ಅನಂತ ಕುಮಾರ್ ಹೆಗಡೆಗೆ ಕೊಲೆ ಬೆದರಿಕೆ: ದೂರು ದಾಖಲು
ಶಿರಸಿ, ಏಪ್ರಿಲ್ 23: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರಿಗೆ ಕೊಲೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಭಾನುವಾರ ಸಂಜೆಯ ಹೊತ್ತಿನಲ್ಲಿ ವ್ಯಕ್ತಿಯೊಬ್ಬ ಹೆಗಡೆ ಅವರಿಗೆ ಫೋನಾಯಿಸಿ ಕೊಲೆ ಬೆದರಿಕೆಯನ್ನೊಡ್ಡಿದ್ದ. ಇದರಿಂದ ಆತಂಕಗೊಂಡ ಅನಂತಕುಮಾರ್ ಹೆಗಡೆ ಅವರ ಆಪ್ತ ಕಾರ್ಯದರ್ಶಸಿ, ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 504 ಮತ್ತು 507ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಂತ ಕುಮಾರ್ ಹೆಗಡೆ ಹತ್ಯೆಗೆ ಸಂಚು ರೂಪಿಸಲಾಗಿತ್ತಾ..?!
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಲ್ಲಿರುವ ಅನಂತಕುಮಾರ್ ಹೆಗಡೆ, ಇತ್ತೀಚೆಗಷ್ಟೇ ತಮ್ಮ ಬೆಂಗಾವಲು ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿದ್ದಾಗಲೂ, ಇದು ತನ್ನ ಹತ್ಯೆಗೆ ದುಷ್ಕರ್ಮಿಗಳು ಮಾಡಿದ ಪ್ರಯತ್ನ ಎಂದಿದ್ದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಳಿಯಾಳ ಎಂಬಲ್ಲಿ ಹೆಗಡೆಯವರು ರಾತ್ರಿ ಸಮಯದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನಕ್ಕೆ ಟ್ರಕ್ ಬಂದು ಗುದ್ದಿತ್ತು. ಈ ಅಪಘಾತದಲ್ಲಿ ಅವರ ಸಹಾಯಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.