ಚುನಾವಣಾ ಪ್ರಕ್ರಿಯೆಯಿಂದ ಬೊಮ್ಮಾಯಿ ದೂರವಿಡಲು ಎಚ್.ಕೆ.ಪಾಟೀಲ್ ಆಗ್ರಹ
ಶಿರಸಿ, ನವೆಂಬರ್ 29: 'ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣೆ ಪೂರ್ಣಗೊಳ್ಳುವವರೆಗೂ ಅವರನ್ನು ಚುನಾವಣೆ ಪ್ರಕ್ರಿಯೆಯಿಂದ ಚುನಾವಣಾ ಆಯೋಗ ದೂರ ಇಡಬೇಕು' ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನವೆಂಬರ್ 20ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿದೆ. ಈ ಬಗ್ಗೆ ಚೆಕ್ಪೋಸ್ಟ್ ನಲ್ಲಿದ್ದ ಪೊಲೀಸರು, ಬೆಂಗಾವಲು ವಾಹನದ ಚಾಲಕನನ್ನು ಅಮಾನತು ಮಾಡಿದ್ದಾರೆ. ಅಮಾನತು ಮಾಡಿರುವುದನ್ನು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ' ಎಂದು ಅವರು ಆರೋಪಿಸಿದರು.
ಭ್ರಷ್ಟಾಚಾರ, ಪ್ರಾಮಾಣಿಕತೆ ನಡುವಿನ ಚುನಾವಣೆ
'ಚುನಾವಣೆಯಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಮುಂದಿದೆ ಎನ್ನುತ್ತಿದ್ದರು. ಕಳೆದ ಎಂಟು ದಿನದಿಂದ ಬಿಜೆಪಿಯನ್ನು ಕಾಂಗ್ರೆಸ್ ಹಿಂದಿಕ್ಕಿ ಬಂದಿದೆ ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ. ಕ್ಷೇತ್ರದ ಬುದ್ಧಿವಂತ ಮತದಾರರು ಯೋಚನೆ ಮಾಡಿ ಮತ ಚಲಾಯಿಸಲು ಮುಂದಾಗಿದ್ದಾರೆ. ಈ ಚುನಾವಣೆ ಪಕ್ಷಗಳ ನಡುವಿನ ಚುನಾವಣೆ ಅಲ್ಲ. ನಾಯಕರ ಮಧ್ಯದ ಚುನಾವಣೆ ಅಲ್ಲ. ಈ ಚುನಾವಣೆ ಮತದಾರರಿಗೆ ಮಾಡಿದ ಮೋಸ ಹಾಗೂ ನಿಷ್ಟೆಯ ನಡುವಿನ, ಭ್ರಷ್ಟಾಚಾರ ಹಾಗೂ ಪ್ರಾಮಾಣಿಕತೆಯ ನಡುವಿನ, ಪಕ್ಷ ನಿಷ್ಠೆ ಹಾಗೂ ದ್ರೋಹದ ನಡುವಿನ ಚುನಾವಣೆ' ಎಂದು ಹೇಳಿದರು.
15 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ: ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
ಸಿದ್ದರಾಮಯ್ಯ ವಿರುದ್ಧ ಮೊಕದ್ದಮೆ ಹಾಕಲಿ
"ಸಿದ್ದರಾಮಯ್ಯನವರ ವಿರುದ್ಧ ಯಡಿಯೂರಪ್ಪ ಮಾನನಷ್ಟ ಮೊಕದ್ದಮೆ ಹಾಕಲಿ. ಈಗ ಸಾರ್ವಜನಿಕರ ಮುಂದೆ ಹೇಳುವುದನ್ನು ಅಲ್ಲಿಗೇ ಹೋಗಿ ಹೇಳುತ್ತೇವಿ. ಅಮಿತ್ ಷಾ ಒಪ್ಪಿಗೆ ಪಡೆದು ಇದೇ ಬಿ.ಸಿ.ಪಾಟೀಲ್, ಹೆಬ್ಬಾರ್, ರಮೇಶ್ ಜಾರಕಿಹೊಳಿ ಅವರಿಂದೆಲ್ಲ ರಾಜೀನಾಮೆ ಕೊಡಿಸಿದ್ದೇವೆ ಎಂದು ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಇದರ ವಿಡಿಯೋ ಸಹ ಅವರ ಕಾರ್ಯಕರ್ತರೇ ಹೊರ ಬಿಟ್ಟಿದ್ದಾರೆ' ಎಂದರು.
ಜನ ತಕ್ಕ ಪಾಠ ಕಲಿಸಲಿದ್ದಾರೆ
'ಈ ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಬುದ್ಧಿ ಕಲಿಸುವಂತೆ ಮಾಡದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈ ಚುನಾವಣೆಯಲ್ಲಿ ಅದಕ್ಕಾಗಿ ಮತದಾರರು ಯೋಚಿಸಿ ಮತ ಹಾಕುವಂತಾಗಿದೆ. ಚುನಾವಣೆ ಅನರ್ಹ ಶಾಸಕರಿಗೆ ಯಾಕೆ ಬೇಕಿತ್ತು? ಯಾವ ಉದ್ದೇಶದಿಂದ ಪಕ್ಷ ಬಿಟ್ಟರು? ಮತದಾರರು ಒತ್ತಾಯ ಮಾಡಿದ್ದಕ್ಕೆ ಚುನಾವಣೆಗೆ ಹೋದರಾ? ಮುಂಬೈನಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾದರು ಏನು? ಯಲ್ಲಾಪುರ ಕ್ಷೇತ್ರದ ಜನರು ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ತಿಳಿಸಿದರು.
ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಬಿಜೆಪಿ ಮಾಡಿದ ದೊಡ್ಡ ಪ್ರಮಾದ
'ಮಹಾರಾಷ್ಟ್ರ ಚುನಾವಣೆ, ಹರಿಯಾಣ ಚುನಾವಣೆ ಮುಗಿದ ಮೇಲೆ ಪಕ್ಷಾಂತರಿಗಳಿಗೆ ಜನರು ಮಣ್ಣು ಮುಕ್ಕಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬಿಟ್ಟವರು ಮಣ್ಣು ಮುಕ್ಕಿದ್ದಾರೆ. ಮತದಾರರು ಪಕ್ಷಾಂತರ ಪಿಡುಗನ್ನು ಹುಟ್ಟಡಗಿಸಲು ನಿರ್ಣಯ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆ ನಂತರವೂ ಬಿಜೆಪಿ ಪಾಠ ಕಲಿತಿಲ್ಲ. ನಸುಕಿನಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದದ್ದರು. ರಾಜ್ಯಪಾಲರು ಯಾರಿಗೂ ತಿಳಿಸದಂತೆ ಪ್ರಮಾಣ ವಚನವನ್ನು ಗೌಪ್ಯವಾಗಿ ಬೋಧನೆ ಮಾಡಿದ್ದರು. ಬೆಳಿಗ್ಗೆ ಆತುರಾತುರವಾಗಿ ಪ್ರಮಾಣ ವಚನ ಮಾಡುವುದು ಯಾಕೆ ಬೇಕಿತ್ತು ಎಂದು ದೇಶದ ಪ್ರಜೆಗಳು ಪ್ರಶ್ನೆ ಕೇಳುತ್ತಿದ್ದಾರೆ. ಬಿಜೆಪಿ ಮಾಡಿದ ಅತ್ಯಂತ ದೊಡ್ಡ ಪ್ರಮಾದ ಇದು' ಎಂದರು.