ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳ ಚಿನ್ನಾಟ; ಕಣ್ತುಂಬಿಕೊಳ್ಳಲು ಬರ್ತಿದ್ದಾರೆ ಜನ
ಶಿವಮೊಗ್ಗ, ಫೆಬ್ರವರಿ 4: ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ಕೆರೆಯಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ಇವುಗಳ ಚಲನವಲನ, ಚಿನ್ನಾಟವನ್ನು ಕಣ್ತುಂಬಿಕೊಳ್ಳಲು, ಮೊಬೈಲ್ ನಲ್ಲಿ ಸೆರೆ ಹಿಡಿಯಲು ಹಲವರು ಕೆರೆ ಬಳಿಗೆ ಬರುತ್ತಿದ್ದಾರೆ.
ಕಳೆದ ಕೆಲವು ದಿನದಿಂದ ದೊಡ್ಡ ಸಂಖ್ಯೆಯಲ್ಲಿ ನೀರು ನಾಯಿಗಳು ಗಣಪತಿ ಕೆರೆಯಲ್ಲಿ ಪ್ರತ್ಯಕ್ಷವಾಗಿವೆ. ಕೆರೆಯಲ್ಲಿ ಇರುವ ಮೀನುಗಳನ್ನು ಹಿಡಿದು ತಿನ್ನುತ್ತಿರುವ ನೀರು ನಾಯಿಗಳು, ಸ್ಥಳೀಯರ ಆಕರ್ಷಣೆಯಾಗಿವೆ.
ಮಾಲ್ಗುಡಿ ಮ್ಯೂಸಿಯಂಗೆ ಹೋಗುವ ಪ್ರವಾಸಿಗರ ಗಮನಕ್ಕೆ
ಶರಾವತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ ಉಪ ನದಿಗಳ ಮೂಲಕ ಸಾಗರ ಪಟ್ಟಣದ ಗಣಪತಿ ಕೆರೆಗೆ ನೀರು ನಾಯಿಗಳು ಬಂದಿರುವ ಸಾಧ್ಯತೆ ಇದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಆಗಿರುವುದರಿಂದ ಇವುಗಳಿಗೆ ಹಾನಿ ಮಾಡಿದರೆ ಅರಣ್ಯ ಇಲಾಖೆ ಕೇಸ್ ದಾಖಲು ಮಾಡುತ್ತದೆ.
ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ಸಂಕಷ್ಟ
ಗಣಪತಿ ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ನೀರು ನಾಯಿಗಳು ಭಾರಿ ಸಂಕಷ್ಟ ತಂದೊಡ್ಡಿದೆ. ಗೆಂಡೆ, ಕಾಟ್ಲಾ, ಗೌರಿ, ಮೃಗಾಲ, ರೋವು, ಬೆಳ್ಳಿಗೆಂಡೆ, ಹುಲ್ಲುಗೆಂಡೆ ಜಾತಿಯ ಮೀನುಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಪ್ರತಿ ಮೀನು ಈಗ 10 ರಿಂದ 12 ಕೆಜಿ ತೂಗುತ್ತವೆ. ಆದರೆ ನೀರು ನಾಯಿಗಳ ಗುಂಪು ಪ್ರತಿದಿನ ನೂರಾರು ಮೀನುಗಳನ್ನು ಹಿಡಿದು ತಿನ್ನುತ್ತಿವೆ.
ಮೀನುಗಾರರ ಸಹಕಾರ ಸಂಘದವರು ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದಿದ್ದಾರೆ. ಈ ಕುರಿತು ಮಾತನಾಡಿದ ಮೀನುಗಾರರಾದ ಭೈರಪ್ಪ, ಕೆರೆ ಸ್ವಚ್ಛವಾಗಿದೆ. ನೀರು ನಾಯಿಗಳಿಗೆ ಮೀನು ಸುಲಭವಾಗಿ ಕಾಣಿಸುತ್ತವೆ. ಪ್ರತಿದಿನ ನೀರು ನಾಯಿಗಳು ಅವುಗಳನ್ನು ಹಿಡಿದು ತಿನ್ನುತ್ತಿವೆ. ನಾವು ಬಲೆ ಹಾಕಿದರೆ ಬೆರಳೆಣಿಕೆಯಷ್ಟು ಮೀನುಗಳು ಮಾತ್ರ ಸಿಗುತ್ತಿವೆ. ಹಾಗಾಗಿ ಅವುಗಳನ್ನು ಓಡಿಸಲು ಯತ್ನಿಸುತ್ತಿದ್ದೇವೆ ಅನ್ನುತ್ತಾರೆ.
ನೀರು ನಾಯಿಗಳ ಗುಂಪು ಹೆಚ್ಚು ಸಮಯ ಒಂದೆ ಕಡೆ ಇರುವುದಿಲ್ಲ. ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿರುತ್ತವೆ. ಸದಾ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ.