆದರೆ ಇದೀಗ ಧರ್ಮದರ್ಶಿ ಮಂಡಳಿಯ ಈ ಕ್ರಮ ಇದೀಗ ಮಾರಿಕಾಂಬಾ ದೇವಿಯ ಭಕ್ತರಲ್ಲಿ ವಿರೋಧಕ್ಕೆ ಕಾರಣವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಏಕಾಏಕಿ ಏರಿಕೆ ಸರಿಯಲ್ಲ, ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲಾ, ಶ್ರದ್ಧಾ ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ವಸೂಲಿ ಮಾಡುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತ ವಲಯದಲ್ಲಿ ಕೇಳಿಬಂದಿದೆ.
ಇನ್ನು ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವ ಶಿರಸಿ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರವೀಂದ್ರ. ಜಿ. ನಾಯ್ಕರವರು "ಈಗಿನ ಕಾಲಮಾನಕ್ಕೆ ಅನುಗುಣವಾಗಿ ಸೇವಾದರ ಪರಿಷ್ಕರಿಸಲು ನಿಯಮದ ಪ್ರಕಾರ ಮುಂದಾಗಿದ್ದೇವೆ. ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ," ಎಂದಿದ್ದಾರೆ.