ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ವಿಐಎಸ್ಎಲ್ ನ ಕಾರ್ಮಿಕರು
ಭದ್ರಾವತಿ, ಮೇ 31: ಇಲ್ಲಿನ ವಿಐಎಸ್ಎಲ್ ನ ಸಾವಿರಾರು ಮಂದಿ ಕಾರ್ಮಿಕರು ಮಂಗಳವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ವಿಐಎಸ್ಎಲ್ ಕಾರ್ಖಾನೆಗೆ ಗಣಿ ಮಂಜೂರು ಮಾಡಿ ಹಾಗೂ ಖಾಸಗಿಯವರಿಗೆ ಕಾರ್ಖಾನೆ ಹಸ್ತಾಂತರ ಮಾಡುವ ನಿರ್ಧಾರವನ್ನು ಕೈ ಬಿಡಿ ಎಂಬುದು ಅವರ ಒತ್ತಾಯವಾಗಿತ್ತು.
ಕಾರ್ಖಾನೆಯ ಮುಂಭಾಗದಿಂದಲೇ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಮಿಕರು, ಅಂಬೇಡ್ಕರ್ ವೃತ್ತದ ಬಳಿ ರಸ್ತೆ ತಡೆ ನಡೆಸಿದರು. ಆ ನಂತರ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾರ್ಮಿಕ ಮುಖಂಡರೊಬ್ಬರು ಮಾತನಾಡಿ, ಮೂವತ್ತು ವರ್ಷಗಳಿಂದ ವಿಐಎಸ್ ಎಲ್ ಮತ್ತು ಎಂಪಿಎಂ ಕಾರ್ಖಾನೆ ಪ್ರಗತಿ ಕುಂಠಿತವಾಗಿದೆ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದರು.[ಪ್ರೇಮ ನಿರಾಕರಣೆ: ಭದ್ರಾವತಿಯಲ್ಲಿ ಯುವಕನ ಮೇಲೆ ಯುವತಿ ಹಲ್ಲೆ!]
ಕಾರ್ಖಾನೆಗಳ ಇಂದಿನ ದುಃಸ್ಥಿತಿಗೆ ಆಳುವ ಸರಕಾರಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ. ಈಗಲಾದರೂ ಸರಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು. ಮತ್ತೊಬ್ಬ ಮುಖಂಡ ಮಾತನಾಡಿ, ಕಾರ್ಖಾನೆಗೆ ಗಣಿ ಮಂಜೂರು ಮಾಡುವ ಪ್ರಕ್ರಿಯೆ ನಿಧಾನವಾಗಿ ಸಾಗುತ್ತಿದೆ. ಇಂಥ ಧೋರಣೆ ಖಂಡಿಸಿ, ಪ್ರತಿಭಟಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಹೇಳಿದರು.