ಪಾಸಿಟಿವ್ ಸುದ್ದಿ: ಒಂದೇ ಕುಟುಂಬದ 18 ಮಂದಿ ಕೋವಿಡ್ನಿಂದ ಗುಣಮುಖ
ಶಿರಸಿ, ಮೇ 25: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸರಕುಳಿ ಗ್ರಾಮದ ಒಂದೇ ಕುಟುಂಬದ 18 ಮಂದಿಗೆ ಕೋವಿಡ್ ಸೋಂಕು ತಗುಲಿದ್ದರೂ, ಆತ್ಮಸ್ಥೆರ್ಯ ಹಾಗೂ ಒಗ್ಗಟ್ಟಿನಿಂದ ಪರಿಸ್ಥಿತಿಯನ್ನು ಎದುರಿಸಿ ಎಲ್ಲರೂ ಗುಣಮುಖರಾಗಿ ಇದೀಗ ಸಂತಸವನ್ನೂ ಹಂಚಿಕೊಂಡಿದ್ದಾರೆ.
ಸರಕುಳಿ ಗ್ರಾಮದ ಲೋಕೇಶ್ವರ ಹೆಗಡೆಯವರ ಮನೆಯಲ್ಲಿ ಒಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಪರೀಕ್ಷೆ ಮಾಡಿಸಿದಾಗ ಕೋವಿಡ್ ದೃಢಪಟ್ಟಿತ್ತು. ಸುಮಾರು 3 ವರ್ಷದಿಂದ 70 ವರ್ಷದ ಎಲ್ಲ ವಯೋಮಾನದವರಿರುವ ಈ ಕುಟುಂಬದಲ್ಲಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿದಾಗ ಉಳಿದ 17 ಜನರಿಗೂ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಯಾರೂ ಧೃತಿಗೆಡದೆ ಒಗ್ಗಟ್ಟಿನಿಂದ ಸರ್ಕಾರದ ಹಾಗೂ ವೈದ್ಯಕೀಯ ನಿಯಮಗಳನ್ನು ಪಾಲಿಸಿ ಮನೆಯಲ್ಲಿಯೇ ಅಗತ್ಯವಿರುವ ಚಿಕಿತ್ಸೆ ಪಡೆದು ತಾವುಗಳೂ ಗುಣಮುಖರಾಗಿ, ಸೋಂಕು ಊರಿನಲ್ಲಿ ಹರಡದಂತೆ ಜಾಗ್ರತೆ ವಹಿಸಿರುವುದು ಇಂದಿಗೂ ಮುಂದುವರೆದಿರುವ ಅವಿಭಕ್ತ ಕುಟುಂಬಗಳ ಒಗ್ಗಟ್ಟು ಹಾಗೂ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.
Recommended Video
ಕುಟುಂಬದವರೆಲ್ಲರಿಗೂ ಸೋಂಕು ತಗುಲಿದರೂ ಧೈರ್ಯವಾಗಿ ಕೋವಿಡ್ನ್ನು ಹಿಮ್ಮೆಟ್ಟಿಸಿದ್ದೇವೆ. ಯಾರೂ ಹೆದರದೆ ಸರ್ಕಾರ ಹಾಗೂ ವೈದ್ಯಕೀಯ ನಿಯಮಾವಳಿಗಳನ್ನು ಪಾಲಿಸಿ ಪರಿಸ್ಥಿತಿಯನ್ನು ಎದುರಿಸಿ ಕೋವಿಡ್ ಸೋಂಕನ್ನು ಹೋಗಲಾಡಿಸುವಲ್ಲಿ ಸಹಕರಿಸಿ ಎಂದು ಕುಟುಂಬದ ಹಿರಿಯ ಸದಸ್ಯ ಲೋಕೇಶ್ವರ ಹೆಗಡೆ ಕರೆ ನೀಡಿದ್ದಾರೆ.