ಉತ್ತರ ಕನ್ನಡ ವಿಭಜಿಸಲು ಒತ್ತಾಯ; ಶಿರಸಿ ಪ್ರತ್ಯೇಕ ಜಿಲ್ಲೆಗೆ ಹೆಚ್ಚಿದ ಕೂಗು
ಶಿರಸಿ, ಸೆಪ್ಟೆಂಬರ್ 24: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನು ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ಕೂಗೂ ಹೆಚ್ಚಿದೆ.
ಬಳ್ಳಾರಿ ಜಿಲ್ಲೆ 11 ತಾಲೂಕುಗಳನ್ನು ಹಾಗೂ 3 ಕಂದಾಯ ವಿಭಾಗಗಳನ್ನು ಒಳಗೊಂಡಿತ್ತು. ಜಿಲ್ಲಾ ಕೇಂದ್ರ ಬಳ್ಳಾರಿಯಿಂದ ಕೆಲ ತಾಲೂಕುಗಳು ಸಾಕಷ್ಟು ದೂರವಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲೆ ವಿಭಜಿಸುವಂತೆ ಸಾಕಷ್ಟು ಒತ್ತಡ ಬಂದಿತ್ತು. ಈ ಹಿಂದೆ ಹೊಸಪೇಟೆ ಶಾಸಕರಾಗಿದ್ದು, ಹಾಲಿ ಸಚಿವ ಆನಂದ್ ಸಿಂಗ್ ಇದೇ ಕಾರಣಕ್ಕೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಜಯನಗರ ಜಿಲ್ಲೆಯ ರಚನೆಗೆ ಸೂಚನೆ ನೀಡಿದ್ದರು.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಬೇಕು?
ಇತ್ತ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತ್ಯೇಕಿಸಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಹಿಂದಿನಿಂದಲೂ ಕೇಳಿಬಂದಿತ್ತು. ಈ ಕೂಗ ಈಗ ಜೋರಾಗಿದೆ.
ಜೋರಾದ ಪ್ರತ್ಯೇಕ ಜಿಲ್ಲೆಯ ಕೂಗು
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ತಾಲೂಕುಗಳಿದ್ದು, ನಾಲ್ಕು ಉಪವಿಭಾಗ ಇದೆ. ಬಳ್ಳಾರಿಯಂತೆ ಉತ್ತರ ಕನ್ನಡ ಸಹ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಜಯನಗರ ಜಿಲ್ಲೆಯನ್ನು ಮಾಡಲು ಹೊರಟಿರುವ ಜೊತೆಯಲ್ಲೇ ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನಹರಿಸಿ, ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಇದೀಗ ಹೆಚ್ಚಾಗುತ್ತಿದೆ.
ಜಿಲ್ಲೆ ವಿಭಜಿಸಿ ಘಟ್ಟದ ಮೇಲಿನ ಹಾಗೂ ಘಟ್ಟದ ಕೆಳಗಿನ ತಾಲೂಕುಗಳನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಹಿಂದಿನಿಂದ ಬಂದ ಬೇಡಿಕೆ. ಸದ್ಯ ಇರುವ ಜಿಲ್ಲಾ ಕೇಂದ್ರ ಕಾರವಾರ ಶಿರಸಿ, ಸಿದ್ದಾಪುರ, ಹಳಿಯಾಳ, ಮುಂಡಗೋಡಿಗೆ ಸಾಕಷ್ಟು ದೂರವಿದೆ. ಈ ಹಿನ್ನೆಲೆಯಲ್ಲಿ ಶಿರಸಿ ಕೇಂದ್ರವನ್ನಾಗಿ ಪ್ರತ್ಯೇಕ ಜಿಲ್ಲೆಯನ್ನು ಮಾಡಿದರೆ ಜಿಲ್ಲಾ ಕೇಂದ್ರ ಸಹ ಸಮೀಪವಾಗಲಿದೆ. ಜೊತೆಗೆ ಘಟ್ಟದ ಮೇಲಿನ ತಾಲೂಕುಗಳೂ ಹೆಚ್ಚಾಗಿ ಅಭಿವೃದ್ಧಿಯಾಗಲಿದೆ ಎನ್ನುವುದು ಮಲೆನಾಡಿಗರ ಬೇಡಿಕೆಯಾಗಿದೆ.
ಜನಸಂಖ್ಯೆಯ ಕೊರತೆ ಪ್ರತ್ಯೇಕ ಜಿಲ್ಲೆಗೆ ತೊಡಕು
ಉತ್ತರ ಕನ್ನಡ ಜಿಲ್ಲೆಯ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾದರೂ ಇಲ್ಲಿ ಜನಸಂಖ್ಯೆಯ ಕೊರತೆಯ ಕಾರಣ ಪ್ರತ್ಯೇಕ ಜಿಲ್ಲೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿದ್ದು, ಜನವಸತಿ ಕಡಿಮೆಯಿದೆ. ಜಿಲ್ಲೆಯಲ್ಲಿ ಜನಸಂಖ್ಯೆ ಕಡಿಮೆಯಿದ್ದು ಇದೇ ಹಿನ್ನೆಲೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಕಿತ್ತೂರು, ಖಾನಾಪುರವನ್ನೂ ಸೇರಿಸಲಾಗಿದೆ.
ಹಸಿರು ಜಿಲ್ಲೆ ಉತ್ತರ ಕನ್ನಡ ಕ್ಷೇತ್ರದ ಪ್ರಮುಖ ಸಮಸ್ಯೆಗಳು
ಜನಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ಮಾಡಲು ತೊಡಕಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದೊಮ್ಮೆ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿದರೆ ನಿರ್ದಿಷ್ಟ ಜನಸಂಖ್ಯೆ ಘಟ್ಟದ ಮೇಲಿನ ತಾಲೂಕುಗಳಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ರಚನೆ ಕಷ್ಟಸಾಧ್ಯವಾಗಿದೆ ಎನ್ನಲಾಗಿದೆ.
ಪ್ರತ್ಯೇಕ ಜಿಲ್ಲೆ ಮಾಡಿದರೂ ಬಗೆಹರಿಯದ ಸಮಸ್ಯೆ
ಬಳ್ಳಾರಿ ವಿಭಜನೆ ಮಾಡಿದಂತೆ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಿದೆ ಎಂದು ವಿಭಜಿಸಿದರೆ ಸಮಸ್ಯೆ ಮಾತ್ರ ಹಾಗೇ ಉಳಿಯುತ್ತದೆ. ಜಿಲ್ಲಾ ಕೇಂದ್ರ ಕಾರವಾರಕ್ಕೆ ಹಲವು ತಾಲೂಕು ಕೇಂದ್ರಗಳು ದೂರವಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಹಲವರ ವಾದ. ಆದರೆ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿದರೆ ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕಿಗೆ ಕಾರವಾರದಂತೆ ಶಿರಸಿ ಸಹ ದೂರವಾಗಲಿದೆ.
ಸದ್ಯ ಕಾರವಾರ ತಾಲೂಕಿನ ಜೊತೆ ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕಿನ ಜನ ಒಡನಾಟ ಇಟ್ಟುಕೊಂಡಿದ್ದು ಒಂದೊಮ್ಮೆ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಆ ಜಿಲ್ಲೆಗೆ ತಮ್ಮನ್ನು ಸೇರಿಸಿದರೆ ಈಗ ಕಾರವಾರಕ್ಕೆ ಬರುವಷ್ಟೇ ದೂರ ಕ್ರಮಿಸಬೇಕು. ಅಲ್ಲದೇ ಜೊಯಿಡಾ ತಾಲೂಕಿನಿಂದ ಕಾರವಾರಕ್ಕೆ ಹತ್ತಿರ ಹೊರತು ಶಿರಸಿಯಲ್ಲ. ಈ ನಿಟ್ಟಿನಲ್ಲಿ ಘಟ್ಟದ ಮೇಲಿನ ತಾಲೂಕು ಎಂದು ವಿಭಜಿಸಿದರೆ ಸದ್ಯ ಕಾರವಾರಕ್ಕೆ ದೂರ ಎನ್ನುವ ಸಮಸ್ಯೆ ಬಗೆಹರಿಯದು ಎನ್ನುವುದು ಬಹುತೇಕರ ಅಭಿಪ್ರಾಯ.
ರಾಜಕಾರಣಿಗಳಿಗೆ ಇಲ್ಲದ ಆಸಕ್ತಿ
ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಶಿರಸಿ, ಸಿದ್ದಾಪುರ ಭಾಗದ ಕೆಲವರ ಕೂಗು. ಆದರೆ ಈ ಬಗ್ಗೆ ರಾಜಕಾರಣಿಗಳಿಗೆ ಆಸಕ್ತಿ ಕಾಣುತ್ತಿಲ್ಲ. ಇದುವರೆಗೂ ಬಹಿರಂಗವಾಗಿ ಶಿರಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಜಿಲ್ಲೆಯ ಯಾವೊಬ್ಬ ರಾಜಕಾರಣಿಯೂ ಧ್ವನಿ ಎತ್ತಿಲ್ಲ. ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಆರ್.ವಿ.ದೇಶಪಾಂಡೆ, ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಯಾರೊಬ್ಬರು ಧ್ವನಿ ಎತ್ತಿಲ್ಲ. ಸರ್ಕಾರದ ಮಟ್ಟಿಗೂ ಈ ಬಗ್ಗೆ ಚರ್ಚೆ ಮಾಡುವ, ಮನವಿ ಮಾಡಿಕೊಳ್ಳುವ ಕಾರ್ಯಕ್ಕೆ ಮುಂದಾಗಿಲ್ಲ. ಕೇವಲ ಕೆಲ ಸಾರ್ವಜನಿಕರ, ಸಂಘಟನೆಯವರು ಮಾತ್ರ ಪ್ರತ್ಯೇಕ ಜಿಲ್ಲೆಯ ಹೋರಾಟ ಮಾಡುತ್ತಿದ್ದು, ರಾಜಕಾರಣಿಗಳಿಗೆ ಆಸಕ್ತಿ ಇರದಿರುವುದು ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ತೊಡಕಾಗಿದೆ ಎನ್ನಲಾಗಿದೆ.
Recommended Video
ಶಿರಸಿ ಜಿಲ್ಲೆಯಾಗಲಿ, ಜೊಯಿಡಾ ಕಾರವಾರಕ್ಕೆ ಸೇರಲಿ
ಶಿರಸಿ ಜಿಲ್ಲೆಯಾದರೆ ಜೊಯಿಡಾ ತಾಲೂಕನ್ನು ಕಾರವಾರ ಜಿಲ್ಲೆಗೇ ಸೇರಿಸಬೇಕು ಎಂದು ಜೊಯಿಡಾದ ಜನತೆ ಒತ್ತಾಯಿಸಿದ್ದಾರೆ. ಜೊಯಿಡಾ ತಾಲೂಕನ್ನು ಶಿರಸಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಆದರೆ ಜೊಯಿಡಾದ ಜನರು ಕಾರವಾರ ಜಿಲ್ಲೆಗೆ ಸೇರಲು ಇಷ್ಟಪಡುತ್ತಾರೆ. ಉತ್ತರ ಕನ್ನಡ ಇಬ್ಭಾಗವಾದಲ್ಲಿ ಜೊಯಿಡಾ ಕಾರವಾರ ಜಿಲ್ಲೆಗೆ ಸೇರಬೇಕು. ಇದು ಜೊಯಿಡಾ ಜನತೆಯ ಒತ್ತಾಯವಾಗಿದೆ. ಯಾವುದೇ ಕಾರಣಕ್ಕೂ ತಾಲೂಕನ್ನು ಶಿರಸಿ ಜಿಲ್ಲೆಗೆ ಸೇರಲು ಇಲ್ಲಿನ ಜನತೆ ಬಿಡುವುದಿಲ್ಲ ಎಂದು ಕುಂಬಾರವಾಡಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪುರುಷೋತ್ತಮ ಕಾಮತ್ ಹೇಳಿದ್ದಾರೆ.
ತಾಲೂಕಿನ ಜನರಿಗೆ ಕನ್ನಡ ಭಾಷೆ ಮಾತನಾಡಲು ಸರಿಯಾಗಿ ಬರುವುದಿಲ್ಲ. ಕಾರವಾರದಲ್ಲಿ ಕೆಲ ಜನರಿಗಾದರೂ ಕೊಂಕಣಿ ಭಾಷೆ ಬರುತ್ತದೆ. ಶಿರಸಿ ಜಿಲ್ಲೆಯಾಗಲಿ. ಆದರೆ ಜೊಯಿಡಾ ತಾಲೂಕನ್ನು ಮಾತ್ರ ಕಾರವಾರಕ್ಕೆ ಸೇರಿಸಬೇಕು. ಜೊಯಿಡಾದಿಂದ ಶಿರಸಿ 123 ಕಿ.ಮೀ. ಆಗುತ್ತದೆ. ಕಾರವಾರ 70 ಕಿ.ಮೀ. ಆಗುತ್ತದೆ. ದೂರದ ಲೆಕ್ಕಾಚಾರಕ್ಕೂ ನಮಗೆ ಕಾರವಾರವೇ ಕೇಂದ್ರವಾಗಲಿ ಎಂದಿದ್ದಾರೆ.