ಎಂಎಲ್ಸಿ ಚುನಾವಣೆಗ; ಘೋಟ್ನೇಕರ್ ನಿರಾಸಕ್ತಿ, ನಿವೇದಿತ್ ಆಳ್ವಾ ಕಣಕ್ಕೆ?
ಶಿರಸಿ, ಆಗಸ್ಟ್ 15; ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಕಳೆದ ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದ ಎಸ್. ಎಲ್. ಘೋಟ್ನೇಕರ್ ಈ ಬಾರಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಅಭ್ಯರ್ಥಿಯಾಗಿ ಕಣಕ್ಕೆ ಮಗನನ್ನು ಇಳಿಸಲು ಮಾರ್ಗರೇಟ್ ಆಳ್ವಾ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ಎರಡು ಬಾರಿ ಜಿಲ್ಲೆಯಿಂದ ವಿಧಾನ ಪರಿಷತ್ ಚುನಾವಣೆಗೆ ಹಳಿಯಾಳದ ಎಸ್. ಎಲ್. ಘೋಟ್ನೇಕರ್ ಸ್ಪರ್ಧಿಸುತ್ತಿದ್ದು ಎರಡು ಬಾರಿಯೂ ಜಯಭೇರಿ ಬಾರಿಸಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಗಟ್ಟಿಯಾಗಿದ್ದರಿಂದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಟ್ನೇಕರ್ ಸುಲಭವಾಗಿ ಗೆಲುವನ್ನು ಪಡೆದಿದ್ದರು.
ಎಲೆಕ್ಷನ್ ಟಿಕೆಟ್ ಅಂದ್ರೆ ಬಸ್ ಟಿಕೆಟ್ ಅಲ್ಲ: ಆರ್.ವಿ. ದೇಶಪಾಂಡೆ
ಆದರೆ ಈ ಬಾರಿ ಘೋಟ್ನೇಕರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದು ಹಳಿಯಾಳ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೇ ಕೆಲವೆಡೆ ತಾನು ವಿಧಾನ ಪರಿಷತ್ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೆಯನ್ನು ಸಹ ಕೊಟ್ಟಿದ್ದು ಈ ಹಿನ್ನಲೆಯಲ್ಲಿ ಕಾಂಗ್ರೆಸ್ನಿಂದ ಅಭ್ಯರ್ಥಿಯಾಗಲು ಕೆಲವರು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ.
ಹಳಿಯಾಳ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಪಡೆದ ಆರ್.ವಿ.ದೇಶಪಾಂಡೆ
ಇದರ ನಡುವೆ ಜಿಲ್ಲೆಯಲ್ಲಿ ತನ್ನ ಪುತ್ರ ನಿವೇದಿತ್ ಆಳ್ವಾನ ರಾಜಕೀಯ ನೆಲೆ ಭದ್ರಪಡಿಸಬೇಕು ಎಂದು ಪ್ರಯತ್ನ ನಡೆಸುತ್ತಿರುವ ಮಾರ್ಗರೇಟ್ ಆಳ್ವಾ ಮಗನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಪ್ರಯತ್ನ ಪ್ರಾರಂಭಿಸಿದ್ದಾರೆ ಎಂಬ ಸುದ್ದಿ ಇದೆ. ಈ ಹಿಂದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ನಿವೇದಿತ್ಗೆ ಟಿಕೆಟ್ ಕೇಳಿದ್ದು, ಟಿಕೆಟ್ ಕೈ ತಪ್ಪಿತ್ತು. ಇದಾದ ನಂತರ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸಹ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದು ಅಲ್ಲೂ ಟಿಕೆಟ್ ಸಿಕ್ಕಿರಲಿಲ್ಲ.
ವರಿಷ್ಠರು, ದೇಶಪಾಂಡೆ ಎದುರೇ ಟಿಕೆಟ್ ಕೇಳಿದ ಘೋಟ್ನೇಕರ್!
ಶಿರಸಿ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿ
ಸದ್ಯ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಕೆಪಿಸಿಸಿ ಕ್ಷೇತ್ರದ ಉಸ್ತುವಾರಿ ಸುಷ್ಮಾ ರಾಜಗೋಪಾಲ ನಡುವೆ ಬಾರಿ ಪೈಫೋಟಿ ನಡೆಯುತ್ತಿದೆ. ಇವರ ನಡುವೆ ಟಿಕೆಟ್ ಪಡೆಯುವುದು, ಒಂದೊಮ್ಮೆ ಟಿಕೆಟ್ ಪಡೆದರು ಗೆಲುವು ಪಡೆಯುವುದು ಕಷ್ಟ ಸಾಧ್ಯ ಎನ್ನುವುದನ್ನು ಮನಗೊಂಡು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ಗೆಲುವಿಗೆ ಪ್ರಯತ್ನ ನಡೆಸುವ ಚಿಂತನೆಯನ್ನು ಮಾರ್ಗರೇಟ್ ಆಳ್ವಾ ಹಾಗೂ ನಿವೇದಿತ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಮಾರ್ಗರೇಟ್ ಆಳ್ವಾ ಸಂಪರ್ಕಿಸಿದ್ದಾರೆ
ಇನ್ನೊಂದೆಡೆ ಎಸ್. ಎಲ್. ಘೋಟ್ನೇಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕಾಂಗ್ರೆಸ್ ಪ್ರಮುಖ ಮುಖಂಡರ ಜೊತೆ ಮಾರ್ಗರೇಟ್ ಆಳ್ವಾ ಸಂಪರ್ಕವನ್ನು ಸಹ ಮಾಡಿದ್ದಾರೆ ಎಂಬ ಮಾತಿದೆ. ತನ್ನ ಪುತ್ರ ಒಂದೊಮ್ಮೆ ಕಣಕ್ಕೆ ಇಳಿದರೆ ಗೆಲುವಿಗಾಗಿ ದುಡಿಯುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ತನಗೆ ಹಳಿಯಾಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸಲು ಸಹಾಯ ಮಾಡುವಂತೆ ಮಾರ್ಗರೇಟ್ ಆಳ್ವಾ ಬಳಿ ಘೋಟ್ನೇಕರ್ ಸಹ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾತು ಪಕ್ಷದ ವಲಯದಿಂದ ಕೇಳಿ ಬಂದಿದೆ.
ಆರ್. ವಿ. ದೇಶಪಾಂಡೆ ಚಿಂತನೆ
ಇದರ ನಡುವೆ ಕಾಂಗ್ರೆಸ್ ಮುಖಂಡರಾದ ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರವೀಂದ್ರ ನಾಯ್ಕ, ಎಸ್. ಕೆ. ಭಾಗ್ವತ್, ಶಂಭು ಶೆಟ್ಟಿ ಸೇರಿದಂತೆ ಹಲವು ನಾಯಕರುಗಳ ಹೆಸರು ಸಹ ಕೇಳಿ ಬಂದಿದೆ. ಜಿಲ್ಲೆಯ ಈ ಬಾರಿ ಬಿಜೆಪಿ ಬಲಗೊಂಡಿರುವ ಹಿನ್ನಲೆಯಲ್ಲಿ ಮತದಾರನನ್ನು ಮನವೊಲಿಸುವ ಶಕ್ತಿ ಇರುವ ನಾಯಕನನ್ನೇ ಕಣಕ್ಕೆ ಇಳಿಸಿ ಗೆಲುವನ್ನು ಪಡೆಯಬೇಕು ಎನ್ನುವುದು ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರ ಚಿಂತನೆ.
ಬಿಜೆಪಿಯಲ್ಲೂ ಹೆಚ್ಚಿದ ಪೈಪೋಟಿ
ಈ ಬಾರಿ ಎಂಎಲ್ಸಿ ಚುನಾವಣೆಗೆ ಬಿಜೆಪಿಯಲ್ಲಿ ಸಹ ಟಿಕೆಟ್ಗಾಗಿ ಈಗಿನಿಂದಲೇ ಪೈಪೋಟಿ ಜೋರಾಗಿದೆ. ಪ್ರಮುಖವಾಗಿ ಹಿರಿಯ ವಕೀಲ, ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ, ಅಂಕೋಲಾದ ಭಾಸ್ಕರ್ ನಾರ್ವೇಕರ್, ಕುಮಟಾದ ನಾಗರಾಜ ನಾಯಕ ತೋರ್ಕೆ, ಸುಬ್ರಾಯ್ ವಾಳ್ಕೆ, ಗಣಪತಿ ಉಳ್ವೇಕರ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ.
ಜಿಲ್ಲೆಯ 5 ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರುಗಳೇ ಇರುವ ಹಿನ್ನಲೆಯಲ್ಲಿ ಬಿಜೆಪಿಗೆ ಗೆಲುವು ಸುಲಭವಾಗಬಹುದು ಎನ್ನುವ ಚಿಂತನೆ ಕೆಲ ನಾಯಕರದ್ದಾಗಿದ್ದು, ಈ ಹಿನ್ನಲೆಯಲ್ಲಿ ಈಗಿನಿಂದಲೇ ನಾಯಕರುಗಳಿಗೆ ಮನವೊಲಿಸುವ ಕಾರ್ಯಕ್ಕೆ ಇಳಿದಿದ್ದಾರೆ.
Recommended Video