ಯಡಿಯೂರಪ್ಪ ಸ್ಥಾನಕ್ಕೆ ಸಂತೋಷ್ ಬರ್ತಾರೆ: ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ, ಮೇ 6: ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮೂಲೆಗೆ ಸರಿಸಿ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರನ್ನು ಕೂರಿಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಸೋಮವಾರ ಹೇಳಿದ್ದಾರೆ.
ಜೂನ್ ನಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ : ಸೋಮಣ್ಣ ಭವಿಷ್ಯ
ಈ ಬಗ್ಗೆ ಈಗಾಗಲೇ ಬಿಜೆಪಿಯ ಕೇಂದ್ರ ನಾಯಕರು ಸುಳಿವು ನೀಡಿಯಾಗಿದೆ. ಹೈ ಕಮಾಂಡ್ ಮಟ್ಟದಲ್ಲಿ ಸಂತೋಷ್ ಅವರಿಗೆ ಪ್ರಭಾವ ಇದ್ದು, ಅವರೇ ಕರ್ನಾಟಕದಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ ಎಂದಿರುವ ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಶಕ್ತಿ ಕುಂದುತ್ತಿದ್ದಂತೆಯೇ ಶೋಭಾ ಕರಂದ್ಲಾಜೆ ಅವರ ಆಟ ಮುಗಿಯುತ್ತದೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳುತ್ತದೆ ಎಂಬ ಮಾತು ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸರಕಾರ ಬೀಳುತ್ತದೆ ಎಂಬ ಮಾತು ಕೇಳಿ ಕೇಳಿ ಸಾಕಾಗಿದೆ. ಆದ್ದರಿಂದ ಈಗ ಕಿವಿಯಲ್ಲಿ ಹತ್ತಿ ಇಟ್ಟುಕೊಂಡು ಓಡಾಡ್ತಾ ಇದ್ದೀನಿ. ಉಮೇಶ್ ಕತ್ತಿ, ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ಆಯನೂರು ಮಂಜುನಾಥ್ ಅವರೆಲ್ಲ ಸರಕಾರ ಬೀಳುತ್ತದೆ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.