ಶಿವಮೊಗ್ಗ: 5ಜಿ ಯುಗದಲ್ಲೂ ನೆಟ್ವರ್ಕ್ಗಾಗಿ ಮರದಡಿ ಟೆಂಟ್ ನಿರ್ಮಿಸಿಕೊಂಡ ಯುವತಿ
ಶಿವಮೊಗ್ಗ, ಜೂನ್ 4: 5ಜಿ ಯುಗದಲ್ಲೂ ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ನೀಗಿಲ್ಲ. ಅದರಲ್ಲೂ ಲಾಕ್ಡೌನ್ ಅವಧಿಯಲ್ಲಿ ವರ್ಕ್ ಫ್ರಂ ಹೋಮ್ ಇರುವವರು, ಆನ್ಲೈನ್ ಕ್ಲಾಸ್ ಜಾಯಿನ್ ಆಗಬೇಕಿರುವವರಿಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ.
ಡಿಜಿಟಿಲ್ ಇಂಡಿಯಾ ಕಾರ್ಯಕ್ರಮದ ಕುರಿತು ಸರ್ಕಾರಗಳು ದೊಡ್ಡ ಮಟ್ಟದ ಪ್ರಚಾರ ಮಾಡಿ, ಭರವಸೆಯನ್ನು ಮೂಡಿಸುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಧುನಿಕ ವಿಮಾನ ನಿಲ್ದಾಣ ನಿರ್ಮಿಸುತ್ತಿದ್ದರೂ, ಹೊಸನಗರ, ಸಾಗರ, ತೀರ್ಥಹಳ್ಳಿಯ ಹಲವು ಭಾಗಕ್ಕೆ ಈತನಕ ಮೊಬೈಲ್ ನೆಟ್ವರ್ಕ್ ಕೊಡಲು ಸಾಧ್ಯವಾಗಿಲ್ಲ.
ಮೊಬೈಲ್ ಸಿಗ್ನಲ್ ಸಿಗುವ ಕಡೆ ಟೆಂಟ್
ವರ್ಕ್ ಫ್ರಂ ಹೋಂ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಬಂದಿರುವ ಸಿಂಧು ಎಂಬ ಯುವತಿ ಮನೆ ಬಳಿ ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಊರಾಚೆಗೆ ಸಿಗ್ನಲ್ ಸಿಗುವ ಕಡೆ, ಟೆಂಟ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಬಳಿ ಸಿಂಧು ಅಕೌಂಟೆಂಟ್ ಆಗಿದ್ದಾರೆ. ಉದ್ಯಮಗಳು, ಉದ್ಯಮಿಗಳ ಅಕೌಂಟ್ಗಳನ್ನು ಮ್ಯಾನೇಜ್ ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿದಿನ ಮೀಟಿಂಗ್, ಫೈಲಿಂಗ್ಗಳನ್ನು ಮಾಡಬೇಕು. ನೆಟ್ವರ್ಕ್ ಸಮಸ್ಯೆ ಇರುವುದರಿಂದ ತಮ್ಮ ಮನೆಯಿಂದ ಒಂದು ಕಿ.ಮೀ ದೂರದಲ್ಲಿ ಟೆಂಟ್ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ ಕರಾಳತೆಗೆ ಇದು ಸಾಕ್ಷಿಯಾಗಿದೆ.
ಉದ್ಯೋಗದ ಆಫರ್ ಕಿತ್ತುಕೊಂಡ ನೆಟ್ವರ್ಕ್
ಅಪರೂಪಕ್ಕೆ ಸಿಗುತ್ತಿದ್ದ ನೆಟ್ವರ್ಕ್ ಮಳೆ ಸುರಿದಿದ್ದರಿಂದ ಮಾಯವಾಗಿತ್ತು. ಪುನಃ ನೆಟ್ವರ್ಕ್ ಸಿಕ್ಕಿದ್ದರಿಂದ ಈ -ಮೇಲ್ ಚೆಕ್ ಮಾಡಿದ ವಿನಾಯಕ್ ಪ್ರಭುಗೆ ಶಾಕ್ ಕಾದಿತ್ತು. ಸಂಸ್ಥೆಯೊಂದರಲ್ಲಿ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಆದರೆ ನೆಟ್ವರ್ಕ್ ಸಿಕ್ಕು ಈ - ಮೇಲ್ ನೋಡುವಷ್ಟರಲ್ಲಿ ಸಂದರ್ಶನದ ದಿನಾಂಕವೇ ಮುಗಿದು ಹೋಗಿತ್ತು.
ಪ್ರಧಾನಿಗೆ ಪತ್ರ ಬರೆದಿದ್ದಾಯ್ತು
ಶಾಲೆ, ಕಾಲೇಜುಗಳು ಬಂದ್ ಆಗಿವೆ. ಎಲ್ಲೆಲ್ಲೂ ಆನ್ಲೈನ್ ಕ್ಲಾಸ್ಗಳದ್ದೆ ಭರಾಟೆ. ಹಲಗೆರೆಯ ಸಂತೋಷ್, ಸಾಮಾನ್ಯ ದಿನಗಳಲ್ಲಿ ತಮ್ಮ ಮನೆಯಿಂದ ನೆಟ್ವರ್ಕ್ಗಾಗಿ 12 ಕಿ.ಮೀ ಹೋಗಬೇಕಿತ್ತು. ಈಗ ಕಠಿಣ ಲಾಕ್ಡೌನ್ ಇದೆ. ಪೊಲೀಸರು ಊರಾಚೆ ಹೋಗಲು ಬಿಡುತ್ತಿಲ್ಲ.
ವಾರಂಬಳ್ಳಿ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ಬಗ್ಗೆ ವಿನಾಯಕ್ ಪ್ರಭು ಅವರು ಪ್ರಧಾನಿ ಪತ್ರೆ ಬರೆದಿದ್ದರು. ಸಮಸ್ಯೆ ಬಗೆಹರಿಯುವ ಭರವಸೆ ಸಿಕ್ಕಿತ್ತು. ಇದರಿಂದ ಪ್ರಭಾವಿತರಾಗಿ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವರು ಪ್ರಧಾನಿ ಕಚೇರಿಗೆ ಲೆಟರ್ ಬರೆದು ಸಮಸ್ಯೆ ತಿಳಿಸಿದ್ದರು. ನಾಲ್ಕೈದು ವರ್ಷ ಕಳೆದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸಿಲ್ಲ.
ಲಾಕ್ಡೌನ್ನಿಂದ ಹೆಚ್ಚಾಯ್ತು ಸಂಕಷ್ಟ
ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿದವು. ಬೆಂಗಳೂರು ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿದ್ದವರು ಊರಿಗೆ ಬಂದರು. ಆರಂಭದಲ್ಲಿ ನೆಟ್ವರ್ಕ್ಗಾಗಿ ನೆಂಟರು, ಸ್ನೇಹಿತರ ಮನೆಗಳನ್ನು ಆಶ್ರಯಿಸಿದ್ದರು. ಈಗ ಜಿಲ್ಲೆಯಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಿದೆ. ಊರು ಬಿಟ್ಟು ಹೊರಗೆ ಹೋಗುವಂತಿಲ್ಲ. ಇದರಿಂದ ನೆಟ್ವರ್ಕ್ ಸಮಸ್ಯೆ ಉಲ್ಬಣಿಸಿದೆ.
ಡಿಜಿಟಲ್ ಇಂಡಿಯಾ ಕಲ್ಪನೆಯನ್ನೇ ಅಣಕಿಸುವಂತಿದೆ
ಶಿವಮೊಗ್ಗ ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕುರಿತು ಸಂಸದ ಬಿ.ವೈ ರಾಘವೇಂದ್ರ ಹಲವು ಭಾರಿ ಸಭೆ ನಡೆಸಿದ್ದರು. ಆದರೆ ಸಭೆಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಬಿಎಸ್ಎನ್ಎಲ್ ಅಧಿಕಾರಿಗಳು ಸಭೆಗಳಲ್ಲಿ ನೆಟ್ವರ್ಕ್ ವಿಸ್ತರಣೆ ಕುರಿತು ಗಂಭೀರವಾಗಿ ಚರ್ಚಿಸುತ್ತಾರೆ. ಆದರೆ ವಾಸ್ತವದಲ್ಲಿ ಕಾರ್ಯಗತವಾಗುವುದೆ ಇಲ್ಲ. ಖಾಸಗಿ ನೆಟ್ವರ್ಕ್ಗಳು ಲಾಭದ ಗುರಿ ಹೊಂದಿವೆ. ಹಾಗಾಗಿ ಅವುಗಳು ಕೂಡ ನೆಟ್ವರ್ಕ್ ಸ್ಥಾಪಿಸುತ್ತಿಲ್ಲ. ಒಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ನಿರ್ಲಕ್ಷಕ್ಕೆ ಗುರಿಯಾಗಿ ಈ ಭಾಗದ ಜನರು ನೆಟ್ವರ್ಕ್ ಇಲ್ಲದೆ ಬದುಕು ದೂಡುವಂತಾಗಿದೆ. ಸರ್ಕಾರದ ಡಿಜಿಟಲ್ ಇಂಡಿಯಾ ಕಲ್ಪನೆಯನ್ನೇ ಇದು ಅಣಕಿಸುವಂತಿದೆ.