ಸಿಹಿಸುದ್ದಿ: ಲಸಿಕೆ ಪಡೆದ ಭಾರತೀಯರಿಗೆ ಸಿಂಗಪುರದಲ್ಲಿಲ್ಲ ಕ್ವಾರಂಟೈನ್
ಸಿಂಗಪುರ, ನವೆಂಬರ್ 15: ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ ಭಾರತೀಯರಿಗೆ ಕ್ವಾರಂಟೈನ್ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲು ಸಿಂಗಪುರವು ಮುಂದಾಗಿದೆ. ಭಾರತ ಮಾತ್ರವಲ್ಲದೇ ಇಂಡೋನೇಷಿಯಾ ದೇಶದ ಪ್ರವಾಸಿಗರಿಗೆ ತನ್ನ ಕೋವಿಡ್ ನಿರ್ಬಂಧವನ್ನು ಸಿಂಗಪುರ ಸಡಿಲಿಕೆ ಮಾಡಿದೆ.
ನವೆಂಬರ್ 29 ರಿಂದ ಭಾರತ, ಇಂಡೋನೇಷಿಯಾ ದೇಶಗಳ ಪ್ರಯಾಣಿಕರು ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದಿದ್ದರೆ ಕ್ವಾರಂಟೈನ್ ಇಲ್ಲದೆಯೇ ಸಿಂಗಪುರಕ್ಕೆ ಹೋಗಬಹುದಾಗಿದೆ. ಇನ್ನೂ ಮೂರು ದೇಶಗಳನ್ನು ಈ ಪಟ್ಟಿಗೆ ಮುಂದಿನ ತಿಂಗಳು ಸೇರಿಸಲು ಸಿಂಗಪುರ ನಿರ್ಧಾರ ಮಾಡಿದೆ. ಪ್ರಸ್ತುತ ಕೆನಡಾ, ಆಸ್ಟ್ರೇಲಿಯಾ ಹಾಗೂ ಜರ್ಮನಿ ಸೇರಿದಂತೆ ಒಟ್ಟು 13 ರಾಷ್ಟ್ರಗಳು ಸಿಂಗಪುರಕ್ಕೆ ಪ್ರವೇಶ ಮಾಡಲು ಅವಕಾಶ ಹೊಂದಿರುವ ದೇಶಗಳಲ್ಲಿ ಇದೆ. ಸಂಪೂರ್ಣ ಲಸಿಕೆ ಪಡೆದ ಈ 13 ರಾಷ್ಟ್ರಗಳ ಜನರು ಸಿಂಗಪುರದ ವ್ಯಾಕ್ಸಿನೇಷನ್ ಟ್ರಾವೆಲ್ ಲೇನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ.
ಭಾರತೀಯರಿಗೆ ಸಿಂಗಪುರದ ಸಿಹಿಸುದ್ದಿ: 6 ದೇಶಗಳ ಮೇಲಿನ ಪ್ರಯಾಣ ನಿರ್ಬಂಧ ತೆರವು!
ಮಾಧ್ಯಮಗಳ ವರದಿ ಪ್ರಕಾರ ನವೆಂಬರ್ 29 ರಿಂದ ಭಾರತ, ಇಂಡೋನೇಷಿಯಾ ದೇಶಗಳ ಪ್ರಯಾಣಿಕರು ಕ್ವಾರಂಟೈನ್ ಇಲ್ಲದೆಯೇ ಪ್ರಯಾಣ ಮಾಡಲು ಅವಕಾಶ ಪಡೆಯಲಿದ್ದಾರೆ. ಇನ್ನು ಡಿಸೆಂಬರ್ 6 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಸೌದಿ ಹಾಗೂ ಅರೇಬಿಯಾ ದೇಶದಿಂದ ಸಿಂಗಪುರಕ್ಕೆ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತದೆ.
ಈ ವ್ಯಾಕ್ಸಿನೇಷನ್ ಟ್ರಾವೆಲ್ ಲೇನ್ ಕಾರ್ಯಕ್ರಮದಡಿಯಲ್ಲಿ ದೇಶಕ್ಕೆ ಪ್ರವೇಶ ಪಡೆಯುವವರಿಗೆ ಯಾವುದೇ ಕ್ವಾರಂಟೈನ್ ಇರುವುದಿಲ್ಲ. ಅದರ ಬದಲಾಗಿ ಅವರು ತಾವು ಪ್ರಯಾಣ ಮಾಡುವುದಕ್ಕೂ ಮುನ್ನ ಮಾಡಿಸಿದ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಈ ಕೋವಿಡ್ ಪರೀಕ್ಷೆಯನ್ನು ಎರಡು ದಿನಗಳ ಒಳಗೆ ಮಾಡಿಸಿಕೊಂಡಿರಬೇಕು. ಸಿಂಗಪುರಕ್ಕೆ ಆಗಮಿಸಿದ ಬಳಿಕ ಕೋವಿಡ್ನ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಕೋವಿಡ್ ಲಸಿಕೆ ಪ್ರಮಾಣಪತ್ರದ ಬಗ್ಗೆ ಭಾರತ-ಸಿಂಗಪುರ ಚರ್ಚೆ
ಸೋಮವಾರ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿದ ಸಿಂಗಪುರದ ಸಾರಿಗೆ ಸಚಿವ ಎಸ್ ಈಶ್ವರನ್, "ಕೊರೊನಾ ವೈರಸ್ ಸೋಂಕಿನ ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದ ಬಳಿಕ ಲಭಿಸುವ ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಗುರುತಿಸುವ ವಿಚಾರದಲ್ಲಿ ಸಿಂಗಪುರ ಹಾಗೂ ಭಾರತವು ಮಾತುಕತೆ ನಡೆಸುತ್ತಿದೆ," ಎಂದು ತಿಳಿಸಿದ್ದಾರೆ. ನವೆಂಬರ್ 12 ರವರೆಗೆ ಭಾರತವು ಸಿಂಗಪುರದಿಂದ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಗುರುತಿಸಲು ಪ್ರಾರಂಭಿಸಿದೆ.
ಸಿಂಗಪುರದಲ್ಲಿ ಕೋವಿಡ್ ನಿರ್ಬಂಧ ಉಲ್ಲಂಘಿಸಿದ ಭಾರತೀಯ ಪ್ರಜೆಗೆ ಜೈಲು ಶಿಕ್ಷೆ
"ನಾವು ಈ ಮಾತುಕತೆ ನಡೆಸುತ್ತಿದ್ದೇವೆ ಎಂಬ ಅರ್ಥವೇನೆಂದರೆ ಲಸಿಕೆ ಪಡೆದ ಭಾರತೀಯರಿಗೆ ದೇಶಕ್ಕೆ ಬರಲು ಕ್ವಾರಂಟೈನ್ ಬೇಕಾಗಿಲ್ಲ ಎಂಬುವುದು ಆಗಿದೆ. ಸಿಂಗಪುರಕ್ಕೆ ಆಗಮಿಸುವ ಭಾರತೀಯರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದರೆ ಇನ್ನು ಮುಂದೆ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ. ಭಾರತೀಯರು ಕೇವಲ 14 ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕಾಗುತ್ತದೆ," ಎಂದು ಸಿಂಗಪುರದ ಸಾರಿಗೆ ಸಚಿವ ಎಸ್ ಈಶ್ವರನ್ ಮಾಹಿತಿ ನೀಡಿದ್ದಾರೆ.
ಎಲ್ಲಿಂಗೆಲ್ಲಾ ಸಿಂಗಪುರದ ವಿಮಾನ ಬರಲಿದೆ?
"ನಾವು ಭಾರತದೊಂದಿಗೆ ಚರ್ಚೆಯನ್ನು ನಡೆಸುತ್ತಿದ್ದೇವೆ. ಚೆನ್ನೈ, ದೆಹಲಿ ಹಾಗೂ ಮುಂಬೈಗೆ ನವೆಂಬರ್ 29 ರಿಂದ ಪ್ರತಿ ದಿನ ಎರಡು ವಿಮಾನಗಳನ್ನು ಆರಂಭ ಮಾಡುವ ಗುರಿಯನ್ನು ನಾವು ಪ್ರಸ್ತುತ ಹೊಂದಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಸಿಂಗಪುರದ ನಾಗರಿಕ ವಿಮಾನಯಾನ ಪ್ರಾಧಿಕಾರವು ಮಾಹಿತಿ ನೀಡಲಿದೆ," ಎದು ಕೂಡಾ ಸಿಂಗಪುರದ ಸಾರಿಗೆ ಸಚಿವ ಎಸ್ ಈಶ್ವರನ್ ತಿಳಿಸಿದರು.
"ನಾವು ಭಾರತದೊಂದಿಗೆ ವಾಣಿಜ್ಯ ಪ್ರಯಾಣಿಕ ಸೇವೆಗಳನ್ನು ಮತ್ತೆ ಆರಂಭ ಮಾಡುವ ಬಗ್ಗೆ ಚರ್ಚೆಯನ್ನು ನಡೆಸುತ್ತಿದ್ದೇವೆ. ಈವರೆಗೆ ಸಿಂಗಪುರದಿಂದ ಜನರನ್ನು ಭಾರತಕ್ಕೆ ಸಾಗಿಸಲು ಅನುಮತಿ ನೀಡಲಾದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಸರ್ಕಾರದ ಚಾರ್ಟರ್ ವಿಮಾನಗಳು ಹಾರಾಟ ನಡೆಸುತ್ತಿದೆ," ಎಂದು ಕೂಡಾ ವಿವರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)