ಮೊಗೇರ್ ಸಮುದಾಯ ಪರಿಶಿಷ್ಟ ಜಾತಿಗೆ ಸೇರ್ಪಡೆ, ಶಿರಸಿಯಲ್ಲಿ ಸಂಭ್ರಮಾಚರಣೆ
ಶಿರಸಿ, ನವೆಂಬರ್ 11 : ಸರ್ವೋಚ್ಚ ನ್ಯಾಯಾಲಯವು ಮೊಗೇರ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಶುಕ್ರವಾರ ಮೊಗೇರ್ ಸಮುದಾಯದವರು ಸಂಭ್ರಮಾಚರಣೆ ಮಾಡಿದರು.
ನ್ಯಾಯಾಲಯವು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಡಕಿ ಬೈಲಿನಲ್ಲಿ ಪಟಾಕಿ ಸಿಡಿಸಿ ಮೊಗೇರ್ ಸಮುದಾಯದವರು ಸಂಭ್ರಮಾಚರಣೆಯನ್ನು ಮಾಡಿದರು. ಸಂಜೆ 6 ಗಂಟೆಯ ವರೆಗೆ ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿಷೇಧಾಜ್ಞೆ ಇದ್ದ ಕಾರಣ ತದ ನಂತರ ಸಂಭ್ರಮಾಚರಣೆ ನಡೆಸಲಾಯಿತು.
ಸರ್ವೋರ್ಚ ನ್ಯಾಯಾಲಯದ ತೀರ್ಪಿನಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ಹಾಗೂ ಶಿಕ್ಷಣದಲ್ಲಿಯೂ ಉಳಿದ ಪರಿಶಿಷ್ಟ ವರ್ಗದವರಂತೆ ಮೀಸಲಾತಿ ಸಿಗಬಹುದೆಂಬ ವಿಶ್ವಾಸವನ್ನು ಸಮುದಾಯದ ಪ್ರಮುಖರು ವ್ಯಕ್ತಪಡಿಸಿದರು.
ತೀರ್ಪಿನ ಕುರಿತು ಅಭಿಪ್ರಾಯ ಹಂಚಿಕೊಂಡ ಮಾಜಿ ಶಾಸಕ ಹಾಗೂ ಸಮುದಾಯದ ಮುಖಂಡ ವಿವೇಕಾನಂದ ವೈದ್ಯ, "ಸುಪ್ರೀಂ ಕೋರ್ಟ್ ತೀರ್ಪು ಉತ್ತರ ಕನ್ನಡ ಜಿಲ್ಲೆಯ ನಮ್ಮ ಸಮಾಜದ ಜನರಿಗೆ ಸಂತಸ ತಂದಿದೆ.
ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿಯೂ ಅನೇಕರು ಮೀಸಲಾತಿ ತಪ್ಪಿಸಲು ಪ್ರಯತ್ನಿಸಿದ್ದರು. ಸರ್ಕಾರವೂ ಸಹ ಭಾಗಿಯಾಗಿತ್ತು. ಆದರೆ, ಈಗ ನ್ಯಾಯಾಲಯ ತೀರ್ಪನ್ನು ನೀಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ " ಎಂದರು.