ವಿಶೇಷ ಲೇಖನ; ಕಾಂಗ್ರೆಸ್ ಟಿಕೆಟ್ಗಾಗಿ ಶಿರಸಿಯಲ್ಲಿ ಪೈಪೋಟಿ!
ಶಿರಸಿ, ಜುಲೈ 11; ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಇದರ ನಡುವೆ ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಲೇ ಇದ್ದು, ಯಾರಿಗೆ ಟಿಕೆಟ್ ಸಿಗುತ್ತದೆ? ಎನ್ನುವ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದಂತಾಗಿದೆ.
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದು, ಬಿಜೆಪಿಯ ಭದ್ರಕೋಟೆ ಎಂದೇ ಕರೆಯುತ್ತಾರೆ. ಆದರೂ ಕಾಂಗ್ರೆಸ್ ಸಹ ತನ್ನ ಅಸ್ತಿತ್ವವನ್ನು ಇಂದಿಗೂ ಇಟ್ಟುಕೊಂಡಿದ್ದು, ಕ್ಷೇತ್ರದಲ್ಲಿ ಗೆಲುವಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ.
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ್ ದೇಶಪಾಂಡೆ ಪರೇಡ್!
ಕಳೆದ ಬಾರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ ಈ ಬಾರಿ ಸಹ ಮತ್ತೊಮ್ಮೆ ಸ್ಪರ್ಧೆಗೆ ಬಯಸಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ತಿರುಗಾಟ ನಡೆಸುತ್ತಿದ್ದು, ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಟಿಕೆಟ್ಗಾಗಿ ನಾಯಕರ ಮುಂದೆ ಮತ್ತೊಮ್ಮೆ ಬೇಡಿಕೆ ಇಡುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರಕ್ಕೆ ಕೆಪಿಸಿಸಿ ಉಸ್ತುವಾರಿಯಾಗಿ ಕಾಲಿಟ್ಟಿರುವ ಸುಷ್ಮಾ ರಾಜಗೋಪಾಲ ಸಹ ತಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
'ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ' - ಡಿಕೆ ಶಿವಕುಮಾರ್
ಕಾರ್ಯಕರ್ತರ ಪಡೆ; ದಿ. ದೀಪಕ್ ಹೊನ್ನಾವರ ಸಹೋದರಿ ಸುಷ್ಮಾ ರಾಜಗೋಪಾಲ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯಕರ್ತರ ಬೆಂಬಲಿಗರ ಪಡೆಯನ್ನು ಕಟ್ಟುತ್ತಿದ್ದಾರೆ. ಈ ಬಾರಿ ಟಿಕೆಟ್ ಸಿಗಬಹುದು ಎನ್ನುವ ದೊಡ್ಡ ನಿರೀಕ್ಷೆಯಲ್ಲಿರುವ ಅವರು ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.
ಸುಷ್ಮಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಬಂದ ನಂತರ ಶಿರಸಿಗೆ ಕೆಪಿಸಿಸಿ ಅಧ್ಯಕ್ಷರು ಎರಡು ಬಾರಿ ಭೇಟಿ ಕೊಟ್ಟಿರುವುದು ಜೊತೆಗೆ ಕ್ಷೇತ್ರದ ಬಡವರಿಗಾಗಿ 5 ಸಾವಿರ ಆಹಾರ ಕಿಟ್ ವಿತರಣೆ ಇನ್ನಿತರ ಕಾರ್ಯಕ್ರಮಗಳು ಅವರನ್ನು ಇನ್ನಷ್ಟು ಗಟ್ಟಿಯಾಗಿ ಮಾಡಿದ್ದು, ತನಗೂ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಇದ್ದು, ಅವರು ಸಹ ಟಿಕೆಟ್ಗಾಗಿ ಸದ್ದಿಲ್ಲದೇ ಕಾರ್ಯವನ್ನು ಮಾಡುತ್ತಿದ್ದಾರೆ.
ಹಿಂದಿನಿಂದಲೂ ನಿವೇದಿತ್ ಆಳ್ವಾ ಕ್ಷೇತ್ರದಲ್ಲಿ ತನ್ನದೇ ಆದ ತಂಡ ಕಟ್ಟಿಕೊಂಡಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ವೇಳೆಯಲ್ಲಿ ಹಾಗೂ ಹಲವು ರಾಜ್ಯಸಭಾ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಕ್ಷೇತ್ರಕ್ಕೆ ಅಭಿವೃದ್ಧಿ ಚಟುವಟಿಕೆ ತಂದು ಕೆಲಸ ಮಾಡಿದ್ದು, ತಾನು ಸಹ ಹಿಂದಿನಿಂದಲೂ ಕೆಲಸ ಮಾಡಿಕೊಂಡಿದ್ದಾರೆ. ತನಗೂ ಟಿಕೆಟ್ ಕೊಡಲಿ ಎಂದು ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತಿದೆ.
ಇಷ್ಟೇ ಅಲ್ಲದೇ ಕಾಂಗ್ರೆಸ್ ಮುಖಂಡರಾದ ರಮೇಶ್ ದುಬಾಶಿ, ಸಿದ್ದಾಪುರ ಭಾಗದ ಪ್ರಭಾವಿ ನಾಯಕನೋರ್ವರು ಶಿರಸಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಮೊಮ್ಮಗ ಶಶಿಭೂಷಣ್ ಹೆಗಡೆ ಸಹ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಒಂದೊಮ್ಮೆ ಅವರು ಕಾಂಗ್ರೆಸ್ ಸೇರಿದರೆ ಅವರು ಸಹ ಟಿಕೆಟ್ ಆಕಾಂಕ್ಷಿಯಾಗಲಿದ್ದು, ಚುನಾವಣೆಯಲ್ಲಿ ಗೆಲುವಿಗಿಂತ ಯಾರಿಗೆ ಟಿಕೆಟ್ ಸಿಗಲಿದೆ? ಎನ್ನುವುದು ಇದೀಗ ಶಿರಸಿ ಭಾಗದಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರತಿಷ್ಠೆಯಾಗಿದೆ ಎನ್ನುವುದು ಕಾರ್ಯಕರ್ತರ ಮಾತು.
ನಾನೂ ಆಕಾಂಕ್ಷಿ; "ಕಳೆದ 17 ವರ್ಷಗಳಿಂದ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷಕ್ಕೆ ನಾನು ನಿನ್ನೆ ಮೊನ್ನೆ ಬಂದವನಲ್ಲ. ನಾನೂ ಸಹ ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ" ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಶನಿವಾರ ಸುದ್ದಿಗೋಷ್ಟಿಯಲ್ಲಿ ಘೋಷಿಸಿದ್ದಾರೆ.
Recommended Video
"ಯಾವುದೇ ಕ್ಷೇತ್ರದ ಸೇವಾಕರ್ತನಿಗೆ ಬೆಳೆಯಬೇಕು ಎಂಬ ಕನಸು ಸಹಜ. ಕಳೆದ 2004ರಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಚುನಾವಣೆಯಲ್ಲಿ ದುಡಿದಿದ್ದೇನೆ. ಈ ಕಾರಣದಿಂದ ಪಕ್ಷದಿಂದ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು, ನಾಯಕರಾದ ಆರ್. ವಿ. ದೇಶಪಾಂಡೆ, ಜಿಲ್ಲಾಧ್ಯಕ್ಷರಾದ ಭೀಮಣ್ಣ ನಾಯ್ಕ ನೀಡುವ ತೀರ್ಮಾನಕ್ಕೆ ಬದ್ಧನಿದ್ದೇನೆ" ಎಂದಿದ್ದಾರೆ.