ಭದ್ರಾ ಜಲಾಶಯದಿಂದ ನಾಲ್ಕು ಕ್ಲಸ್ಟರ್ ಗೇಟ್ ಗಳ ಮೂಲಕ ನೀರು ಬಿಡುಗಡೆ
Recommended Video
ಭದ್ರಾವತಿ, ಜುಲೈ.24: ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. 186 ಅಡಿ ಎತ್ತರವಿರುವ ಭದ್ರಾ ಜಲಾಶಯದಲ್ಲಿ 183.5 ಅಡಿ ನೀರು ತುಂಬಿರುವ ಹಿನ್ನಲೆಯಲ್ಲಿ ಅಣೆಕಟ್ಟೆಯ ಗೇಟನ್ನು ತೆರೆದು, ನದಿಗೆ ನೀರು ಬಿಡಲಾಗಿದೆ.
ಭದ್ರ ಡ್ಯಾಂ ಕಳೆದ ಮೂರು-ನಾಲ್ಕು ವರ್ಷ ತುಂಬಿರಲಿಲ್ಲ. ಆದರೆ ಈ ಬಾರಿಯ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಭದ್ರಾ ಅಣೆಕಟ್ಟು ಜುಲೈ ತಿಂಗಳಲ್ಲಿ ಮೈದುಂಬಿಕೊಂಡು ಹರಿಯುತ್ತಿದೆ.
ಲಿಂಗನಮಕ್ಕಿ ಜಲಾಶಯ ಭರ್ತಿ, ಪ್ರವಾಹದ ಎಚ್ಚರಿಕೆ
ನಾಲ್ಕು ಕ್ರಸ್ಟ್ ಗೇಟ್ ಗಳನ್ನು ಅರ್ಧ ಫೂಟ್ ನಷ್ಟು ತೆರೆದು, ಒಟ್ಟು 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿಗೆ 6.300 ಕ್ಯೂಸೆಕ್ ನೀರು, ಉಳಿದ 3700 ಕ್ಯೂಸೆಕ್ಸ್ ನೀರನ್ನು ಭದ್ರ ಎಡ ಮತ್ತು ಬಲ ದಂಡೆ ನಾಲೆಗೆ ಬಿಡಲಾಗಿದೆ.
ಅಣೆಕಟ್ಟೆಯ ಇಂಜಿನಿಯರ್ ಗಳಿಂದ ಪೂಜೆ ಸಲ್ಲಿಸಿ ನಾಲ್ಕು ಕ್ಲಸ್ಟರ್ ಗೇಟ್ ಮೂಲಕ ನೀರು ಹರಿಸಲಾಗಿದ್ದು, ಕಾಡ ಆಡಳಿತ ಅಧಿಕಾರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಚೀಫ್ ಇಂಜಿನಿಯರ್ ಆರ್.ಪಿ ಕುಲಕರ್ಣಿ ಮಾತನಾಡಿ, ಭದ್ರಾ ಜಲಾನಯನ ಪ್ರದೇಶದಲ್ಲಿ ಈ ಭಾರಿ ಭರ್ಜರಿ ಮಳೆಯಾಗಿರುವುದರಿಂದ ಭದ್ರ ಅಣೆಕಟ್ಟು ತುಂಬುವ ಹಂತಕ್ಕೆ ತಲುಪಿದೆ.
ನದಿಗೆ ಈಗ 23 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹಾಗೂ ಎಡ ಮತ್ತು ಬಲದಂಡೆ ನಾಲೆಗೆ ಬಿಡಲಾಗುತ್ತಿದೆ ಎಂದರು.
ಈಗ ನಾವು ಇಂಜಿನಿಯರ್ ಗಳು ಪೂಜೆ ಮಾಡಿ ಡ್ಯಾಂನ ಗೇಟ್ ತೆರೆದಿದ್ದೇವೆ. ಆದರೆ ಮುಂದಿನ ವಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬಂದು ಬಾಗಿನ ಕೊಡುವ ನಿರೀಕ್ಷೆ ಇದೆ ಎಂದರು.
ಎಕ್ಸಿಕ್ಯೂಟಿವ್ ಇಂಜಿನಿಯರ್ ವೆಂಕಟೇಶ್ ಎಡಬ್ಲೂ ಮಂಜುನಾಥ್ ಮೊದಲಾದವರು ಬಿಆರ್ ಪಿ ವೃತ್ತ ಅಭಿಯಂತರ ದಿವಾಕರ್ ನಾಯ್ಕ್ ಪೂಜೆ ಸಲ್ಲಿಸುವಾಗ ಉಪಸ್ಥಿತರಿದ್ದರು.