ಹಿರಿಯ ಪತ್ರಕರ್ತ ರವೀಂದ್ರ ಭಟ್ ಬಳಗುಳಿ ನಿಧನ
ಶಿರಸಿ, ನವೆಂಬರ್ 30: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಹಾಗೂ ವಕೀಲ ರವೀಂದ್ರ ಭಟ್ ಬಳಗುಳಿ ಅವರು ಮಂಗಳವಾರ ಬೆಳಗ್ಗೆ ನಿಧನರಾದರು.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಬಳಗುಳಿ ಗ್ರಾಮದವರಾಗಿದ್ದ ರವೀಂದ್ರ ಭಟ್, ವಕೀಲ ವೃತ್ತಿಯ ಜೊತೆಗೆ ಸಿದ್ದಾಪುರ ತಾಲೂಕಿನ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ರವೀಂದ್ರ ಭಟ್ರವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ರವೀಂದ್ರ ಭಟ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕತೆಗಾರರಾಗಿದ್ದ ರವೀಂದ್ರ ಭಟ್, ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಮತ್ತು ತಂದೆ ವಿ.ಜಿ. ಭಟ್ರ ಪ್ರಭಾವದಿಂದ ಸಾಮಾಜಿಕ ಬದುಕಿನಲ್ಲಿ ಗುರುತಿಸಿಕೊಂಡರೂ, ತನ್ನ ಅನನ್ಯ ವ್ಯಕ್ತಿತ್ವದಿಂದ ಸಮಾಜಮುಖಿಯಾಗಿ ಪ್ರಸಿದ್ಧರಾಗಿದ್ದರು. ಕಳೆದ 30 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
ರವೀಂದ್ರ ಭಟ್ರವರ ನಿಧನಕ್ಕೆ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು, ವಕೀಲರು, ರಾಜಕೀಯ ಮುಖಂಡರು, ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Recommended Video