ನೋಡಬನ್ನಿ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆ ಸಂಭ್ರಮ...
ಶಿರಸಿ, ಮಾರ್ಚ್ 01: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ-ಯಲ್ಲಾಪುರ ತಾಲೂಕಿನ ಜನರನ್ನು ಸದ್ಯಕ್ಕೆ ಮಾತನಾಡಿಸುವ ಗೋಜೇ ಬೇಡ! ಯಾಕಂದ್ರೆ ಎಲ್ಲರೂ ಬ್ಯುಸಿ, ಬ್ಯುಸಿ, ಬ್ಯುಸಿ! ಯಾರ ಬಾಯಲ್ಲಿ ಕೇಳಿ ಜಾತ್ರೆಯದ್ದೇ ಸುದ್ದಿ, ಸದ್ದು! ರಾಜ್ಯದಲ್ಲೇ ಅತ್ಯಂತ ದೊಡ್ಡ ಜಾತ್ರೆ ಎಂಬ ಖ್ಯಾತಿ ಪಡೆದ ಶ್ರೀ ಮಾರಿಕಾಂಬಾ ಜಾತ್ರೆಗೆ ಈಗಾಗಲೇ ಅದ್ಧೂರಿ ಚಾಲನೆ ದೊರೆತಿದೆ.
ಫೆ.27 ರಿಂದ ಆರಂಭವಾಗಿರುವ ಜಾತ್ರೆ ಮಾರ್ಚ್ 7 ರವರೆಗೆ ನಡೆಯಲಿದ್ದು, ಲಕ್ಷಾಂತರ ಜನರು ಶ್ರೀ ಮಾರಿಕಾಂಬೆಯ ಅದ್ಧೂರಿ ರಥೋತ್ಸವವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಶಿರಸಿಯ ಬಿಡಕಿ ಬೈಲಿನ ಗದ್ದುಗೆಯಲ್ಲಿ ರಥದ ತಾಯಿ ಮಾರಿಕಾಂಬೆಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿಯ ಕಲ್ಯಾಣ ಮಹೋತ್ಸವ ಫೆ.27 ರಂದೇ ಜರುಗಿದೆ. ಫೆ.28 ರಂದು ಮಾರಿಕಾಂಬಾ ದೇವಿಯ ರಥ ದೇವಾಲಯದ ಆವರಣದಿಂದ ಹೊರಟಿದ್ದು, ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಪ್ರಮುಖ ಉತ್ಸವಗಳಲ್ಲೊಂದಾಗಿದೆ. ಜಾತ್ರೆ ಇರುವ ವರ್ಷ ಶಿರಸಿಯಲ್ಲಿ ಯಾರೂ ಹೋಳಿ ಹಬ್ಬ ಆಚರಿಸುವುದಿಲ್ಲ ಎಂಬುದು ಮತ್ತೊಂದು ವಿಶೇಷ.
ಏನಿದರ ಇತಿಹಾಸ?
ಶಿರಸಿ ಜಾತ್ರೆಯ ಇತಿಹಾಸದ ಬಗ್ಗೆ ತಿಳಿಯುವುದಕ್ಕೆ ಹೋದರೆ, ಆಗಿನ ಚೆನ್ನಾಪುರ ಸೀಮಿಯಲ್ಲಿದ್ದ ಶಿರಸಿ ಪುಟ್ಟ ಹಳ್ಳಿಯಾಗಿತ್ತಷ್ಟೆ. ಹತ್ತಿರದ ಹಾನಗಲ್ಲಿನಲ್ಲಿ ಆಗ ವಿಜೃಂಬಣೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಒಂದು ವರ್ಷ ಜಾತ್ರೆ ಮುಗಿದ ನಂತರ ದೇವಿ ಮಾರಿಕಾಂಬೆಯ ವಿಗ್ರಹ ಮತ್ತು ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಇಟ್ಟು ಶಿರಸಿಗೆ ತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಳ್ಳರು ದೇವಿಯ ವಿಗ್ರಹ ಮತ್ತು ಆಭರಣವಿದ್ದ ಪೆಟ್ಟಿಗೆಯನ್ನು ಕದ್ದು, ಆಭರಣಗಳನ್ನೆಲ್ಲ ದೋಚಿ, ದೇವಿಯ ವಿಗ್ರಹವನ್ನು ಅಲ್ಲೇ ಹತ್ತಿರದ ಕೆರೆಯೊಳಗೆ ಹಾಕಿ ಹೋದರು. ನಂತರ ಈ ಮಾರಿಕಾಂಬೆ ಬಸವ ಎಂಬ ಭಕ್ತನ ಕನಸಿನಲ್ಲಿ ಬಂದು ನಅನು ನಿಮ್ಮೂರಿನ ಕೆರೆಯಲ್ಲಿದ್ದೇನೆ ಎಂದಂತೆ ಭಾಸವಾಗಿ, ಬೆಳಿಗ್ಗೆ ಎದ್ದು ಹತ್ತಿರದ ಕೆರೆಗೆ ಹೋಗಿ ನೋಡಿದಾಗ ಪೆಟ್ಟಿಗೆಯೊಂದು ತೇಲುತ್ತಿರುವುದು ಕಂಡಿತು. ಆ ಪೆಟ್ಟಿಗೆಯನ್ನು ತೆರೆದಾಗ ದೇವಿಯ ವಿಗ್ರಹವಿರುವುದು ಸ್ಪಷ್ಟವಾಯಿತು. ಈ ವಿಗ್ರಹ ಸಿಕ್ಕ ಕೆರೆಗೆ ಈಗಲೂ ದೇವಿಕೆರೆ ಎಂದೇ ಕರೆಯಲಾಗುತ್ತದೆ.
ದೇವಿಯ ಪ್ರತಿಷ್ಠಾಪನೆ
ಹೀಗೆ ಕೆರೆಯಲ್ಲಿ ಸಿಕ್ಕ ದೇವಿಯ ವಿಗ್ರಹವನ್ನು ಕ್ರಿ.ಶಸ.1689 ರಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು, ಮಂಗಳವಾರ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯ್ತು. ಅನ್ಯಜಾತಿಯ ಹುಡುಗನೊಬ್ಬ ಬ್ರಾಹ್ಮಣ ಹುಡುಗಿಯನ್ನು ವೇದಾಧ್ಯಯನದ ಆಸೆಯಿಂದ ಸುಳ್ಳು ಹೇಳಿ ಮದುವೆಯಾಗಿ, ನಂತರ ಮಾಂಸ ತಿಂದು ಸಿಕ್ಕಿಬಿದ್ದು, ಪತ್ನಿಯ ಕೋಪಕ್ಕೆ ಬಲಿಯಾದ ಪತಿಯ ಕತೆಯೂ ಈ ಜಾತ್ರೆಯ ಹಿಂದಿದೆ ಎಂದು ಕೆಲವು ದಾಖಲೆಗಳು ತಿಳಿಸುತ್ತವೆ.
ಪ್ರಾಣಿಬಲಿ ನಿಷೇಧ
ಜಾತ್ರೆಯ ಆರಂಭದ ದಿನ ದೇವಿಯ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಹಿಂದು ಸಾಂಪ್ರದಾಯಿಕ ಮದುವೆ ಮಹೋತ್ಸವದಂತೇ ಇದನ್ನೂ ನಡೆಸಲಾಗುತ್ತದೆ. ದೇವಿ ಜಾತ್ರೆಗೆ ಕೋಣವನ್ನು ಬಲಿ ಕೊಡುವ ಪದ್ಧತಿ ಮೊದಲು ಜಾರಿಯಲ್ಲಿತ್ತು. ಆದರೆ 1933 ರಲ್ಲಿ ಶಿರಸಿಗೆ ಆಗಮಿಸಿದ್ದ ಮಹಅತ್ಮಾ ಗಾಂಧೀಜಿ, ಬಲಿ ನೀಡುವ ಪದ್ಧತಿಯನ್ನು ನಿಷೇಧಿಸುವಂತೆ ಕರೆ ನೀಡಿದ ಪರಿಣಾಮ ಈ ಪದ್ಧತಿಯನ್ನು ನಿಲ್ಲಿಸಲಾಯಿತು. ನಂತರ ಕೇವಲ ಸಿರಿಂಜ್ ಮೂಲಕ ಕೋಣದ ರಕ್ತ ತೆಗೆದುಕೊಂಡು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ಕೆಲವು ಮೂಲಗಳು ಹೇಳುವ ಪ್ರಕಾರ ಪ್ರಾಣಿಬಲಿಗೆ ಕರೆ ನೀಡಿದ್ದು, ಈ ಭಾಗದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶ್ರೀಧರ ಸ್ವಾಮಿಗಳು.
ಇಲ್ಲಿ ಏನಿಲ್ಲ ಕೇಳಿ!
ಸರ್ಕಸ್ ಕಂಪೆನಿಗಳು, ಹೆಂಗಳೆಯರ ಕಣ್ಣು ತಂಪಾಗಿಸುವಷ್ಟು ಬಳೆ, ಓಲೆಗಳ ಅಂಗಡಿಗಳಿ, ಮಕ್ಕಳ ಬಾಯನ್ನು ಸಿಹಿ ಮಾಡುವ ಮಿಠಾಯಿ, ತರಹೇವಾರಿ ತಿಂಡಿಗಳು, ಮನರಂಜನೆಯ ಆಟಗಳು... ಏನಿಲ್ಲ ಹೇಳಿ ಇಲ್ಲಿ? ಎಲ್ಲ ಜಾತ್ರೆಗಳಂತೇ ಶಿರಸಿ ಜಾತ್ರೆಯಲ್ಲೂ ಈ ಎಲ್ಲವೂ ಹೇರಳವಾಗಿ ಇದ್ದರೂ, ಇಲ್ಲಿನ ಮತ್ತೊಂದು ವಿಶೇಷವೆಂದರೆ ಈ ಭಾಗದ ಪ್ರಸಿದ್ಧ ಕಲೆಯಾದ ಯಕ್ಷಗಾನ ಜಾತ್ರೆಯ ಅವಿಭಾಜ್ಯ ಅಂಗವೆನ್ನಿಸಿದೆ. ಜೊತೆಗೆ ನಾಟಕದ ಕಂಪನಿಗಳೂ ಇಲ್ಲಿ ತಿಂಗಳುಗಳ ಕಾಲ ಬೀಡು ಬಿಡುತ್ತವೆ.
ದೇವೀ ಜಾತ್ರೆ... ಜನ ಜಾತ್ರೆ...
ಮಾರಿಕಾಂಬಾ ಜಾತ್ರೆ, ಜನಜಾತ್ರೆಯೂ ಹೌದು. ಸುಮಾರು ಎಂಟು ದಿನ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಏನಿಲ್ಲವೆಂದರೂ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ.
ಪ್ರಸಿದ್ಧ ಪ್ರವಾಸೀ ತಾಣಗಳು
ಜಾತ್ರೆಗೆಂದು ತೆರಳುವವರು ಮಾರಿಕಾಂಬೆಯನ್ನು ಕಣ್ತುಂಬಿಸಿಕೊಳ್ಳುವುದು ಮಾತ್ರವಲ್ಲದೆ, ಇಲ್ಲಿ ಹೆಜ್ಜೆ ಹೆಜ್ಜೆಗೂ ಎಡೆತಾಕುವ ಆಕರ್ಷಣೀಯ ಪ್ರವಾಸೀ ತಾಣಗಳನ್ನೂ ನೋಡಿಕೊಂಡು ಬರಬಹುದು. ಉಂಚಳ್ಳಿ, ಮಾಗೋಡು, ಗಣೇಶ್ ಫಾಲ್, ಶಿವಗಂಗಾ, ಸಾತೊಡ್ಡಿ ಸೇರಿದಂತೆ ಹಲವು ಜಲಪಾತಗಳು, ಮಾರಿಕಾಂಬಾ ದೇವಾಲಯ, ಯಾಣ, ಗೋಕರ್ಣ, ಮುರಡೇಶ್ವರ, ಬನವಾಸಿ, ಸಿಂತೇರಿ ರಾಕ್ಸ್, ಕಾಳಿ ನದಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ಜಿಲ್ಲೆಯ ಸೊಬಗನ್ನು ಹೆಚ್ಚಿಸಿವೆ. ಶಿರಸಿ ಇಂದ ಈ ಎಲ್ಲ ತಾಣಗಳೂ ಹತ್ತಿರವೇ ಆಗಿರುವುದರಿಂದ ಜಾತ್ರೆಗೆ ತೆರಳುವವರಿಗೆ ಡಬ್ಬಲ್ ಧಮಾಕಾ ಗ್ಯಾರಂಟಿ!
ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?
In Pics: ಸಂಭ್ರಮದ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ಚಾಲನೆ