ನೆರೆಯಿಂದ ಬೀದಿಗೆ ಬಿದ್ದವರಿಗೆ "ನಮ್ಮನೆ"ಯಿದೆ ಎಂದ ಯುವ ಬ್ರಿಗೇಡ್
ಶಿವಮೊಗ್ಗ, ನವೆಂಬರ್ 16: ಶಿವಮೊಗ್ಗದಲ್ಲಿ ನೆರೆಯಿಂದಾಗಿ ಮನೆ ಕಳೆದುಕೊಂಡಿದ್ದ ವೃದ್ಧ ದಂಪತಿಗೆ ಶಿವಮೊಗ್ಗದ ಯುವ ಬ್ರಿಗೇಡ್ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನ ತಂಡ ಮನೆ ನಿರ್ಮಿಸಿ ಕೊಟ್ಟಿದೆ.
ನವೆಂಬರ್ 15ರ ಶುಕ್ರವಾರ ಮನೆಯ ಗೃಹ ಪ್ರವೇಶ ಮಾಡುವ ಮೂಲಕ ಮನೆಯನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳು ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗದ ಅನೇಕ ಬಡಾವಣೆಗಳು ಮುಳುಗಡೆಯಾಗಿದ್ದವು. ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ಬಡಾವಣೆ ನಿವಾಸಿಗಳಾದ ಮುನಿಯಪ್ಪ ಹಾಗೂ ನರಸಮ್ಮ ಕೂಡ ನೆರೆ ಅವಘಡಕ್ಕೆ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು. ಮಳೆಗೆ ಬಿದ್ದಿದ್ದ ಗುಡಿಸಲಿನ ಮುಂಭಾಗದಲ್ಲೇ ಇರುವ ದೇವಾಲಯದಲ್ಲಿ ಈ ವೃದ್ಧ ದಂಪತಿ ವಾಸವಾಗಿದ್ದು, ಅಲ್ಲಿಯೇ ಜೀವನದ ಬಂಡಿ ಸಾಗಿಸುತ್ತಿದ್ದರು.
ತಹಶೀಲ್ದಾರ್ ಶ್ರಮದಿಂದ ನಿರ್ಗತಿಕ ಕುಟುಂಬಕ್ಕೆ ಸಿಕ್ಕಿತು 'ಬೆಳಕು'
ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ತಂಡದ ಸದಸ್ಯರು ಈ ಅಜ್ಜ-ಅಜ್ಜಿಯ ನೆರವಿಗೆ ಧಾವಿಸಿದ್ದು, ಮನೆ ನೆಲಸಮವಾಗಿ ಜೀವನವೇ ಹೋಯ್ತು ಎಂದುಕೊಂಡಿದ್ದ ವೃದ್ಧ ದಂಪತಿಗೆ 'ನಮ್ಮನೆ' ಹೆಸರಿನ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 1.25 ಲಕ್ಷ ರೂ. ವೆಚ್ಚದಲ್ಲಿ ಅಚ್ಚುಕಟ್ಟಾಗಿ ಮನೆ ನಿರ್ಮಿಸಲಾಗಿದೆ. ಯುವ ಬ್ರಿಗೇಡ್ ಸಂಘಟನೆಯ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ದೀಪ ಹಚ್ಚಿ ಗೃಹ ಪ್ರವೇಶ ನೆರವೇರಿಸಿದ್ದಾರೆ.
ಮಹಾ ಪ್ರವಾಹ-ಯುವ ಸಹಾಯ ಎಂಬ ಯೋಜನೆಯಡಿಯಲ್ಲಿ ಈ ರೀತಿ ಹಲವಾರು ಜನರಿಗೆ ಯುವ ಬ್ರಿಗೇಡ್ ತಂಡ ಸಹಾಯ ಹಸ್ತ ಚಾಚಿದ್ದು, ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಮನೆ ನಿರ್ಮಿಸಿಕೊಟ್ಟಿದೆ.