ಶಿವಮೊಗ್ಗ ಡಿಸಿ ಕಚೇರಿ ಮುಂದೆ ಸೆಂಚುರಿ ಬ್ಯಾಟ್ ಮೇಲೆತ್ತಿದ ‘ಮೋದಿ’
ಶಿವಮೊಗ್ಗ, ಜೂನ್ 9: ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವ ಕಾಂಗ್ರೆಸ್ನ ದಕ್ಷಿಣ ಬ್ಲಾಕ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಸೆಂಚುರಿ ಬಾರಿಸಿದ ಕ್ರಿಕೆಟಿಗನಂತೆ ಬ್ಯಾಟ್ ಮೇಲೆತ್ತಿ ಪ್ರತಿಭಟನೆ ನಡೆಸಲಾಯಿತು. ಅಚ್ಛೇ ದಿನದ ಆಸೆ ತೋರಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಪೆಟ್ರೋಲ್ ಹಾಕಿಸಲು ಬಂದವರಿಗೆ ಶಿವಮೊಗ್ಗದಲ್ಲಿ ಸ್ವೀಟ್ ಹಂಚಿ 'ಸಂಭ್ರಮ'
ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ, ಕ್ರಿಕೆಟಿಗನಂತೆ ಬ್ಯಾಟ್ ಹಿಡಿದು ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬ, ಸೆಂಚುರಿ ಬಾರಿಸಿದಂತೆ ಬ್ಯಾಟ್ ಮೇಲೆತ್ತಿ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನರು ಮತ್ತಷ್ಟು ಕಷ್ಟಕ್ಕೆ ಸಿಲುಕಿದ್ದಾರೆ. ಒಳ್ಳೆಯ ದಿನಗಳ ಕನಸು ಬಿತ್ತಿ ಜನರ ಸಂಕಷ್ಟ ಹೆಚ್ಚಿಸಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ಆರೋಪಿಸಿದರು.
ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್.ಕೆ, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಪ್ರಮುಖರಾದ ಗಿರೀಶ್, ಮಹಮ್ಮದ್ ನಿಹಾಲ್, ಬಾಲಾಜಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.