ಮಾರಿಕಾಂಬಾ ಕ್ಷೇತ್ರ ಶಿರಸಿಗೂ ಕಾಲಿಟ್ಟ ಕೊರೊನಾ ವೈರಸ್
ಶಿರಸಿ, ಮೇ 21: ಇಲ್ಲಿಯವರೆಗೂ ನಿಶ್ಚಿಂತೆಯಿಂದಿದ್ದ ಮಲೆನಾಡಿನ ಶಿರಸಿ ತಾಲ್ಲೂಕಿಗೂ ಮಹಾಮಾರಿ ಕೊರೊನಾ ವೈರಸ್ ಕಾಲಿಟ್ಟಿದ್ದು, ಮಹಾರಾಷ್ಟ್ರದಿಂದ ಬಂದಿರುವ 9 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಮೂರು ಕುಟುಂಬದ ಎಂಟು ಮಂದಿಗೆ ಹಾಗೂ ದುಬೈನಿಂದ ವಾಪಸ್ಸಾಗಿದ್ದ ಓರ್ವನಿಗೆ ಇಂದು ಕೊರೊನಾ ವೈರಸ್ ದೃಢಪಟ್ಟಿದೆ. ಆದರೆ, ಇವರೆಲ್ಲರೂ ಒಂದೇ ದಿನ, ಅಂದರೆ ಮೇ 15 ರಂದು ನಗರಕ್ಕೆ ಬಂದಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ಕೊರೊನಾಗೆ ಚಿಕಿತ್ಸೆ ಕೊಡುವ ವೈದ್ಯರಿಂದಾಗಿ ಬೆಚ್ಚಿದ ಶಿರಸಿ!
ಇನ್ನೊಂದು ಪ್ರಕರಣದಲ್ಲಿ ಮುಂಬೈನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಮೂಲದ ನಿವಾಸಿ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವಿನ ಜೊತೆ ಮೇ 14 ಕ್ಕೆ ಮುಂಬೈ ಬಿಟ್ಟು, ಮೇ 15 ರಂದು ಶಿರಸಿಗೆ ಬಂದಿದ್ದರು. ಇದರಲ್ಲಿ ಹೆಂಡತಿ ಹಾಗೂ ಒಂದು ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದ್ದು, ಗಂಡನ ವರದಿ ಬರುವುದು ಇನ್ನೂ ಬಾಕಿ ಇದೆ.
ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಟ್ಟಿದ್ದರು
ಮುಂಬೈನಲ್ಲಿ ವಾಸವಿದ್ದ ಶಿರಸಿ ಮೂಲದ ಐವತ್ತು ಮಂದಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದು, ಮೇ 14ರಂದು ಮುಂಬೈನಿಂದ ಬಿಟ್ಟು ಮೇ 15 ರಂದು ಶಿರಸಿ ನಗರಕ್ಕೆ ಆಗಮಿಸಿದ್ದರು. ಶಿರಸಿಗೆ ಬರುವ ವಿಚಾರ ತಿಳಿದ ತಾಲ್ಲೂಕು ಆಡಳಿತ, ನಗರದ ಚಿಪಗಿ ಗೇಟ್ ಬಳಿ ವಾಹನವನ್ನು ತಡೆದು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಿತ್ತು. ಇದರಲ್ಲಿ ಆರು ಮತ್ತು ಏಳು ವರ್ಷದ ಹೆಣ್ಣು ಮಕ್ಕಳನ್ನು ಸೇರಿ ಕುಟುಂಬದ ಐವರಿಗೂ ಸೋಂಕು ದೃಢಪಟ್ಟಿದೆ.
ಒಬ್ಬನಿಗೆ ಸೋಂಕು, ಇನ್ನೊಬ್ಬನ ವರದಿಗೆ ಕಾಯುತ್ತಿದ್ದಾರೆ
ಇನ್ನೊಂದು ಪ್ರಕರಣದಲ್ಲಿ ಧಾರವಾಡದಲ್ಲಿ ವ್ಯವಹಾರ ಮಾಡುತ್ತಿದ್ದ ಶಿರಸಿ ಮೂಲದ ವ್ಯಕ್ತಿ ಕೆಲಸದ ನಿಮಿತ್ತ ಮಾರ್ಚ್ 18 ರಂದು ಮುಂಬೈಗೆ ತೆರಳಿದ್ದರು. ಲಾಕ್ ಡೌನ್ ಆದಾಗಿನಿಂದ ಸ್ನೇಹಿತನೋರ್ವನ ಜೊತೆ ಮುಂಬೈನ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಕಾಲ ಕಳೆಯುತ್ತಿದ್ದ ಈತ, ಮಾರ್ಚ್ 14 ರಂದು ಮುಂಬೈ ಬಿಟ್ಟು, ಮಾರ್ಚ್ 15 ರಂದು ಶಿರಸಿಗೆ ಆಗಮಿಸಿದ್ದ. ಆತನನ್ನು ಹಾಗೂ ಆತನ ಸ್ನೇಹಿತನನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಗಡಿಯಲ್ಲಿಯೇ ತಡೆದು ಕಳುಹಿಸಲಾಗಿತ್ತು. ಈಗ ಓರ್ವನಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಮತ್ತೋರ್ವನ ವರದಿಗಾಗಿ ಕಾಯಲಾಗುತ್ತಿದೆ.
ಹಳಿಯಾಳದಲ್ಲಿ ಲಾಕ್ ಡೌನ್ ನಡುವೆ ನಮಾಜ್; 20 ಮಂದಿ ಬಂಧನ
ದುಬೈನಿಂದ ಬಂದ ಯುವಕನಿಗೆ ಸೋಂಕು
ದುಬೈನಲ್ಲಿ ಶಿಪ್ ಓಂದರಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಮೂಲದ ಯುವಕ ಮಾರ್ಚ್ 1ರಂದು ದುಬೈನಿಂದ ಬಿಟ್ಟು ಮುಂಬೈಗೆ ವಾಪಾಸ್ ಆಗಿದ್ದ. ಮೇ 14ರಂದು ಶಿರಸಿಗೆ ಹೊರಟು ಮೇ 15ರಂದು ಆಗಮಿಸಿದ್ದ. ತನಗೆ ಶಿಪ್ ನಲ್ಲಿ ರ್ಯಾಪಿಡ್ ಟೆಸ್ಟ್ ಮಾಡಿದ್ದು, ನೆಗೆಟಿವ್ ಬಂದಿದೆ ಎಂದು ಹೇಳಿದ್ದರೂ ಗಡಿಯಲ್ಲಿ ಅಧಿಕಾರಿಗಳು ಆತನನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಿ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಆತನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತರ ಜೊತೆ ಪ್ರಯಾಣ
ಇಂದು ಪಾಸಿಟಿವ್ ಬಂದವರ ಜೊತೆ ಮುಂಬೈನಿಂದ ಜಿಲ್ಲೆಗೆ ಬರುವಾಗ ಜಿಲ್ಲೆಯ ಹೊನ್ನಾವರ ಹಾಗೂ ಜೊಯಿಡಾ ರಾಮನಗರ ಮೂಲದವರು ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ. ಪಾಸಿಟಿವ್ ಬಂದ ತಕ್ಷಣ ಪ್ರಯಾಣ ಮಾಡಿದವರ ಗಮನಕ್ಕೂ ಜಿಲ್ಲಾಡಳಿತ ವಿಷಯವನ್ನ ತಿಳಿಸಿದ್ದು, ಅವರ ಮೇಲೂ ನಿಗಾ ಇಡಲಾಗಿದೆ. ಇವರ ಜತೆಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇನ್ನು 20 ಜನರ ಗಂಟಲಿನ ದ್ರವದ ಮಾದರಿಯ ವರದಿಗಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 66 ಕ್ಕೆ ಏರಿಕೆ ಆಗಿದ್ದು, 54 ಸಕ್ರೀಯ ಸೋಂಕಿತರು ಇದ್ದಂತಾಗಿದೆ.