ಶಿಖಂಡಿ ನಾಯಕತ್ವ ಈಗಿಲ್ಲ: ಅನಂತಕುಮಾರ್ ಹೆಗಡೆ ಟ್ವೀಟ್
ಶಿರಸಿ, ಡಿಸೆಂಬರ್ 20: "ಪ್ರಜ್ಞಾವಂತ ನಾಗರಿಕ ದೇಶದ ಇಂದಿನ ಸಂಪೂರ್ಣ ವಿದ್ಯಾಮಾನಗಳನ್ನು ಗಮನಿಸುತ್ತಿದ್ದಾನೆ. ಯಾವ ಜನ, ಯಾವ ವೇಷ- ಭೂಷಣಗಳೊಂದಿಗೆ, ಯಾವ ಪ್ರವಾದಿಯನ್ನು ಕರೆದು, ಯಾರ ಬೆಂಬಲದೊಂದಿಗೆ ಗಲಭೆ- ದೊಂಬಿಗಳನ್ನು ನಡೆಸುತ್ತಿದ್ದಾನೆ ಎಂಬುದು ತಿಳಿಯದಿರಲು ಇದೇನು 1947 ಅಲ್ಲ! ಅಂದಿನ ಶಿಖಂಡಿ ನಾಯಕತ್ವವು ಅಧಿಕಾರದಲ್ಲಿಲ್ಲ!" ಎಂದು ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಫೊಟೊ, ವಿಡಿಯೊಗಳೊಂದಿಗೆ ಟ್ವೀಟ್ ಮಾಡಿರುವ ಅವರು, "ಸಿಎಎ, ಎಲ್ಲಾ ದೇಶದ್ರೋಹಿಗಳನ್ನು ಮತ್ತು ರಾಷ್ಟ್ರ ವಿರೋಧಿಗಳನ್ನು ತಮ್ಮ ಬಿಲಗಳಿಂದ ಹೊರಬರುವಂತೆ ಮಾಡಿದೆ. ರಾಷ್ಟ್ರ ಈ ದುಷ್ಟ ವಿನ್ಯಾಸಗಳನ್ನು ನೋಡುತ್ತಿದೆ ಮತ್ತು ಇದನ್ನು ಸೂಕ್ತ ಸಮಯದಲ್ಲಿ ಮತ್ತೆ ನೆನಪಿಸಿಕೊಳ್ಳುತ್ತದೆ ಎಂದು ಭಾವಿಸಿದ್ದೇನೆ"ಎಂದಿದ್ದಾರೆ.
ಮುಂದುವರಿದು,"ಸಿಎಎಯ ವಿರುದ್ಧ ಹಿಂಸಾತ್ಮಕವಾಗಿ ಪ್ರತಿಭಟಿಸಿದ ದೇಶದ್ರೋಹಿಗಳಿಗೆ ಧನ್ಯವಾದಗಳು. ಇವರು ದೇಶದಲ್ಲಿ ರಾಷ್ಟ್ರೀಯತೆಯ ಉತ್ಸಾಹವನ್ನು ಬೆಳಗಿಸಲು ಸಹಾಯ ಮಾಡಿದ್ದಾರೆ. ಬ್ಲ್ಯಾಕ್ಮೇಲಿಂಗ್ಗೆ ಸಾಕ್ಷಿಯಾಗಲು ರಾಷ್ಟ್ರ 1947ರಲ್ಲಿ ಇಲ್ಲ. ಇಂದು ನಾವು ದುರ್ಬಲ ಮತ್ತು ಗುಲಾಮರ ನಾಯಕತ್ವವನ್ನೂ ಹೊಂದಿಲ್ಲ" ಎಂದಿದ್ದಾರೆ.