ಕುತುಬ್ ಮೀನಾರ್ , ತಾಜಮಹಲ್ ಹಿಂದೂ ದೇವಾಲಯ : ಅನಂತಕುಮಾರ ಹೆಗಡೆ
ಶಿರಸಿ, ನವೆಂಬರ್ 15: ದೇಶದ ಸುಪ್ರಸಿದ್ಧ ಕುತುಬ್ ಮಿನಾರ್ 27 ನಕ್ಷತ್ರಗಳನ್ನು ಒಳಗೊಂಡ ಹಿಂದೂ ಹಾಗೂ ಜೈನ ದೇವಾಲಯವಾಗಿದೆ. ಇದನ್ನು ಪ್ರಾಚ್ಯವಸ್ತು ಇಲಾಖೆ ದೃಢಿಕರಿಸಿದೆ. ಅದರಂತೇ ತಾಜ್ ಮಹಲ್ ಸಹ ಶಿವನ ದೇವಾಲಯವಾಗಿದ್ದು, ಹಿಂದೂ ದೇವಸ್ಥಾನವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ನಗರದ ವಿಕಾಸ ಆಶ್ರಮ ಮೈದಾನದಲ್ಲಿ ಮಂಗಳವಾರ ನಡೆದ " ಪರಿವರ್ತನಾ ರ್ಯಾಲಿ " ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟಿಪ್ಪುವು ಒಬ್ಬ ಇಲಿ. ಅವನ ಬಾಲವನ್ನು ಹಿಡಿದುಕೊಂಡು ಓಡಾಡುವುದು ಮುಖ್ಯಮಂತ್ರಿ. ಇಂದು ಅವನ ಜಯಂತಿಯನ್ನು ಆಚರಿಸುವ ಸರ್ಕಾರವನ್ನು ಬದಲಿಸದಿದ್ದರೆ ಮುಂದೆ ಒಸಮಾ ಬಿನ್ ಲಾಡೆನ್, ಕಸಬ್ , ಹೈದರಾಲಿಯ ಜಯಂತಿಯನ್ನೂ ಸಹ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿ, ಇದು ನಡೆಯಬಾರದೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ಬದಲಾವಣೆ ಬೇಕಿದೆ.
ಅಲ್ಲದೇ ಉತ್ತರ ಕನ್ನಡದಲ್ಲಿ ಈ ಬಾರಿ ಹೊಸ ಇತಿಹಾಸವನ್ನು ರಚನೆ ಆಗುತ್ತದೆ. 6 ಕ್ಕೆ 6 ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ. ಉಳಿದ ಪಕ್ಷಗಳಲ್ಲಿ ಯಾರೂ ನಾಯಕರೇ ಉಳಿದಿಲ್ಲ. ಇರುವ ಒಂದಿಬ್ಬರಿಗೂ ಯಾವತ್ತು ಬೇಕಾದರೂ ತುಳಸಿ ನೀರು ಬಿಡಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ " ಇಂದು ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಮರೆತಿದ್ದಾರೆ. ಅತ್ಯಾಚಾರಿ ರಾಜ್ಯ ಉಸ್ತುವಾರಿ, ಭ್ರಷ್ಟ ಮುಖ್ಯಮಂತ್ರಿ ಹೊಂದಿರುವ ದೇವರಗತಿಯ ಕಂಪನಿ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ನೆಲ ಕಚ್ಚಲಿದೆ.
ಅಲ್ಲದೇ ಒಂದು ಕಾಲದಲ್ಲಿ ಸಂಸತ್ ನಲ್ಲಿ 350 ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ಕಾಂಗ್ರೆಸ್ ಇಂದು ಅಧಿಕೃತ ವಿರೋಧ ಪಕ್ಷವೂ ಸಹ ಅಲ್ಲ. ಅವರ ಅಧಿಕಾರವಧಿಯಲ್ಲಿ ಜನರನ್ನು ಸಂಪೂರ್ಣ ಮರೆತು ಖಜಾನೆಯನ್ನು ಲೂಟಿ ಮಾಡಿದ್ದಾರೆ. ಅದರಂತೇ ಇಂದು ಇಲ್ಲಿ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ, ಬಡವರ ಮನೆಗಳಿಗೆ ಆರ್.ಟಿ.ಸಿ ಸಿಗುತ್ತಿಲ್ಲ.
ಅತಿಕ್ರಮಣದಾರರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಕಾಂಗ್ರೆಸ್ ಮುಕ್ತ ಭಾರತವಾಗಲು ಮೊದಲು ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಗಳನ್ನು ಪಡಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಶಿರಸಿ ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿಯನ್ನು ಜನರಿಗೆ ತಿಳಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಮುಖಂಡರಾದ ಕುಮಾರ ಬಂಗಾರಪ್ಪ, ಭಾರತಿ ಶೆಟ್ಟಿ, ರವಿಕುಮಾರ ಹಾಗೂ ಪ್ರಮುಖರಾದ ವಿ.ಎಸ್.ಪಾಟೀಲ್, ಹರ್ತಾಳ ಹಾಲಪ್ಪ, ತಿಂಗಳೆ ವಿಕ್ರಮಾರ್ಜುನ ಹೆಗಡೆ, ಸುಮನಾ ಕಾಮತ್, ಎಲ್.ಟಿ.ಪಾಟೀಲ್, ಪ್ರಮೋದ ಹೆಗಡೆ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಪದಾಧಿಕಾರಿಗಳು ಇದ್ದರು.