ಶಿವಮೊಗ್ಗದಲ್ಲಿ ನೂರಾರು ಬಾವಲಿಗಳ ಸಾವು; ಜನರಲ್ಲಿ ಆತಂಕ
ಶಿವಮೊಗ್ಗ, ಮಾರ್ಚ್ 23: ಕೊರೊನಾದ ಭಯದಲ್ಲಿ ಜನರು ಜೀವನ ನಡೆಸುತ್ತಿದ್ದು, ಈ ನಡುವೆ ತೀರ್ಥಹಳ್ಳಿ ಪಟ್ಟಣದ ಕುವೆಂಪು ಮಾರ್ಗದಲ್ಲಿರುವ ಪ್ರವಾಸಿ ಮಂದಿರದ ಸುತ್ತ ಬಾವಲಿಗಳು ಸಾವನ್ನಪ್ಪಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿದೆ.
ಒಮ್ಮೆಲೇ ನೂರಾರು ಸಂಖ್ಯೆಯ ಬಾವಲಿಗಳು ಮೃತಪಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದ್ದು, ಬಾವಲಿಗಳ ಶವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ.ಪ್ರಕಾಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಭೇಟಿ ನೀಡಿದ್ದಾರೆ.
ತಹಶೀಲ್ದಾರ್ ಶ್ರೀಪಾದ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಬಾಹುಬಲಿಗಳು ಬಿದ್ದಿದ್ದ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬಾವಲಿ ಶವವನ್ನು ಬೆಂಗಳೂರಿನ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸತ್ತಿರುವ ಬಾವಲಿಗಳನ್ನು ಕಚ್ಚಿಕೊಂಡು ನಾಯಿಗಳು ಪಟ್ಟಣದ ಒಳಗೆ ಬರುತ್ತಿವೆ.
ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ತೀರ್ಥಹಳ್ಳಿ ಪಟ್ಟಣದ ಜನತೆ ಈಗಾಗಲೇ ಮಂಗನಕಾಯಿಲೆ, ಎಚ್1ಎನ್1 ರೋಗದಿಂದ ಕಂಗಾಲಾಗಿರುವ ಜನರು, ಬಾವಲಿಗಳ ಸಾವಿನಿಂದ ಬೇರೆ ಇನ್ಯಾವುದಾದರೂ ರೋಗ ಹರಡಬಹುದೆಂಬ ಆತಂಕದಲ್ಲಿ ಜನರು ಬದುಕುತ್ತಿದ್ದಾರೆ.