ಶಾಲೆಯಂಗಳದಲ್ಲಿ ಹಣ್ಣುಗಳು: ಯಡಳ್ಳಿಯಲ್ಲಿ ಮಿಡ್ ಡೇ ಫ್ರೂಟ್ ಅಭಿಯಾನ
ಶಿರಸಿ, ಜೂನ್.06 : ತಾಲೂಕು ಯುವಾ ಬ್ರಿಗೇಡ್ ವತಿಯಿಂದ ಬುಧವಾರ ಯಡಳ್ಳಿಯಲ್ಲಿ ಮಿಡ್ ಡೇ ಫ್ರೂಟ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಯುವಾ ಬ್ರಿಗೇಡ್ ವಿಶಿಷ್ಟ ಕಲ್ಪನೆಯಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಶಾಲೆಗಳಲ್ಲಿ ಮಳೆಗಾಲದ ವೇಳೆ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಪೌಷ್ಟಿಕ ಆಹಾರವೂ ಸಿಕ್ಕಂತಾಗುತ್ತದೆ ಎಂಬ ದೃಷ್ಟಿಯಲ್ಲಿ ಈ ಯೋಜನೆ ರೂಪಿಸಲಾಗಿದೆ.
ಬೆಂಗಳೂರಲ್ಲಿ 50 ಸಾವಿರ ಸಸಿಗಳನ್ನು ನೆಡಲು ಬಿಡಿಎ ಸಿದ್ಧತೆ
ಕಸಿ ಮಾಡಿದ ಮಾವು-ಹಲಸು-ನೇರಳೆ-ಸೀತಾಫಲಗಳೆಲ್ಲ ಬಲು ಬೇಗ ಫಲ ಕೊಟ್ಟು ಬಾಗಿ ನಿಲ್ಲುತ್ತವೆ. ಶಾಲೆಯ ಮಕ್ಕಳು ಆಟ-ಪಾಠಗಳ ಜೊತೆಗೆ ಹಣ್ಣುಗಳನ್ನೂ-ಮರದ ನೆರಳನ್ನೂ ಆಸ್ವಾದಿಸಬಹುದಾಗಿದೆ.
ಸರ್ಕಾರ ಮಿಡ್ ಡೇ ಮೀಲ್ (ಮಧ್ಯಾಹ್ನದ ಬಿಸಿ ಊಟ) ಕೊಡುವಂತೆ ವಿದ್ಯಾರ್ಥಿಗಳಿಗೆ ಮಿಡ್ ಡೇ ಫ್ರೂಟ್ (ಮಧ್ಯಾಹ್ನ ರುಚಿರುಚಿಯಾದ ಹಣ್ಣು) ಸಿಗುವ ವ್ಯವಸ್ಥೆ ಸಿಗಲಿ ಎಂಬುದು ಯುವಾ ಬ್ರಿಗೇಡ್ ಸಂಘಟನೆಯ ಆಶಯ.
ವಿಶ್ವ ಪರಿಸರ ದಿನವೂ ಆದ ಇಂದು ಶಿರಸಿ ತಾಲೂಕಿನ ಯಡಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾವು, ಹಲಸು, ಬೆಣ್ಣೆ ಹಣ್ಣು, ಮುರುಗಲು ಮತ್ತಿತರ ಹಣ್ಣಿನ ಮರದ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
ಜೊತೆಗೆ ಮಿಡ್ ಡೆ ಫ್ರೂಟ್ ಎಂಬ ವಿನೂತನ ಮತ್ತು ಬಹುಪಯೋಗಿ ಯೋಜನೆಯ ಶುಭಾರಂಭ ಆಯಿತು. ಗೌರಿ ಮಹಿಳಾ ಸಮಾಜದವರು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಿಡ್ ಡೇ ಫ್ರೂಟ್ ಯೋಜನೆಯ ಕುರಿತು ಹಾಗೂ ಗಿಡಗಳ ಪಾಲನೆ ಪೋಷಣೆಗಳ ಕುರಿತು ಮಕ್ಕಳಿಗೆ ತಿಳಿಸಲಾಯಿತು.
ತಾಲೂಕು ಯುವಾ ಬ್ರಿಗೇಡ್ ಸಂಚಾಲಕ ಹರೀಶ್ ಧೂಳಳ್ಳಿ, ಶಿಶಿರ್ ಅಂಗಡಿ, ರಾಘವೇಂದ್ರ ರಾಗಿ ಹೊಸಳ್ಳಿ, ಶ್ರವಣಕುಮಾರ್, ಕುಮಾರ್ ಪಟಗಾರ್, ರಾಕೇಶ್, ಮಂಗೇಶ್, ಮತ್ತಿತರು ಪಾಲ್ಗೊಂಡಿದ್ದರು.