ಮೂಟೆಯಲ್ಲಿ ಚಿಲ್ಲರೆ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!
ಶಿವಮೊಗ್ಗ, ಏಪ್ರಿಲ್ 06 : ಮೂಟೆಯಲ್ಲಿ ಹಣ ತಂದು ಪಕ್ಷೇತರ ಅಭ್ಯರ್ಥಿಯೊಬ್ಬರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 23ರಂದು ಶಿವಮೊಗ್ಗದಲ್ಲಿ ಚುನಾವಣೆ ನಡೆಯಲಿದೆ.
ವಿದ್ಯಾರ್ಥಿ ಸಂಘಟನೆ ಮುಖಂಡ ವಿನಯ್ ರಾಜಾವತ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎತ್ತಿನಗಾಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅವರು ಗಮನ ಸೆಳೆದರು.
ನಾಮಪತ್ರ ಸಲ್ಲಿಸಲು ಪಾವತಿಸಬೇಕಾದ ಶುಲ್ಕ 12,500 ರೂ.ಗಳನ್ನು 1 ಮತ್ತು 2 ರೂ. ನಾಣ್ಯದ ಮೂಲಕ ಅವರು ಪಾವತಿ ಮಾಡಿದ್ದಾರೆ. ಎತ್ತಿನ ಗಾಡಿಯಲ್ಲಿ ಚಿಲ್ಲರೆಗಳು ತುಂಬಿದ್ದ ಮೂಟೆಯನ್ನು ತೆಗೆದುಕೊಂಡು ಬಂದ ಅವರು, ಚುನಾವಣಾಧಿಕಾರಿಗಳಿಗೆ ನೀಡಿದರು.
ಹೆಲಿಕಾಪ್ಟರ್ನಲ್ಲೇ ಪ್ರಚಾರ ಮಾಡ್ತಾರಂತೆ ಶಿವಮೊಗ್ಗದ ಅಭ್ಯರ್ಥಿ!
ಚಿಲ್ಲರೆ ಮೂಟೆ ಕಂಡು ದಂಗಾದ ಜಿಲ್ಲಾಧಿಕಾರಿಗಳ ಕಚೇರಿಯ ಭದ್ರತೆ ವಹಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿ ಒಳಗೆ ಬಿಟ್ಟರು. ಅಷ್ಟು ಚಿಲ್ಲರೆ ಎಣಿಸಲು ಸಮಯವಿಲ್ಲದ ಅಧಿಕಾರಿಗಳು ಮೂಟೆಯನ್ನು ಇಟ್ಟುಕೊಂಡು ನಾಮಪತ್ರ ಪಡೆದುಕೊಂಡರು.
ಶಿವಮೊಗ್ಗದಲ್ಲಿ ಯಡಿಯೂರಪ್ಪರದ್ದೇ ಹವಾ, ಗೆಲ್ಲೋದು ರಾಘಣ್ಣನೇ: ಬಿವೈವಿ
ಹೆಲಿಕಾಪ್ಟರ್ನಲ್ಲಿ ಬಂದಿದ್ದರು : ವಿನಯ್ ರಾಜಾವತ್ 2018ರ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಣಕ್ಕಿಳಿದಿದ್ದರು. ಆಗ ನಾಮಪತ್ರ ಸಲ್ಲಿಸಲು ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಚುನಾವಣೆಯಲ್ಲಿ 459 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.
ಏಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.