ಅಣು ಘಟಕ ವಿರೋಧಿಸಿ ಯಲ್ಲಾಪುರದಲ್ಲಿ ಜೂ.25 ರಂದು ಬೃಹತ್ ಸಮಾವೇಶ
ಶಿರಸಿ(ಉತ್ತರ ಕನ್ನಡ), ಜೂನ್ 7: ಅಣು ವಿದ್ಯುತ್ ಘಟಕ ನಿರ್ಮಾಣ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜೂ.25 ರಂದು ಬೃಹತ್ ಸಮಾವೇಶ ನಡೆಸುವುದಾಗಿ ಹಸಿರು ಸ್ವಾಮೀಜಿ ಎಂದೇ ಖ್ಯಾತಿ ಪಡೆದ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು. ಶಿರಸಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ತಿಳಿಸಿದರು.
ಉತ್ತರ ಕನ್ನಡಕ್ಕೆ ಅದರ ಸಮೃದ್ಧ ನೈಸರ್ಗಿಕ ಸಂಪನ್ಮೂಲವೇ ಮುಳುವಾಗುವಂಥ ಅನೇಕ ಸನ್ನಿವೇಶಗಳು ಎದುರಾಗಿವೆ. ಅಂಥವುಗಳಲ್ಲಿ ಪ್ರಮುಖವಾದ್ದು ಕೈಗಾ ಅಣು ವಿದ್ಯುತ್ ಸ್ಥಾವರ.[ಇನ್ನು 5ವರ್ಷ ಸೋಂದಾ ವಾದಿರಾಜ ಮಠದಲ್ಲಿ ಇಷ್ಟಾರ್ಥ ಸೇವೆ ಇರುವುದಿಲ್ಲ]
ಕೈಗಾದಲ್ಲಿ ಈಗಾಗಲೇ ನಾಲ್ಕು ಅಣು ವಿದ್ಯತ್ ಸ್ಥಾವರಗಳು ಕಾರ್ಯನಿರ್ವಹಿಸುತ್ತಿದ್ದರೂ, ಮತ್ತೆ ಇಲ್ಲಿಯೇ ಅಣು ವಿದ್ಯುತ್ ಸ್ಥಾವರ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವುದು ಈ ಭಾಗದ ಜನರಲ್ಲಿ ಆತಂಕ ಹುಟ್ಟಿಸಿದೆ. ಈ ಸ್ಥಾವರಗಳು ಹೊರಸೂಸುವ ವಿಷಪೂರಿತ ವಿಕಿರಣಗಳಿಂದಾಗಿ ಜಿಲ್ಲೆಯಲ್ಲಿ ಕ್ಯಾನ್ಸರ್ ನಂಥ ಮಾರಕ ರೋಗಗಳು ಹೆಚ್ಚುತ್ತಿವೆ.[ಶಿರಸಿಯ ಕಾನಡೆಯವರ ಮಗಳ ಮದುವೆಗೆ ಮೋದಿ ಶುಭಾಶಯ]
ಇಷ್ಟೆಲ್ಲ ಆದರೂ, ಇಲ್ಲಿಯೇ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವ ಸರ್ಕಾರದ ಯೋಜನೆಗೆ ಜಿಲ್ಲೆಯ ಜನರ ವಿರೋಧವಿದೆ. ಅದಕ್ಕೆಂದೇ ಜೂನ್ 25, ಭಾನುವಾರದಂದು ಯಲ್ಲಾಪುರದಲ್ಲಿ ಬೃಹತ್ ಸಮಾವೇಶ ನಡೆಸಿ, ಯೋಜನೆಯ ಕುರಿತ ನಮ್ಮ ವಿರೋಧವನ್ನು ವ್ಯಕ್ತಪಡಿಸುವುದಾಗಿ ಸ್ವಾಮೀಜಿ ತಿಳಿಸಿದರು.
ದೇಶದ ಮತ್ತು ಮನುಕುಲದ ಒಳಿತಿನ ದೃಷ್ಟಿಯಿಂದ ಮೊದಲು ಪರ್ಯಾಯ ಶಕ್ತಿಯ ಬಳಕೆಯನ್ನು ಅರಿಯುವ ಅಗತ್ಯವಿದೆ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.