ಮಾಜಿ ಸಚಿವರಾದ ಈಶ್ವರಪ್ಪ; ಶಿವಮೊಗ್ಗದಿಂದ ಮುಂದೆ ಯಾರಿಗೆ ಸಿಗುತ್ತೆ ಮಿನಿಸ್ಟರ್ ಪಟ್ಟ?
ಶಿವಮೊಗ್ಗ, ಜುಲೈ 26: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಸಚಿವ ಸಂಪುಟವನ್ನು ವಿಸರ್ಜನೆ ಮಾಡಲಾಗಿದೆ. ಹಾಗಾಗಿ ಮುಂದಿನ ಸಿಎಂ ಯಾರಾಗುತ್ತಾರೆ ಅನ್ನುವ ಕುತೂಹಲದ ನಡುವೆ, ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಇತ್ತ ಶಿವಮೊಗ್ಗದಲ್ಲೂ ಈ ಕುರಿತು ಲೆಕ್ಕಾಚಾರಗಳು ಗರಿಗೆದರಿವೆ.
ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷ ಕಟ್ಟಿದ ಕೆ.ಎಸ್. ಈಶ್ವರಪ್ಪ ಕೂಡ ಈಗ ಮಾಜಿಯಾಗಿದ್ದಾರೆ. ನೂತನ ಮುಖ್ಯಮಂತ್ರಿಯ ಸಂಪುಟದಲ್ಲಿ ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಲಭಿಸುತ್ತದೆಯೋ, ಇಲ್ಲವೋ ಅನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಶಿವಮೊಗ್ಗದ ಸಿಎಂಗಳಿಗೆ ಸಿಗಲಿಲ್ಲ ಪೂರ್ಣಾವಧಿ ಅಧಿಕಾರ; ಯಾರೆಲ್ಲ ಎಷ್ಟು ದಿನ ಅಧಿಕಾರದಲ್ಲಿದ್ದರು?
ಹಿರಿಯ ಮುಖಂಡರಾಗಿ, ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಆರೋಗ್ಯ ಮತ್ತು ವಯಸ್ಸು ಕೂಡ ಪೂರಕವಾಗಿವೆ. ಈ ಕಾರಣಗಳಿಂದ ಕೆ.ಎಸ್. ಈಶ್ವರಪ್ಪನವರಿಗೆ ಮತ್ತೆ ಸಚಿವ ಸ್ಥಾನ ಒಲಿಯಬಹುದು ಎನ್ನಲಾಗುತ್ತದೆ.
ಸಚಿವ ಸ್ಥಾನ ಸಿಗಲ್ಲ ಅನ್ನಲು ಕಾರಣ
ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎಂದು ಹೇಳಲಾಗುತ್ತಿರುವ ವೈರಲ್ ಆಡಿಯೋದಲ್ಲಿ ಈಶ್ವರಪ್ಪರನ್ನು ಕೆಳಗಿಳಿಸುವ ಕುರಿತು ಪ್ರಸ್ತಾಪಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ಬಾರಿಯೂ ಈಶ್ವರಪ್ಪ ಸಚಿವರಾಗಿದ್ದರು. ಉಪ ಮುಖ್ಯಮಂತ್ರಿಯೂ ಆಗಿದ್ದರು. ಈಗ ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಈಶ್ವರಪ್ಪನವರಿಗೆ ಕೊಕ್ ಕೊಡುವ ಸಂಭವವಿದೆ.
ಮತ್ಯಾರಿಗೆ ಸಿಗಬಹುದು ಸಚಿವ ಸ್ಥಾನ?
ಒಂದು ವೇಳೆ ಕೆ.ಎಸ್. ಈಶ್ವರಪ್ಪರಿಗೆ ಸಚಿವ ಸ್ಥಾನ ಕೈ ತಪ್ಪಿದರೆ ಶಿವಮೊಗ್ಗ ಜಿಲ್ಲೆಯ ಯಾವ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.
ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಹಿರಿಯ ಶಾಸಕರ ಪೈಕಿ ಒಬ್ಬರು. ಸಚಿವರಾಗುವ ಅರ್ಹತೆ ಇದೆ. ಜಾತಿವಾರು ಲೆಕ್ಕಚಾರದ ಪ್ರಕಾರ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೈಕಮಾಂಡ್ ದೃಷ್ಟಿಯಲ್ಲಿ ಕ್ಲೀನ್ ಹ್ಯಾಂಡ್ ಎಂಬ ಅಭಿಪ್ರಾಯವಿದೆ. ಹಾಗಾಗಿ ಸಚಿವ ಸ್ಥಾನ ಲಭಿಸಬಹುದು ಎಂಬ ವಾದವಿದೆ.
ಬಂಗಾರಪ್ಪ ಪುತ್ರ ಎಂಬುದು ಪ್ಲಸ್ ಪಾಯಿಂಟ್
ಸೊರಬ ಶಾಸಕ ಕುಮಾರ್ ಬಂಗಾರಪ್ಪ
ಹರತಾಳು ಹಾಲಪ್ಪ ಅವರು ಒಮ್ಮೆ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಆಡಳಿತದ ಅನುಭವವಿದೆ. ಪ್ರಬಲ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಯಸ್ಸು, ಆರೋಗ್ಯದ ವಿಚಾರದಲ್ಲಿ ತೊಂದರೆ ಇಲ್ಲ. ಹಾಗಾಗಿ ಇವರಿಗೆ ಅವಕಾಶ ಸಿಗುವ ಲೆಕ್ಕಾಚಾರವು ಇದೆ.
ಕುಮಾರ್ ಬಂಗಾರಪ್ಪ ಕೂಡ ಈ ಹಿಂದೆ ಸಚಿವರಾಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಎಂಬುದು ಪ್ಲಸ್ ಪಾಯಿಂಟ್. ಈಡಿಗ ಸುಮುದಾಯಕ್ಕೆ ಸೇರಿದವರು. ಸಮರ್ಥವಾಗಿ ಸಚಿವ ಸ್ಥಾನ ನಿಭಾಯಿಸಬಹುದು ಎಂಬ ಲೆಕ್ಕಾಚಾರವಿದೆ.
ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ
ಈಡಿಗ ಸಮುದಾಯಕ್ಕೆ ಸೇರಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಸಚಿವ ಸ್ಥಾನದ ರೇಸ್ಲ್ಲಿದ್ದಾರೆ. ಒಂದು ವೇಳೆ ಸುನಿಲ್ ಕುಮಾರ್ರಿಗೆ ಸಚಿವ ಸ್ಥಾನ ಖಚಿತವಾದರೆ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಅವರು ಸಚಿವ ಸ್ಥಾನದ ರೇಸ್ನಿಂದ ಹೊರಗುಳಿಯಬಹುದು ಎಂದು ಹೇಳಲಾಗುತ್ತಿದೆ.
ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನುವ ಲೆಕ್ಕಾಚಾರದ ನಡುವೆ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಾರು ಅನ್ನುವ ಕುತೂಹಲವು ಗರಿಗೆದರಿದೆ. ವಾರಾಂತ್ಯದೊಳಗೆ ಈ ಲೆಕ್ಕಾಚಾರಕ್ಕೆಲ್ಲ ಬ್ರೇಕ್ ಬೀಳುವ ಸಂಭವವಿದೆ.